ಆಹಾರವಿಲ್ಲದೆ 500 ಗೋವುಗಳ ಸಾವು
ಗೋಶಾಲೆಗೆ ಭೇಟಿ ನೀಡಿದ ರಾಜಸ್ಥಾನ ಸಚಿವೈಪುರ, ಆ.7: ರಾಜಸ್ಥಾನದ ಜೈಪುರದ ಸಮೀಪ ಗೋಶಾಲೆಯೊದರಲ್ಲಿ ಅಹಾರವಿಲ್ಲದೆ 500ಕ್ಕೂ ಹೆಚ್ಚು ಜಾನುವಾರುಗಳು 2 ವಾರಗಳಲ್ಲಿ ಸಾವಿಗೀಡಾಗಿರುವ ಕುರಿತು ಟೀಕೆ ಎದುರಿಸಿದ ಬಳಿಕ, ರಾಜ್ಯ ಸರಕಾರವು ತುರ್ತಾಗಿ ಕ್ರಮ ಕೈಗೊಂಡಿದ್ದು, ಹಿಂಗೋನಿಯ ಗೋಶಾಲೆಗೆ ಸಚಿವರೊಬ್ಬರನ್ನು ಕಳುಹಿಸಿದೆ.
ಇದಕ್ಕೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಟ್ವಿಟರ್ನಲ್ಲಿ ನೀಡಿರುವ ಮುಖ್ಯಮಂತ್ರಿ ವಸುಂಧರಾ ರಾಜೇ, ಶೀಘ್ರವೇ ತಾನಲ್ಲಿಗೆ ಭೇಟಿ ನೀಡಲಿದ್ದೇನೆಂದು ತಿಳಿಸಿದ್ದಾರೆ.
ರಾಜಸ್ಥಾನ ಸರಕಾರವು ಶನಿವಾರ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದು ಕರ್ತವ್ಯ ನಿರ್ಲಕ್ಷದ ಆರೋಪದಲ್ಲಿ ಇಬ್ಬರು ಹಿರಿಯಧಿಕಾರಿಗಳನ್ನು ಅಮಾನತುಗೊಳಿಸಿದೆ.
ಹಿಂಗೋನಿಯ ಗೋಶಾಲೆಯ ಸುಮಾರು 250 ಗುತ್ತಿಗೆ ನೌಕರರು ವೇತನದ ವಿಚಾರದಲ್ಲಿ ಕಳೆದ ತಿಂಗಳು ಮುಷ್ಕರ ಆರಂಭಿಸಿದ ಬಳಿಕ, ಗೋವುಗಳಿಗೆ ಆಹಾರ ನೀಡಲು ಅಲ್ಲಿ ಯಾರೂ ಉಳಿದಿಲ್ಲ. ಗೋಶಾಲೆಯನ್ನು ಸ್ವಚ್ಛಗೊಳಿಸಿಲ್ಲ. ಇದರಿಂದಾಗಿ ಹಲವು ಹಸುಗಳು ಹಸಿವಿನಿಂದ ಸತ್ತಿವೆ. ಅವುಗಳ ಮೃತ ದೇಹಗಳು ಮಳೆಯಿಂದುಂಟಾದ ಕೆಸರು ಹಾಗೂ ಸೆಗಣಿಯಲ್ಲಿ ಹೂತು ಹೋಗಿವೆ.
ಮೇಯಿಂದ ಕೆಲಸಗಾರರಿಗೆ ಸಂಬಳ ಪಾವತಿಸಿಲ್ಲ. ಕೆಲಸಗಾರರೇ ಇಲ್ಲದ ಮೇಲೆ ತಾನೊಬ್ಬನೇ ಸಮಸ್ಯೆಯನ್ನು ಹೇಗೆ ನಿಭಾಯಿಸಲಿ? ಎಂದು ಗೋ ಶಾಲೆಯ ಅಧ್ಯಕ್ಷ ಭಗ್ವತ್ ಸಿಂಗ್ ದೇವಲ್ ಪ್ರಶ್ನಿಸುತ್ತಾರೆ.
ಇದಕ್ಕೆ ತುರ್ತು ಪರಿಹಾರ ಕಲ್ಪಿಸುವುದಕ್ಕಾಗಿ ಪಶು ಸಂಗೋಪನ ಸಚಿವ ಪ್ರಭುಲಾಲ್ ಸೈನಿ ಸ್ವಯಂ ಗೋ ಸೇವೆಗಿಳಿದಿದ್ದಾರೆ.
ತಾನೊಬ್ಬ ಕೃಷಿಕ ಹಾಗೂ ಜಾನುವಾರು ಸಾಕಣೆದಾರನಾಗಿದ್ದೇನೆ. ಹಸಿದಿದ್ದ ದನಗಳಿಗೆ ಆಹಾರ-ನೀರು ಕೊಟ್ಟಿದ್ದೇನೆ. ಏಳಲಾಗದವುಗಳನ್ನು ಎದ್ದು ನಿಲ್ಲುವಂತೆ ಮಾಡಿದ್ದೇನೆಂದು ಅವರು ತಿಳಿಸಿದ್ದಾರೆ.
ಈ ಘಟನೆಯನ್ನು ಗಮನಿಸಿದ ರಾಜಸ್ಥಾನ ಹೈಕೋರ್ಟ್, ಗೋಶಾಲೆಗೆ ರೂ. 20 ಕೋಟಿ ಅನುದಾನವಿದ್ದರೂ, ಗುತ್ತಿಗೆ ನೌಕರರ ವೇತನ ಯಾಕೆ ಪಾವತಿಯಾಗಲಿಲ್ಲವೆಂಬ ಕುರಿತು ಆ.10ರೊಳಗೆ ವರದಿಯೊಂದನ್ನು ನೀಡುವಂತೆ ಭ್ರಷ್ಟಾಚಾರ ನಿಗ್ರಹ ಬ್ಯೂರೊಗೆ ಆದೇಶ ನೀಡಿದೆ.