ಛೋಟಾರಾಜನ್ ಕುರಿತ ಪುಸ್ತಕದ ವಿಚಾರದಲ್ಲಿ ಜೆ.ಡೇ ಹತ್ಯೆ: ಸಿಬಿಐ
![ಛೋಟಾರಾಜನ್ ಕುರಿತ ಪುಸ್ತಕದ ವಿಚಾರದಲ್ಲಿ ಜೆ.ಡೇ ಹತ್ಯೆ: ಸಿಬಿಐ ಛೋಟಾರಾಜನ್ ಕುರಿತ ಪುಸ್ತಕದ ವಿಚಾರದಲ್ಲಿ ಜೆ.ಡೇ ಹತ್ಯೆ: ಸಿಬಿಐ](https://www.varthabharati.in/sites/default/files/images/articles/2016/08/6/05_08_2016-chota.jpg)
ಮುಂಬೈ, ಆ.6: ಪತ್ರಕರ್ತ ಜೆ.ಡೇ ಹತ್ಯೆ ಪ್ರಕರಣದಲ್ಲಿ ಸಿಬಿಐ ಇಂದು ಗ್ಯಾಂಗ್ಸ್ಟರ್ ಛೋಟಾ ರಾಜನ್ ವಿರುದ್ಧ ಪೂರಕ ಆರೋಪ ಪಟ್ಟಿಯೊಂದನ್ನು ದಾಖಲಿಸಿದೆ. ಡೇಯವರ ಬರಹಗಳು ಹಾಗೂ ಅವರು ಪ್ರಕಟಿಸಲುದ್ದೇಶಿಸಿದ್ದ ಪುಸ್ತಕವೊಂದರಲ್ಲಿ ರಾಜನ್ನನ್ನು ‘ಕ್ಷುಲ್ಲಕ ಜಂತು’ ವೆಂಬಂತೆ ಚಿತ್ರಿಸಿದ್ದುದು ಅವರ ಹತ್ಯೆಗೆ ಕಾರಣವೆಂದು ಅದು ಹೇಳಿದೆ.
ಇಲ್ಲಿನ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಮೊಕಾ) ನ್ಯಾಯಾಲಯದಲ್ಲಿ ಈ ಪೂರಕ ಆರೋಪ ಪಟ್ಟಿಯನ್ನು ದಾಖಲಿಸಲಾಗಿದೆ.
ಖ್ಯಾತ ಅಪರಾಧ ವರದಿಗಾರನಾಗಿದ್ದ ಡೇ,‘ಚಿಂದಿ-ರ್ಯಾಗ್ಸ್ ಟು ರಿಚಸ್’ ಶಿರೋನಾಮೆಯ ಪುಸ್ತಕವೊಂದನ್ನು ಬರೆಯುವ ಯೋಜನೆಯಲ್ಲಿದ್ದರು. ಅದರಲ್ಲಿ ಅವರು ವಿನಮ್ರ ಮೂಲಗಳ 20 ಗ್ಯಾಂಗ್ಸ್ಟರ್ಗಳ ಕತೆಗಳನ್ನು ಬರೆಯಲಿದ್ದರು.
ತನ್ನ ರಕ್ಷಣೆಗಾಗಿ ಹಾಗೂ ಕುಟುಂಬಕ್ಕೆ ಸಂಪತ್ತನ್ನು ಕ್ರೋಡೀಕರಿಸುವುದಕ್ಕಾಗಿ ರಾಜನ್ ಉಪಯೋಗಿಸುತ್ತಿದ್ದ ನಕಲಿ ದೇಶಭಕ್ತನ ಮುಖವಾಡವನ್ನು ಡೇ ಬಯಲು ಮಾಡಲಿದ್ದರು. ತನ್ನನ್ನು ದೊಡ್ಡವನನ್ನಾಗಿ ಮಾಡಿದವರ ಬಗ್ಗೆ ಆತನಿಗೆ ಕಾಳಜಿಯಿರಲಿಲ್ಲವೆಂದು ಡೇ. ಬರೆಯಲಿದ್ದರೆಂದು ಆರೋಪ ಪಟ್ಟಿ ತಿಳಿಸಿದೆ.
ರಾಜನ್ನ ಕಟ್ಟಾ ವೈರಿ ದಾವೂದ್ ಇಬ್ರಾಹೀಂ, ಆತನಿಂದ ಉತ್ತಮನೆಂದು ಪುಸ್ತಕವು ಚಿತ್ರಿಸುವುದರಲ್ಲಿತ್ತು.
ಮಲೇಶಿಯದಲ್ಲಿ ಅಡಗಿಕೊಂಡಿದ್ದಾನೆನ್ನಲಾದ ರಾಜನ್, ಡೇಯವರ ಭೇಟಿಗೆ ಬಯಸಿದ್ದನು. ಆದರೆ, ಅವರದಕ್ಕೆ ನಿರಾಕರಿಸಿದ್ದರು. ಡೇಯವರನ್ನು ‘ದೇಶದ್ರೋಹಿಯೆಂದು’ ರಾಜನ್ ಘೋಷಿಸಿದ್ದನು. ಈಗ ಜಾಮೀನಿನಲ್ಲಿ ಹೊರಗಿರುವ ಪ್ರಕರಣದ ಆರೋಪಿ ಹಾಗೂ ಡೇಯವರ ಪ್ರತಿಸ್ಪರ್ಧಿ ಪತ್ರಕರ್ತ ಜಿಗ್ಣಾ ವೋರಾ ಎಂಬಾತ ಈ ಕೊಲೆಗೆ ಪ್ರಚೋದನೆ ನೀಡಿದ್ದನೆಂದು ಸಿಬಿಐ ಆರೋಪಿಸಿದೆ.