ಕಡಬ: ಬಡ ಯುವಕ ಉಮೇಶ್ರಿಗೆ ಬೇಕಿದೆ ಸಹೃದಯರ ಸಹಾಯಹಸ್ತ

ಕಡಬ, ಆ.4: ಮೆದುಳು ಹಾಗೂ ನರಗಳ ಮಾರಕ ರೋಗದೊಂದಿಗೆ ಯಾತನಾಮಯ ಜೀವನ ನಡೆಸುತ್ತಿರುವ ಕುಟ್ರುಪ್ಪಾಡಿ ಗ್ರಾಮದ ಚೇವುಡೇಲು ಎಂಬಲ್ಲಿನ ಬಡ ಕುಟುಂಬದ ಯುವಕ ಉಮೇಶ್ ಎಂಬವರ ಚಿಕಿತ್ಸೆಗೆ ದಾನಿಗಳ ಸಹಾಯ ಹಸ್ತ ಬೇಕಾಗಿದೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿರುವ ಕಮಲ ಎಂಬವರಿಗೆ ಎರಡು ಗಂಡು ಹಾಗೂ ಒಬ್ಬರು ಹೆಣ್ಣು ಮಗಳು. ಈ ಪೈಕಿ ಮೊದಲನೆಯ ಮಗ ಉಮೇಶ್ (22) ಕಾಯಿಲೆ ಬಿದ್ದು ಒಂದೂವರೆ ವರ್ಷವಾಯಿತು. ಮೆದುಳು ಹಾಗೂ ನರಗಳ ಮಾರಕ ಕಾಯಿಲೆಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡು ಜೀವನ ಉತ್ಸಾಹವನ್ನೆ ಕಳೆದುಕೊಂಡು ಬದುಕು ಸಾಗಿಸುತ್ತಿದ್ದಾರೆ.
ಸದ್ಯ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ ಮೂರು ಲಕ್ಷ ರೂ. ವೆಚ್ಚವಾಗಿದ್ದು, ಈಗಾಗಲೇ ಸಾಲ ಮಾಡಿ ಸುಮಾರು 1.5 ಲಕ್ಷ ರೂ. ಆಸ್ಪತ್ರೆಗೆ ಪಾವತಿಸಲಾಗಿದೆ. ಇನ್ನು ಒಂದೂವರೆ ಲಕ್ಷ ರೂ. ಪಾವತಿಸಲು ಬಾಕಿಯಿದ್ದು, ಹಣವಿಲ್ಲದೆ ಅಸಹಾಯಕರಾಗಿದ್ದಾರೆ. ಕೂಲಿ ಕೆಲಸ ಮಾಡುತ್ತಾ ಜೀವನ ಮಾಡುತ್ತಿರುವ ಈ ಕುಟುಂಬ ಆಸ್ಪತ್ರೆ ಚಿಕಿತ್ಸಾ ವೆಚ್ಚ ಭರಿಸಲಾಗದೆ ದಾನಿಗಳು ಹಾಗೂ ಸಂಘಸಂಸ್ಥೆಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಸಹಾಯ ಮಾಡಲು ಇಚ್ಛಿಸುವವರು ಸ್ಟೆಟ್ ಬ್ಯಾಂಕ್ ಆಫ್ ಮೈಸೂರು ಕಡಬ ಶಾಖೆಯಲ್ಲಿರುವ ಕಮಲ ಅವರ ಉಳಿತಾಯ ಖಾತೆ ಸಂಖ್ಯೆ: 64145996699 (IFSC Code: SBMY 0040953) ಗೆ ಜಮೆ ಮಾಡಬಹುದು ಎಂದು ಮನವಿ ಮಾಡಿದ್ದಾರೆ.







