ಶಾಸ್ತ್ರ ಹೇಳಿ ಗಾಳ ಇಕ್ಕಿದ ಕೇಜ್ರಿವಾಲ್
‘ಆಮ್ ಆದ್ಮಿಯ ಸಿಎಂ’ ನಿಂದ ಹೊಸ ಜನವಿರೋಧಿ ನಿರ್ಬಂಧ
![ಶಾಸ್ತ್ರ ಹೇಳಿ ಗಾಳ ಇಕ್ಕಿದ ಕೇಜ್ರಿವಾಲ್ ಶಾಸ್ತ್ರ ಹೇಳಿ ಗಾಳ ಇಕ್ಕಿದ ಕೇಜ್ರಿವಾಲ್](https://www.varthabharati.in/sites/default/files/images/articles/2016/08/5/Arvind-Kejriwal-2AFP.jpg)
ನವದೆಹಲಿ, ಆ.5: ದೆಹಲಿಯ ಆಮ್ ಆದ್ಮಿಯ ಮುಖ್ಯಮಂತ್ರಿಯೆಂದೇ ಜನಜನಿತರಾಗಿರುವ ಅರವಿಂದ್ ಕೇಜ್ರಿವಾಲ್ ಇದೀಗ ಆಮ್ ಆದ್ಮಿಯಿಂದ ದೂರವಾಗುವ ಪ್ರಯತ್ನ ಮಾಡಿದ್ದಾರೆಯೇ ? ಇಂತಹ ಒಂದು ಸಂಶಯ ಅವರ ಇತ್ತೀಚಿಗಿನ ಒಂದು ಜನವಿರೋಧಿ ನಿರ್ಬಂಧದಿಂದ ಮೂಡಿದೆ. ತಮ್ಮ ಧರಣಿ ರಾಜಕೀಯದಿಂದಲೇ ಪ್ರವರ್ಧಮಾನಕ್ಕೆ ಬಂದು ದೆಹಲಿಯ ಮುಖ್ಯಮಂತ್ರಿಯೂ ಆದ ಕೇಜ್ರಿವಾಲ್ ಇದೀಗ ತಮ್ಮ ಅಧಿಕೃತ ನಿವಾಸದ ಹೊರಗೆ ಧರಣಿಗಳನ್ನು ನಿಷೇಧಿಸಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿ ಸರಕಾರದ ಸಬ್-ಡಿವಿಷನಲ್ ಮ್ಯಾಜಿಸ್ಟ್ರೇಟ್ ಆದೇಶವೊಂದನ್ನು ಹೊರಡಿಸಿ ದೆಹಲಿಯ ಪ್ರತಿಷ್ಠಿತ ಸಿವಿಲ್ ಲೈನ್ಸ್ಪ್ರದೇಶದಲ್ಲಿನ 6 ಫ್ಲ್ಯಾಗ್ ಸ್ಟಾಫ್ ರಸ್ತೆಯಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸದ ಹೊರಗಡೆ ಸೆಕ್ಷನ್ 144 ಅನ್ವಯನಿಷೇಧಾಜ್ಞೆ ಜಾರಿಗೊಳಿಸಿದ್ದು ಹಲವರ ಕಣ್ಣು ಕೆಂಪಾಗಿಸಿದೆ. ಮುಖ್ಯಮಂತ್ರಿ ನಿವಾಸದ ಎದುರು ಆಗಾಗ ಧರಣಿಗಳು ನಡೆದಲ್ಲಿ ಕಾನೂನು ಸುವ್ಯವಸ್ಥಗೆ ಸಮಸ್ಯೆಯಾಗಬಹುದೆಂದೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಸಬೂಬು ನೀಡಲಾಗಿದೆ. ಇದೇ ಕೇಜ್ರಿವಾಲ್ ಎರಡು ವರ್ಷಗಳ ಹಿಂದೆ ಗಣತಂತ್ರ ದಿನದ ಹಲವು ದಿನಗಳಮುನ್ನಾ ನಿಷೇಧಾಜ್ಞೆ ಉಲ್ಲಂಘಿಸಿ ರೈಲು ಭವನದ ಎದುರು ಧರಣಿ ಕೂತಿದ್ದ ಬಗ್ಗೆ ಹಲವರಿಗೆ ನೆನಪಿರಬಹುದು.
ಈಗ ಕೇಜ್ರಿವಾಲ್ ನಿವಾಸದೆದುರಿನ ನಿಷೇಧಾಜ್ಞೆಯಂತೆ ಧರಣಿ, ಸಭೆ ಸೇರುವುದು ಹಾಗೂ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರಿಗೆ ತಮ್ಮ ಬಾಗಿಲು ಮುಕ್ತವಾಗಿದೆಯೆಂದು ಹೇಳಿಕೊಳ್ಳುತ್ತಿದ್ದ ಕೇಜ್ರಿವಾಲ್ ಸರಕಾರದಿಂದ ಇಂತಹ ಒಂದು ಕ್ರಮವನ್ನು ಯಾರೂ ನಿರೀಕ್ಷಿರಲಿಲ್ಲ. ಒಬ್ಬ ನಾಯಕನ ಖಾಸಗಿ ಬದುಕಿಗೆ ಯಾವುದೇ ಅಡ್ಡಿ ಬರಬಾರದೆಂಬುದು ಒಪ್ಪಬಹುದಾದರೂ ಸಾರ್ವಜನಿಕರಿಗೆ ತಮ್ಮ ಪ್ರತಿಭಟಿಸುವ ಹಕ್ಕುಗಳನ್ನು ನಿರಾಕರಿಸಿರುವುದು ಒಪ್ಪತಕ್ಕಂತಹುದಲ್ಲ, ಎಂದು ಫಸ್ಟ್ ಪೋಸ್ಟ್ ವರದಿಯೊಂದು ಅಭಿಪ್ರಾಯ ಪಟ್ಟಿದೆ.
ತನ್ನ ಕಚೇರಿಗೆ ನಡೆದುಕೊಂಡು ಹೋಗಲು ಬಯಸಿದ್ದ ಹಾಗೂ ತನ್ನ ಪಕ್ಷದ ಚಿಹ್ನೆ ಪೊರಕೆಯಂತೆ ದೆಹಲಿಯ ನಾಯಕರ ಎಲ್ಲಾ ಆಡಂಬರದ ಪ್ರದರ್ಶನಗಳಿಗೆ ತೆರೆ ಎಳೆಯುವರೆಂದು ನಿರೀಕ್ಷಿಸಲಾಗಿದ್ದ ಒಬ್ಬ ನಾಯಕನಿಂದ ಇಂತಹ ಒಂದು ಕ್ರಮ ಅನಪೇಕ್ಷಿತ.
ಸ್ವಾತಂತ್ರ್ಯ ದಿನ, ರಕ್ಷಾ ಬಂಧನ್ ನ್ಮಾಷ್ಟಮಿ ಸಂದರ್ಭ ಅಪಾಯ ಹೆಚ್ಚು ಎಂದು ಆಗಸ್ಟ್ ಅಂತ್ಯದ ತನಕ ನಿಷೇಧಾಜ್ಞೆಯನ್ನು ಸದ್ಯಕ್ಕೆ ಜಾರಿಗೊಳಿಸಲಾಗಿದೆಯಾದರೂ ಈ ನಿಷೇಧಾಜ್ಞೆ ಮಂದೆ ದಸರಾ, ದೀಪಾವಳಿ ಹಾಗೂ ಕ್ರಿಸ್ಮಸ್ ತನಕವೂ ಮುಂದುವರಿಯಬಹುದೇನೋ ಎಂಬ ಸಂಶಯವೂ ಮೂಡಿದೆ.
ಈಗಾಗಲೇ ಕೇಂದ್ರ ಸರಕಾರದೊಂದಿಗೆ ಹಲವಾರು ಬಾರಿ ಮಾತಿನ ಜಟಾಪಟಿಗೆ ಇಳಿದಿರುವ ಕೇಜ್ರಿವಾಲ್ತಮ್ಮನ್ನು ಯಾರಾದರೂ ಹತ್ಯೆ ಮಾಡಬಹುದೆಂದು ನಂಬಿರುವುದೇ ಅವರ ಈ ಕ್ರಮಕ್ಕೆ ಕಾರಣವೇ ಎಂಬ ಪ್ರಶ್ನೆಗಳೂ ಇವೆ.