‘ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ’ಕ್ಕೆ ಚಾಲನೆ
ಮಂಗಳೂರು, ಆ.5: ಮಕ್ಕಳು ದೊಡ್ಡವರಾದ ನಂತರ ಅವರನ್ನು ಜಾತಿ, ಮತ,ಧರ್ಮದ ಭೇದವಿಲ್ಲದ ಪರಿಶುದ್ಧ ಮನಸ್ಸಿನವರಾಗಿಯೆ ಉಳಿಸಿಕೊಳ್ಳುವ ಪ್ರಯತ್ನ ಅಗತ್ಯವಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಾಲ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ನಗರದ ತುಳು ಭವನದ ಸಿರಿ ಚಾವಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಆರಂಭಗೊಂಡ ಬಳಿಕ ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕಲು ಒಂದು ವೇದಿಕೆ ದೊರೆತಂತಾಗಿದೆ ಎಂದರು. ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿ, ಮಕ್ಕಳಲ್ಲಿ ಬಡವ ಬಲಿದ ಎನ್ನುವ ತಾರತಮ್ಯವಿಲ್ಲ. ಆದರೆ ಪ್ರಸ್ತುತ ದೇಶದ ಪರಿಸ್ಥಿತಿ ಅಸಹಿಷ್ಣುತೆಗೆ ಹೋಗುತ್ತಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಸೌಹಾರ್ದದ ಕುರಿತು ತಿಳಿ ಹೇಳುವ ಕೆಲಸ ಆಗಬೇಕಾಗಿದೆ ಎಂದರು. ಬಂಟ್ವಾಳ ನಗಾರಾಭಿವೃದ್ಧಿ ಅಧ್ಯಕ್ಷ ಪಿಯೂಷ್ ರೊಡ್ರಿಗಸ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಕೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಮಾಜಿ ಸಹಾಯಕ ನಿರ್ದೇಶಕ ಚಂದ್ರಹಾಸ್ ರೈ ಬಿ. ಉಪಸ್ಥಿತರಿದ್ದರು.