"ಹಿಂದೂಗಳನ್ನು ಹಿಜ್ಡಾ ಎಂದು ಕರೆದ ಕೇಂದ್ರ ಸಚಿವನನ್ನು ಜೈಲಿಗೆ ತಳ್ಳಿ"
ಉರ್ದು ಕವಿ ಮುನಾವರ್ ರಾಣಾ ಕಿಡಿ
ಮುಂಬೈ, ಆ.7: ಹಿಂದೂಗಳನ್ನು ಹಿಜ್ಡಾಗಳು ಎಂದು ಕರೆದಿರುವ ಸಚಿವರನ್ನು ಜೈಲಿಗೆ ಅಟ್ಟಬೇಕು ಎಂದು ಖ್ಯಾತ ಉರ್ದು ಕವಿ ಮುನಾವರ್ ರಾಣಾ ಆಗ್ರಹಿಸಿದ್ದಾರೆ.
ಕವಿಗೋಷ್ಠಿಯೊಂದರಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದ ವೇಳೆ ಪತ್ರಕರ್ತರ ಜತೆ ಅವರು ಮಾತನಾಡಿದರು. ಈ ಮುನ್ನ ರಾಣಾ ತಮಗೆ ಸಂದಿದ್ದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊತ್ತವಾದ ಒಂದು ಲಕ್ಷ ರೂಪಾಯಿಗಳನ್ನು ವಾಪಾಸು ಮಾಡಿ ಸುದ್ದಿ ಮಾಡಿದ್ದರು. ಬಿಹಾರದ ಹುಚ್ಚು ಸಚಿವರೊಬ್ಬರು "ಹಿಂದುವೊಂ ಜೈಸಾ ಕೋಯಿ ಹಿಜ್ರಾ ಕೌಮ್ ದೂಸ್ರಾ ನಹಿ ಹೈ" ಎಂದು ಹೇಳಿದ್ದಾರೆ. ಇದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಇದು ದೇಶದಲ್ಲಿ ದ್ವೇಷದ ಬೀಜ ಬಿತ್ತುವ ಹುನ್ನಾರ ಎಂದು ಟೀಕಿಸಿದರು.
ಅಸಹಿಷ್ಣುತೆ ಬಗ್ಗೆ ಮಾತನಾಡಿದ ಅವರು, ಸರ್ಕಾರ, ಸಮಾಜದಲ್ಲಿ ರಾಜಕೀಯ ಆಟ ಆಡಲು ಆರಂಭಿಸಿದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂದು ಎಚ್ಚರಿಸಿದರು.
ಕಾಶ್ಮೀರದಲ್ಲಿ ಭಾರತ ವಿರೋಧಿ ಘೋಷಣೆ ಕೂಗುತ್ತಿರುವುದನ್ನು ಟೀಕಿಸುವ ವೇಳೆ ಕೇಂದ್ರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಖಾತೆಯ ರಾಜ್ಯ ಸಚಿವ ಗಿರಿರಾಜ್ ಸಿಂಗ್ ಅವರು ಹಿಂದೂಗಳು ಹಿಜ್ಡಾಗಳು ಎಂದು ಅಬ್ಬರಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ನಂತೆ ಹರಿದಾಡುತ್ತಿದೆ.