ಮರಳು ಕಾರ್ಮಿಕರ ಸಾಕ್ಷ್ಯಚಿತ್ರ
ಉಡುಪಿ, ಆ.5: ಉಡುಪಿ ಜಿಲ್ಲೆಯಲ್ಲಿ ಮರಳು ಕಾರ್ಮಿಕರ ಬದುಕು-ಬವಣೆಗಳ ಕುರಿತ ಸಾಕ್ಷಚಿತ್ರವೊಂದು ತಾನಿಯಾ ಕ್ರಿಯೇಷನ್ಸ್ ನಿಂದ ಮೂಡಿಬರಲಿದ್ದು, ಇದರ ಚಿತ್ರೀಕರಣ ಶೀಘ್ರವೇ ಪ್ರಾರಂಭಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ಕಥೆಗಾರ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮರಳು ಕಾರ್ಮಿಕರ ಜೀವನಗಾಥೆ’ ಎಂಬ ಈ ಸಾಕ್ಷಚಿತ್ರ ಸುಮಾರು ಅರ್ಧಗಂಟೆ ಅವಯದಾಗಿದ್ದು, ಸುಮಾರು 50,000 ರೂ.ಬಜೆಟ್ನಲ್ಲಿ ಬ್ರಹ್ಮಾವರ ಆಸುಪಾಸಿನಲ್ಲಿ ಚಿತ್ರೀಕರಿಸಲಾಗುವುದು ಎಂದರು.
ಮರಳು ಕಾರ್ಮಿಕರು ಅನುಭವಿಸುತ್ತಿರುವ ಕಿರುಕುಳ, ಕಷ್ಟ-ನಷ್ಟ, ಸಂಕಷ್ಟಗಳೆಲ್ಲವೂ ಇದರಲ್ಲಿ ಚಿತ್ರಿತವಾಗಲಿದ್ದು, ಚಿತ್ರವನ್ನು ಸಂದೀಪ್ ವಿ.ಆಚಾರ್ ನಿರ್ದೇಶಿಸಲಿದ್ದಾರೆ. ಸಂದೀಪ್ ಪಣಿಯೂರು ಚಿತ್ರದ ಸಂಭಾಷಣೆ ಬರೆದಿದ್ದು, ಅರುಣ್ ಕನ್ಯಾನ ಛಾಯಾಗ್ರಾಹಕರಾಗಿದ್ದಾರೆ. ನಿರ್ವಹಣೆ ಅಬ್ದುಲ್ ರೆಹ್ಮಾನ್ ಅವರದ್ದಾಗಿದೆ ಎಂದು ನಿರ್ಮಾಪಕ ತಾನಿಯಾ ಕ್ರಿಯೇಷನ್ಸ್ನ ಅನ್ಸಾರ್ ಅಹ್ಮದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂದೀಪ್ ಆಚಾರ್, ಸಂದೀಪ್ ಪಣಿಯೂರು, ಅಬ್ದುಲ್ ರೆಹ್ಮಾನ್, ಅರುಣ್ ಕನ್ಯಾನ ಉಪಸ್ಥಿತರಿದ್ದರು.