ಕೇರಳದಲ್ಲಿ ಸಂಘಪರಿವಾರ ವಿರುದ್ಧ ಆಕ್ರಮಣ : ಕೇಂದ್ರ ಸಚಿವ ರಿಜಿಜು
ಹೊಸದಿಲ್ಲಿ, ಆ.7: ಕೇರಳದಲ್ಲಿ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಎಡಪಕ್ಷಗಳು ಆಕ್ರಮಣ ನಡೆಸುತ್ತಿವೆಯೆಂದು ಕೇಂದ್ರಗೃಹ ಸಹ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ ಎಂದು ವರದಿಯಾಗಿದೆ. ರಾಷ್ಟ್ರೀಯ ಮಾಧ್ಯಮಗಳು ಸರಿಯಾದ ರೀತಿಯಲ್ಲಿ ಇದನ್ನು ವರದಿ ಮಾಡದ್ದರಿಂದ ಜನರು ಸಂಘಪರಿವಾರ ಕಾರ್ಯಕರ್ತರ ದುಃಸ್ಥಿತಿಯನ್ನು ಅರಿತಿಲ್ಲ. ಅಗತ್ಯಬಿದ್ದರೆ ಸಂಘಪರಿವಾರ ಕಾರ್ಯಕರ್ತರಿಗೆ ಗೃಹಖಾತೆ ನೆರವು ನೀಡಲಿದೆಯೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರಿಜುಜು, ಪಿ.ಪರಮೇಶ್ವರನ್ ನೇತೃತ್ವದ ನವೋದಯ ಎಂಬ ಸಂಘಟನೆ ಏರ್ಪಡಿಸಿದ್ದ ಸೆಮಿನಾರ್ನಲ್ಲಿ ಭಾಗವಹಿಸಿ ಮಾತಾಡುತ್ತಾ ಈ ರೀತಿ ಹೇಳಿದ್ದಾರೆ. ಕೇರಳದ ಭಯೋತ್ಪಾದಕ ಆಳ್ವಿಕೆ ವಿರುದ್ಧ ಶಸ್ತ್ರವೆತ್ತದೆ ಹೋರಾಡುತ್ತಿರುವ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರನ್ನು ಅವರು ಅಭಿನಂದಿಸಿದ್ದಾರೆ.ಕೇರಳದಲ್ಲಿ ಕೆಲವು ಯುವಕರು ಧಾರ್ಮಿಕ ಮೂಲಭೂತವಾದದತ್ತ ಹೊರಳಿದ್ದಾರೆಂದು ಸಚಿವರು ಐಸಿಸ್ನ್ನು ಸೂಚ್ಯವಾಗಿ ತಿಳಿಸಿ ಹೇಳಿದ್ದಾರೆ.
" ರಾಷ್ಟ್ರೀಯ ಮಟ್ಟದಲ್ಲಿ ಎಡಪಕ್ಷಗಳ ನಾಯಕರು ಮಾನವಹಕ್ಕುಗಳು, ಪ್ರಜಾಪ್ರಭುತ್ವವಾದಿ ಸಮಾಜದ ಮೌಲ್ಯಗಳ ಕುರಿತು ಚರ್ಚೆ ನಡೆಸಲು ಮುಂಚೂಣಿಯಲ್ಲಿರುತ್ತಾರೆ. ಆದರೆ ಕೇರಳದ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿದೆ" ಎಂದು ಸಚಿವರು ಹೇಳಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾತಾಡಿದ ಇನ್ನೊಬ್ಬ ಅತಿಥಿ ಸಿಎಂಪಿ ನಾಯಕ ಸಿ.ಪಿ.ಜೋನ್ "ಎಡಪಕ್ಷಗಳು ದ್ವಂದ್ವ ನಿಲುವನ್ನು ಪ್ರದರ್ಶಿಸುತ್ತಿವೆ. ಸ್ಟಾಲಿನಿಸ್ಟ್ ಕೊಲೆಗಡುಕತನವನ್ನು ಕೊನೆಗೊಳಿಸಬೇಕೆಂದು ಹೇಳಿದರು. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ವಿ.ಮುರಳೀಧರನ್ ಮತ್ತು ಈ ಹಿಂದೆ ಕಣ್ಣೂರಿನಲ್ಲಿ ನಡೆದಿದದ್ದ ಘರ್ಷಣೆಯಲ್ಲ್ಲಿ ಕಾಲು ಕಳಕೊಂಡಿದ್ದ ಆರೆಸ್ಸೆಸ್ ನಾಯಕ ಸದಾನಂದ ಮಾಸ್ಟರ್ ಸೆಮಿನಾರ್ನಲ್ಲಿ ಭಾಗವಹಿಸಿದ್ದರು ಎಂದು ವರದಿ ತಿಳಿಸಿದೆ.