ದ.ಕ. ಜಿಲ್ಲೆಯ ಅಭಿವೃದ್ಧಿ ಪಥದಲ್ಲಿನ ಇನ್ನಷ್ಟು ಹಿನ್ನಡೆಗಳು!
![ದ.ಕ. ಜಿಲ್ಲೆಯ ಅಭಿವೃದ್ಧಿ ಪಥದಲ್ಲಿನ ಇನ್ನಷ್ಟು ಹಿನ್ನಡೆಗಳು! ದ.ಕ. ಜಿಲ್ಲೆಯ ಅಭಿವೃದ್ಧಿ ಪಥದಲ್ಲಿನ ಇನ್ನಷ್ಟು ಹಿನ್ನಡೆಗಳು!](https://www.varthabharati.in/sites/default/files/images/articles/2016/08/8/Mangalore_Bus_Stand.jpg)
ರಾಜಕೀಯ ಹಾಗೂ ಆಡಳಿತ ನಿಷ್ಕ್ರಿಯತೆಗೆ ರಂಗಮಂದಿರ ಒಂದೇ ಉದಾಹರಣೆಯಲ್ಲ. ಪ್ರಗತಿಪರ ಜಿಲ್ಲೆಯೆಂಬ ಖ್ಯಾತಿ ಪಡೆದ ನಮ್ಮ ಜಿಲ್ಲೆಯ ಕೇಂದ್ರ ಸ್ಥಾನವಾದ ಮಂಗಳೂರಿನಲ್ಲಿ ಯೋಜನೆಗಳನ್ನು ರೂಪಿಸಿಯೂ ಅನುಷ್ಠಾನಕ್ಕೆ ತಾರದೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಲವಾರು ಯೋಜನೆಗಳನ್ನು ಪಟ್ಟಿ ಮಾಡಿದಾಗ ನಾವೆಂತಹ ಪ್ರಗತಿಪಥದಲ್ಲಿ ಚಲಿಸುತ್ತಿದ್ದೇವೆ ಎಂದು ಊಹಿಸಿಕೊಳ್ಳಬಹುದು. ಇಂದಿನ ಪೀಳಿಗೆಯವರು ಈ ಬಗ್ಗೆ ಗಾಢವಾಗಿ ಚಿಂತಿಸಬೇಕಿದೆ.
*ಬಸ್ ತಂಗುದಾಣ ನಿರ್ಮಾಣ:
ಮಂಗಳೂರಿನ ಹಳೆಯ ಬಸ್ ತಂಗುದಾಣವನ್ನು ಸ್ಥಳದ ಅಭಾವದಿಂದಾಗಿ ದಶಕಗಳ ಹಿಂದೆ ಸ್ಥಳಾಂತರಿಸಲಾಯಿತು. ದಾನಿಗಳೊಬ್ಬರು ಹಾಕಿ ಕ್ರೀಡೆಯ ಅಭಿವೃದ್ಧಿಗಾಗಿ ಮಂಗಳೂರು ನಗರಪಾಲಿಕೆಗೆ ದಾನವಾಗಿತ್ತ ನೆಹರೂ ಮೈದಾನಿನ ಒಂದು ಭಾಗಕ್ಕೆ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲಾಯಿತು. ಒಂದು ನಿಯೋಜಿತ ಉದ್ಧೇಶಕ್ಕಾಗಿ ದಾನವಾಗಿ ನೀಡಿದ ಸ್ಥಳವನ್ನು ಬೇರೆ ಉದ್ಧೇಶಕ್ಕಾಗಿ ಉಪಯೋಗಿಸುವುದಕ್ಕೆ ದಾನಿಗಳಿಂದಲೂ, ಸಾರ್ವಜನಿಕರಿಂದಲೂ ತೀವ್ರ ವಿರೋಧ ವ್ಯಕ್ತವಾಗಿ, ಅದು ಕೋರ್ಟ್ ಮೆಟ್ಟಲೇರುವ ಹಂತವನ್ನು ತಲುಪಿದಾಗ 2ವರ್ಷಗಳ ಒಳಗೆ ಹೊಸ ಬಸ್ ನಿಲ್ದಾಣವನ್ನು ಕಟ್ಟಿ ಸ್ಥಳಾಂತರಿಸಿ ಹಾಕಿ ಗ್ರೌಂಡನ್ನು ಬಿಟ್ಟುಕೊಡಲಾಗುವುದೆಂಬ ಆಶ್ವಾಸನೆಯನ್ನೀಯಲಾಯಿತು.
ಇದೀಗ ಎರಡು ದಶಕಗಳೇ ಕಳೆದರೂ ಹೊಸ ಬಸ್ ತಂಗುದಾಣ ಮರೀಚಿಕೆಯಾಗಿಯೆ ಉಳಿದಿದೆ. ಹಾಕಿ ಆಟವನ್ನು ಮಂಗಳೂರಿಗರು ಮರೆತೇ ಬಿಟ್ಟಿದ್ದಾರೊ ಎಂದು ಭಾಸವಾಗುತ್ತದೆ. ಮೀನಾರವರು ಜಿಲ್ಲಾಧಿಕಾರಿಯಾಗಿದ್ದಾಗ ಒಂದು ದೊಡ್ಡ ನಿಲ್ದಾಣದ ಬದಲಿಗೆ ದಕ್ಷಿಣ, ಪೂರ್ವ ಹಾಗೂ ಉತ್ತರ ಭಾಗದಲ್ಲಿ 3 ಬಸ್ ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಅವರೊಡನೆ ಆ ಯೋಜನೆಯು ಹೋಗಿ ಬಿಟ್ಟಿತು. ಆ ಮೇಲೆ ಈ ನಿಟ್ಟಿನಲ್ಲಿ ಹಲವು ಸ್ಥಳಗಳ ಬಗ್ಗೆ ಚಿಂತನೆ ನಡೆಯಿತು. ಕೊನೆಗೆ ಸುಮಾರು 5 ವರ್ಷಗಳ ಹಿಂದೆ ಪಂಪ್ವೆಲ್ ಸಮೀಪದ ಸ್ಥಳವನ್ನು ಆಯ್ದು ಅಲ್ಲಿಗೆ ಮಣ್ಣು ತುಂಬಿಸುವ ಕೆಲಸವೂ ಆರಂಭವಾಯಿತು. ಇನ್ನೇನು ಬಸ್ ನಿಲ್ದಾಣ ಬಂದೇ ಬಿಟ್ಟಿತು ಎಂದು ಯೋಚಿಸುವಷ್ಟರಲ್ಲಿ ಕೆಲಸ ಆರಂಭವಾದಷ್ಟೇ ವೇಗದಲ್ಲಿ ನಿಂತು ಬಿಟ್ಟು ಅತಂತ್ರತೆ ಮುಂದುವರಿದಿದೆ.
* ಬಹು ಮಹಡಿ ವಾಹನ ನಿಲುಗಡೆ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣ
1997ನೆ ಇಸವಿಯಲ್ಲಿ ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಅನಿಲ್ ಕುಮಾರ್ರವರು ಹಂಪನಕಟ್ಟೆಯ ಹಳೇ ಬಸ್ ನಿಲ್ದಾಣವಿದ್ದ ಸ್ಥಳದಲ್ಲಿ ಆ ಪ್ರದೇಶಕ್ಕೆ ಅಗತ್ಯವಾಗಿ ಬೇಕಾಗಿರುವ ಬಹುಮಹಡಿ ವಾಹನ ನಿಲುಗಡೆ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಲು ಯೋಜನೆ ಹಾಕಿ ಕೊಂಡಿದ್ದರು. ಅದರ ನಕ್ಷೆಯನ್ನೂ ತಯಾರಿಸಲಾಗಿತ್ತು. ದಶಕಗಳ ಹಿಂದೆ ಅಪ್ಪಣ್ಣ ಎನ್ನುವ ಓರ್ವ ಸಾಧು ಈ ಬಸ್ ನಿಲ್ದಾಣದ ಬಳಿಯಿದ್ದ ಆಲದ ಮರದ ಕಟ್ಟೆಯ ಮೇಲೆ ಕುಳಿತುಕೊಂಡು ಬಸ್ಗಾಗಿ ಬರುವ ಕಾಯುವ ಹಾಗೂ ದಾರಿ ಹೋಕರ ಅನುಕೂಲಕ್ಕಾಗಿ ದಣಿವನ್ನು ಆರಿಸಲು ಕುಡಿಯುವ ನೀರನ್ನು ಒದಗಿಸುವ ಪರೋಪಕಾರಿ ಕೆಲಸವನ್ನು ಮಾಡುತ್ತಿದ್ದ. ಇದೇ ಕಾರಣವಾಗಿ ಆ ಸ್ಥಳ ಅವನ ಹೆಸರಿನಲ್ಲಿ ಹಂಪನ ಕಟ್ಟೆಯೆಂದು ಕರೆಯಲ್ಪಟ್ಟಿತು. ಅವನಿಗೆ ಸ್ಮಾರಕವಾಗಿ ಆ ಸ್ಥಳದಲ್ಲಿ ಅವನ ಹೆಸರು ಮತ್ತು ಸೇವೆಗೆ ಪ್ರತೀಕವಾಗಿ ಒಂದು ಗಿಡವನ್ನು ನೆಟ್ಟು ಕಟ್ಟೆಯನ್ನು ಕಟ್ಟಿ ಸ್ಮಾರಕವನ್ನು ನಿರ್ಮಿಸಬೇಕೆಂಬ ಸಾರ್ವಜನಿಕ ಸಲಹೆಯನ್ನು ಅನಿಲ್ ಕುಮಾರ್ರವರು ಒಪ್ಪಿಕೊಂಡಿದ್ದರು. ಆದರೆ ಈ ಯೋಜನೆ ಕಾರ್ಯಗತವಾಗುವ ಮೊದಲೇ ಅನಿಲ್ ಕುಮಾರ್ರವರು ವರ್ಗಾವಣೆಗೊಂಡರು. ಬಳಿಕ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲವೆನ್ನುವುದು ದುರದೃಷ್ಟಕರ ವಿಷಯ. ವರ್ಷದಲ್ಲಿ ಒಂದೆರಡು ಬಾರಿ ನಮ್ಮ ರಾಜಕಾರಣಿಗಳು ಈ ವಿಷಯದ ಬಗ್ಗೆ ಪ್ರಸ್ತಾಪಿಸಿ, ಶೀಘ್ರದಲ್ಲಿ ಈ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿಕೆಗಳನ್ನು ಕೊಡುವುದರ ವಿನಃ ಬೇರಾವ ಪ್ರಗತಿಯೂ ಈ ನಿಟ್ಟಿನಲ್ಲಿ ಆಗುತ್ತಿಲ್ಲ.
* ಹಂಪನಕಟ್ಟೆಯಲ್ಲಿ ಮೇಲ್ ಸೇತುವೆ ನಿರ್ಮಾಣ
ಬುದ್ಧಿವಂತರ, ವಿದ್ಯಾವಂತರ, ಪ್ರತಿಭಾವಂತರ ಜಿಲ್ಲೆ ಎಂಬ ಖ್ಯಾತಿಯನ್ನು ಪಡೆದ ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಹುದ್ದೆ ಪ್ರಥಮ ಬಾರಿಯಾಗಿ ಒದಗಿ ಬಂದದ್ದು, 1992ನೆ ಇಸವಿಯಲ್ಲಿ. ನಮ್ಮ ಜಿಲ್ಲೆಯ ಪ್ರತಿಷ್ಠಿತ ರಾಜಕಾರಣಿ ವೀರಪ್ಪ ಮೊಯ್ಲಿಯವರು ನಮ್ಮೆಲ್ಲರ ಕನಸು ನನಸಾದಂತೆ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕಗೊಂಡರು. ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಅವರ ಕೊಡುಗೆಯೆಂಬಂತೆ ಹಂಪನಕಟ್ಟೆ ಸಿಂಡಿಕೇಟ್ ಬ್ಯಾಂಕ್ ಕಟ್ಟಡದ ಬಳಿಯಿಂದ ಗಡಿಯಾರ ಗೋಪುರದವರೆಗೆ ಮೇಲ್ ಸೇತುವೆ ನಿರ್ಮಾಣ ಮಾಡಲಾಗುವುದು ಎನ್ನುವ ಸಿಹಿಸುದ್ದಿ ಬಿತ್ತರವಾಯಿತು. ಆದರೆ ಕೇವಲ ಒಂದೂವರೆ ವರ್ಷದಲ್ಲಿ ಮೊಯ್ಲಿಯವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು. ಒಟ್ಟಿಗೆ ಇ ಮೇಲ್ ಸೇತುವೆ ಯೋಜನೆ ಕೂಡಾ ನೆಲ ಕಚ್ಚಿತು. ಇದೀಗ ಮತ್ತೆ, ನಗರದ ಪುರಭವನದ ಎದುರಿನ ಮೈದಾನ ರಸ್ತೆಯಲ್ಲಿ ಸ್ಕೈವಾಕ್ (ಪಾದಚಾರಿ ಮೇಲ್ ಸೇತುವೆ) ನಿರ್ಮಾಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ನಿರ್ಣಯಿಸಲಾಗಿದೆ. ಅದು ಯಾವಾಗ ಆಗುತ್ತದೋ ಕಾದು ನೋಡಬೇಕಿದೆ.