ಉಡುಪಿ ಜಿಲ್ಲೆಯಾದ್ಯಂತ ನಾಗರಪಂಚಮಿ ಹಬ್ಬ ಆಚರಣೆ
ಉಡುಪಿ, ಆ.7: ನಾಗರ ಪಂಚಮಿ ಹಬ್ಬವನ್ನು ಉಡುಪಿ ಜಿಲ್ಲಾದ್ಯಂತ ರವಿವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳಲ್ಲಿರುವ ನಾಗಾಲಯ, ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ತನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಮೂಲ ನಾಗಬನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ನಾಗರ ಪಂಚಮಿ ಪ್ರಯುಕ್ತ ಶ್ರೀ ವಾದಿರಾಜ ಸ್ವಾಮೀಜಿಯಿಂದ ಪ್ರತಿಷ್ಠಿತ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು. ಕಡೆಕಾರಿನ ಶ್ರೀಲಕ್ಷ್ಮೀನಾರಾಯಣ ಮಠದ ಶ್ರೀನಾಗ ದೇವರಗುಡಿಯಲ್ಲಿ ಶ್ರೀಶ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ಜರಗಿತು. ಸರಳಬೆಟ್ಟು ಶ್ರೀಉಮಾಮಹೇಶ್ವರಿ ದೇವಸ್ಥಾನದಲ್ಲಿ ನಾಗನಕಟ್ಟೆಗೆ ಹಾಲೆರೆದು ಪೂಜೆ ಸಲ್ಲಿಸಿ, ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು.
ಕೊಡೇರಿಯ ಮಕರಜ್ಯೋತಿ ಡಿಸ್ಕೋ ಬಲೆ ಫಂಡ್ ವತಿಯಿಂದ ನಾಗರ ಪಂಚಮಿಯ ಶುಭ ಸಂದರ್ಭದಲ್ಲಿ 2.20 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಹಕ್ರೆ ಮಠದ ಶ್ರೀಲಕ್ಷ್ಮೀವೆಂಕಟರಮಣ ದೇವರಿಗೆ 4ಕೆ.ಜಿ.ಯ ಬೆಳ್ಳಿಯ ಕವಚ ಸಮರ್ಪಣೆ ಮಾಡಿದರು. ದೇವಸ್ಥಾನದ ಅರ್ಚಕ ನಾರಾಯಣ ಹೆಬ್ಬಾರ್ ಧಾರ್ಮಿಕ ವಿಧಿವಿಧಾನದ ಮೂಲಕ ಸಮರ್ಪಣಾ ಕಾರ್ಯ ನೆರವೇರಿಸಿದರು.





