ಮಂಗಳೂರು: ಹಜ್ ಯಾತ್ರಿಕರ ಎರಡನೆ ತಂಡ ನಿರ್ಗಮನ

ಮಂಗಳೂರು, ಆ.5: ಕೇಂದ್ರ ಹಜ್ ಸಮಿತಿ ವತಿಯಿಂದ ಹಜ್ ಯಾತ್ರೆ ಕೈಗೊಂಡಿರುವ ಯಾತ್ರಿಕರ ಪೈಕಿ ಮಂಗಳೂರಿನಿಂದ ಎರಡನೆ ತಂಡ ಇಂದು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ.
ಎರಡನೆ ತಂಡದಲ್ಲಿ 78 ಪುರುಷರು ಹಾಗೂ 76ಮಹಿಳೆಯರ ಸಹಿತ ಒಟ್ಟು 154 ಯಾತ್ರಾರ್ಥಿಗಳಿದ್ದು, ಮಧ್ಯಾಹ್ನ 12:05ಕ್ಕೆ ವಿಶೇಷ ವಿಮಾನ ಏರ್ ಇಂಡಿಯಾದಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಬಜ್ಪೆಯ ಹಳೆ ವಿಮಾನ ನಿಲ್ದಾಣದಲ್ಲಿ ಗುರುವಾರದಿಂದಲೇ ಆಶ್ರಯ ಪಡೆದಿದ್ದ ಹಜ್ ಯಾತ್ರಿಕರನ್ನು ಶುಕ್ರವಾರ ಬೆಳಗ್ಗೆ 8 ಗಂಟೆಯ ಬಳಿಕ ವಿಶೇಷ ಬಸ್ ಸೌಲಭ್ಯದ ಮೂಲಕ ಹೊಸ ಏರ್ಪೋರ್ಟ್ಗೆ ಕರೆ ತರಲಾಯಿತು.
ತಡ ರಾತ್ರಿ ತಲುಪಿದ ಪ್ರಥಮ ತಂಡ
ಗುರುವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟ ಹಜ್ ಯಾತ್ರಿಕರ ಪ್ರಥಮ ತಂಡವು ಶುಕ್ರವಾರ ಮುಂಜಾನೆ ಭಾರತೀಯ ಕಾಲಮಾನ ಸುಮಾರು 1ಗಂಟೆ ಹೊತ್ತಿಗೆ ಮದೀನಾ ಭೂ ಸ್ಪರ್ಶ ಮಾಡಿದೆ.
ಪೂರ್ವಾಹ್ನ 11:05 ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸಿದ್ದ ಪ್ರಥಮ ತಂಡವು ಇಂಧನ ತುಂಬಿಸುವ ಸಲುವಾಗಿ ಶಾರ್ಜಾದಲ್ಲಿ ಭೂ ಸ್ಪರ್ಷ ಮಾಡಿತ್ತು. ಕೇವಲ 20 ನಿಮಿಷಗಳಲ್ಲೇ ಹಾರಾಟ ಮಾಡಬೇಕಿದ್ದ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಕೆಲವು ತಾಸುಗಳ ಕಾಲ ಶಾರ್ಜಾದಲ್ಲೇ ಬಾಕಿಯಾಗಿತ್ತು. ಕೊನೆಗೂ ಟೇಕ್ಓವರ್ ಮಾಡಿದ ವಿಮಾನವು 10:45ಕ್ಕೆ (ಭಾರತೀಯ ಕಾಲಮಾನ ಇಂದು ಮುಂಜಾನೆ 1:15) ಮದೀನಾ ತಲುಪಿದೆ.





