ಪತಿಯ ಜಾಮೀನಿಗಾಗಿ ಮಗು ಮಾರಲೆತ್ನಿಸಿದ ಮಹಿಳೆಗೆ ನೆರವು
ಕುಂದಾಪುರ, ಆ.4: ಕೊಲೆ ಆರೋಪಿ ಪತಿಯ ಜಾಮೀನಿಗಾಗಿ ತನ್ನ ಮಕ್ಕಳನ್ನೇ ಮಾರಾಟ ಮಾಡಲು ಯತ್ನಿಸಿದ ಮಹಿಳೆಯೊಬ್ಬರಿಗೆ ಮಕ್ಕಳ ಸಾಗಾಟ ನಿಷೇಧ ಸಮಿತಿಯ ಕಾರ್ಯಕರ್ತೆಯರು ಹಣಕಾಸಿನ ನೆರವು ನೀಡಿದ ಘಟನೆ ಕುಂದಾಪುರದ ಖಾರ್ವಿಕೇರಿಯಲ್ಲಿ ನಡೆದಿದೆ.
ಬ್ರಹ್ಮಾವರ ಮೂಲದ ಮಹಿಳೆಯೊಬ್ಬರು ಕುಂದಾಪುರದ ಖಾರ್ವಿಕೇರಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಇವರ ಪತಿ ಕಾರ್ಕಳದಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದಾರೆ. ತನ್ನ ಪತಿಯ ಜಾಮೀನಿಗೆ ಹಣ ಹೊಂದಿಸುವುದಕ್ಕಾಗಿ ಮಹಿಳೆ ತನ್ನ ಮಕ್ಕಳನ್ನು ಮಾರಲು ಮುಂದಾಗಿದ್ದರು. ವಿಷಯ ತಿಳಿದ ಮಕ್ಕಳ ಸಾಗಾಟ ನಿಷೇಧ ಸಮಿತಿಯ ಪ್ರಮುಖರು ಆಕೆಯ ಮನವೊಲಿಸಿದ್ದಾರೆ. ರಕ್ಷಣಾ ಘಟಕದವರೊಡನೆ ತೆರಳಲು ನಿರಾಕರಿಸಿರುವ ಮಹಿಳೆ ಪತಿಗೆ ಜಾಮೀನು ದೊರಕಿಸಿ ಕೊಡುವಂತೆ ಬೇಡಿಕೊಂಡರು. ಇದಕ್ಕೆ ಸ್ಪಂದಿಸಿದ ಮಕ್ಕಳ ಸಾಗಾಟ ನಿಷೇಧ ಕಾರ್ಯಕರ್ತೆಯರು ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಬಳಿ ಹಣ ಸಂಗ್ರಹಿಸಿ ಗುರುವಾರ ಕುಂದಾಪುರ ಠಾಣಾಧಿಕಾರಿ ನಾಸಿರ್ ಹುಸೇನ್ ಉಪಸ್ಥಿತಿಯಲ್ಲಿ 26,000ರೂ. ಹಣವನ್ನು ಮಹಿಳೆಗೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಕ್ಕಳ ಸಾಗಾಟ ನಿಷೇಧ ಸಮಿತಿಯ ಅಧ್ಯಕ್ಷೆ ಗುಣರತ್ನಾ, ರವಿಕಲಾ ಗಣೇಶ್, ಮಕ್ಕಳ ಶ್ರೇಯೋಭಿವೃದ್ದಿ ಸಮಿತಿಯ ಉಷಾ.ಕೆ ಮತ್ತಿತರರು ಉಪಸ್ಥಿತರಿದ್ದರು.