ಈ ಗ್ರಾಮಸ್ಥರು 3000ಕ್ಕೂ ಹೆಚ್ಚು ಮೇಕೆಗಳನ್ನು ಬಲಿನೀಡಿದ್ದು ಏಕೆಂದರೆ?
![ಈ ಗ್ರಾಮಸ್ಥರು 3000ಕ್ಕೂ ಹೆಚ್ಚು ಮೇಕೆಗಳನ್ನು ಬಲಿನೀಡಿದ್ದು ಏಕೆಂದರೆ? ಈ ಗ್ರಾಮಸ್ಥರು 3000ಕ್ಕೂ ಹೆಚ್ಚು ಮೇಕೆಗಳನ್ನು ಬಲಿನೀಡಿದ್ದು ಏಕೆಂದರೆ?](https://www.varthabharati.in/sites/default/files/images/articles/2016/08/7/goats.jpg)
ಈರೋಡ್, ಆ.7: ಮಳೆಗಾಗಿ ದೇವರನ್ನು ಪ್ರಾರ್ಥಿಸಿ, ಜಿಲ್ಲೆಯ ಗೋಬಿಚೆಟ್ಟಿಪಾಳ್ಯಂ ತಾಲೂಕಿನ ಚಿನ್ನಕೋಶನಂ ಎಂಬ ಗ್ರಾಮದಲ್ಲಿ ವಿಶೇಷ ಉತ್ಸವ ಆಯೋಜಿಸಿದ್ದರು. ಇದರ ವಿಶೇಷ ಏನು ಗೊತ್ತೇ? ಈ ಉತ್ಸವದಲ್ಲಿ ದೇವರಿಗೆ ಅರ್ಪಿಸಿದ ಕುರಿ, ಮೇಕೆಗಳ ಸಂಖ್ಯೆ ಬರೋಬ್ಬರಿ ಮೂರು ಸಾವಿರ!
ಗ್ರಾಮದ ಪೂತನಾಚಿ ಅಮ್ಮನ್ ಮತ್ತು ಪೆಟ್ರಾಯಸ್ವಾಮಿ ದೇವಸ್ಥಾನಗಳಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಉತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿ, 50 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನದಾನ ಮಾಡುತ್ತಾರೆ. "ಮಳೆಯೇ ನಮ್ಮ ಜೀವನಾಧಾರ. ಮಳೆ ಬಿದ್ದರಷ್ಟೇ ನಮ್ಮ ಕೃಷಿಗೆ ನೀರಾವರಿ. ಕಷ್ಟದ ಸಂದರ್ಭದಲ್ಲೆಲ್ಲ ನಾವು ದೇವರನ್ನು ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತೇವೆ. ನಾಲ್ಕು ವರ್ಷಗಳಿಂದ ಉತ್ತಮ ಮಳೆಯಾಗಿಲ್ಲ" ಎಂದು ಭಕ್ತ ಎಸ್.ಕಲಿಯಣ್ಣನ್ ವಿವರಿಸಿದರು.
"ಆಟಿ ತಿಂಗಳಲ್ಲಿ ಈ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ಎಲ್ಲ ರೈತರು ನಿರ್ಧರಿಸಿದೆವು. ವಿಶೇಷ ಪೂಜೆ ಸಲ್ಲಿಸಿ ಪೂತನಿಯಾಚಿ ಅಮ್ಮನ್ ಮತ್ತು ಪೆಟ್ರಾಯಸ್ವಾಮಿಗೆ ಇತರ ಆಹಾರ ಪದಾರ್ಥಗಳ ಜತೆಗೆ ಕುರಿ, ಮೇಕೆಗಳನ್ನು ಅರ್ಪಿಸಲು ನಿರ್ಧರಿಸಿದೆವು" ಎಂದು ಮರಿಯಪ್ಪನ್ ಹೇಳಿದರು.
ತಾಲೂಕಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತರಿಗೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಬಾಣಸಿಗರು ಅಡುಗೆ ಮಾಡಿ ಪುಷ್ಕಳ ಬಾಡೂಟ ಹಾಕಿದರು.