ಸಂತ್ರಸ್ತರಿಗೆ ಇಲಾಖೆಯಿಂದ ವಂಚನೆ: ಆರೋಪ್ರ
ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ವೀರಾಜಪೇಟೆ, ಆ.4: ತಿತಿಮತಿ ಬಳಿಯ ದೇವಮಚ್ಚಿ ಅರಣ್ಯ ಪ್ರದೇಶ, ಮಜ್ಜಿಗೆ ಹಳ್ಳ ಸುತ್ತ ಮುತ್ತಲ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿದ್ದ ಸುಮಾರು 180 ಕುಟುಂಬದ ಸಂತ್ರಸ್ತರಿಗೆ ಪುನರ್ವಸತಿ ಯೋಜನೆಯಲ್ಲಿ ಅರಣ್ಯ ಇಲಾಖೆಯು ವಂಚಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆದ್ದರಿಂದ ಗೂಡ್ಲೂರು ಗ್ರಾಮದಲ್ಲಿ ಪುನರ್ವಸತಿ ಯೋಜನೆಯಲ್ಲಿ ನೆಲೆ ನಿಂತಿರುವ ಸಂತ್ರಸ್ತ ಕುಟುಂಬಗಳು ಜಾತ್ಯತೀತ ಜನತಾದಳದ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ.
ಗೂಡ್ಲೂರಿನ ಸಮುದಾಯ ಭವನದಲ್ಲಿ ನಡೆದ ಸಂತ್ರಸ್ತ ಕುಟುಂಬಗಳ ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಷ್ಕರದಲ್ಲಿ, ಕುಟುಂಬದ ಪುರುಷರು, ಮಹಿಳೆಯರು, ಮಕ್ಕಳು ಪಾಲ್ಗೊಳ್ಳುವಂತೆ ಸಭೆ ನಿರ್ಧರಿಸಿತು.
ಗೂಡ್ಲೂರು ಸಂತ್ರಸ್ತರ ಮುಷ್ಕರ ನಿರ್ಧಾರದ ಪೂರ್ವಭಾವಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂಕೇತ್ ಪೂವಯ್ಯ ಅವರು, ಕೊಡಗಿನ ಆನೆ ಚೌಕೂರು, ದೇವಮಚ್ಚಿ, ಮಜ್ಜಿಗೆ ಹಳ್ಳ ವಿವಿಧ ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡು 5ಎಕರೆಯಿಂದ 8ಎಕರೆವರೆಗೆ ಕೃಷಿ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದ 180 ಕುಟುಂಬಗಳನ್ನು ಅರಣ್ಯ ಕಾಯ್ದೆಯನ್ನು ಅನುಸರಿಸಿ 1978ರಲ್ಲಿ ಚನ್ನನಕೋಟೆ ಗ್ರಾಪಂ ವ್ಯಾಪ್ತಿಯ ಚನ್ನಂಗಿ ಮೂಡಾಬೈಲು, ಗೂಡ್ಲೂರು ಅರಣ್ಯ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಸ್ಥಳಾಂತರದ ಸಂದರ್ಭದಲ್ಲಿ ತಿತಿಮತಿಯ ಅರಣ್ಯ ಇಲಾಖೆಯ ಅಧಿಕಾರಿಗಳು, ಕುಟುಂಬಗಳಿಗೆ ತಲಾ 5 ಎಕರೆ ಜಾಗ 5,000 ರೂ. ನೀಡಿ ಎಲ್ಲ ಕುಟುಂಬಗಳಿಗೂ ಮೂಲ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಒತ್ತಾಯ ಹಾಗೂ ಭರವಸೆ ಮೇರೆ ಕುಟುಂಬಗಳು ಕೃಷಿ ಮಾಡಿದ ತೋಟ, ಗದ್ದೆಯನ್ನು ತೊರೆದು ಗೂಡ್ಲೂರು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಗೊಂಡರು. ಆದರೆ, ಅಲ್ಲಿ ಸಂತ್ರಸ್ತ ಕುಟುಂಬಗಳಿಗೆ ತಲಾ 1ಎಕರೆಯಿಂದ 2ಎಕರೆವರೆಗೆ ಜಾಗ, 5,000 ರೂ. ಮಾತ್ರ ನೀಡಲಾಯಿತು. ಈ ಸಣ್ಣ ಪ್ರಮಾಣದ ಜಾಗದಲ್ಲಿ ಕೃಷಿ ಮಾಡಿ ಜೀವನ ನಡೆಸಲು ಆಗುತ್ತಿಲ್ಲ. ಅರಣ್ಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಮನವಿಗೆ ಸ್ಪಂದಿಸದ ಕಾರಣ ಆರ್ಥಿಕವಾಗಿ ಹಿಂದುಳಿದು ದುಸ್ತರ ಜೀವನ ಸಾಗಿಸುವಂತಾಗಿದೆ. ದಿನದ ಕೂಳಿಗೂ ಗತಿ ಇಲ್ಲದೆ ಎಲ್ಲ ಕುಟುಂಬಗಳು ಸಂಕಷ್ಟದಲ್ಲಿವೆ. ಈ ಕುಟುಂಬಗಳಿಗೆ ಪರಿಹಾರ ಒದಗಿಸಲೇಬೇಕು. ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಶ್ ಮಾತನಾಡಿದರು.
ಪೂರ್ವಭಾವಿ ಸಭೆಯಲ್ಲಿ ಪಿ.ವಿ.ರೆನ್ನಿ, ಗೂಡ್ಲೂರು ಸಂತ್ರಸ್ತರ ಪ್ರಮುಖರಾದ ಜಿ.ಬಿ.ಸೋಮಯ್ಯ, ಎಂ.ಕೆ. ರಘುನಂದ, ಎಂ.ಕೆ.ವಸಂತ್. ಕಿರಣ್,ಧನಂಜಯ್, ಕುಟುಂಬದ ಪುರುಷರು, ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.







