ಸಂಜೀವಿನಿ ಬೇಟೆಯಲ್ಲಿ ಉತ್ತರಾಖಂಡ ಸರಕಾರ
![ಸಂಜೀವಿನಿ ಬೇಟೆಯಲ್ಲಿ ಉತ್ತರಾಖಂಡ ಸರಕಾರ ಸಂಜೀವಿನಿ ಬೇಟೆಯಲ್ಲಿ ಉತ್ತರಾಖಂಡ ಸರಕಾರ](https://www.varthabharati.in/sites/default/files/images/articles/2016/08/8/story3-hanuman.png)
ಸಂಜೀವಿನಿ ಎಂಬ ಪೌರಾಣಿಕ ಮೂಲಿಕೆಯನ್ನು ಪತ್ತೆಹಚ್ಚಲು ಉತ್ತರಾಖಂಡ ಸರಕಾರವು ಪ್ರಯತ್ನಿಸಿದ್ದುದು ಇದು ಮೊದಲೇನಲ್ಲ. 2009ರಲ್ಲಿ ಬಿಜೆಪಿಯ ರಮೇಶ್ ‘ನಿಶಾಂಕ್’ ಪೋಖ್ರಿಯಾಲ್ ನೇತೃತ್ವದ ಸರಕಾರವು 6 ಲಕ್ಷ ರೂ. ಮೊತ್ತದ ನಿಧಿಯನ್ನು ಇದಕ್ಕೆಂದೇ ತೆಗೆದಿರಿಸಿತ್ತು ಹಾಗೂ ಹೆಚ್ಚುವರಿ ಅನುದಾನಕ್ಕಾಗಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಕೇಂದ್ರದಿಂದ ಅನುದಾನ ಬಾರದ ಕಾರಣ, ಈ ಯೋಜನೆಯು ಮೂಲೆಗೆ ಸರಿಯಿತು.
ದ್ರೋಣಗಿರಿಯಲ್ಲಿ ವಿರೂಪಗೊಂಡ ಬೆಟ್ಟ
ಈಗಿನ ದ್ರೋಣಗಿರಿ ಗ್ರಾಮವು ಉತ್ತರಾಖಂಡದಲ್ಲಿ ಹರಡಿರುವ ಹಿಮಾಲಯ ಪರ್ವತಶ್ರೇಣಿಯಲ್ಲಿದೆ. ಅಲ್ಲಿರುವ ಬೆಟ್ಟವೊಂದನ್ನು ಸ್ಥಳೀಯರು ಪೂಜಿಸುತ್ತಿದ್ದಾರೆ. ಜೀವರಕ್ಷಕ ಸಂಜೀವಿನಿಗಾಗಿ ಹನುಮಂತನು ಪರ್ವತವನ್ನೇ ವಿರೂಪಗೊಳಿಸಿದ್ದನೆಂದು ಅವರು ನಂಬುತ್ತಾಬಂದಿದ್ದಾರೆ.
ಸಮುದ್ರಮಟ್ಟದಿಂದ 11,800 ಸಾವಿರ ಅಡಿ ಎತ್ತರದಲ್ಲಿರುವ ಈ ಹಳ್ಳಿಯನ್ನು ತಲುಪುವುದು ತೀರಾ ಕಷ್ಟಕರವಾಗಿದೆ. ಪ್ರವಾಸಿಗರು ಜೋಶಿಮಠದಿಂದ ಜುಮ್ಮಾಹ್ವರೆಗೆ 45 ಕಿ.ಮೀ. ಬಸ್ನಲ್ಲಿ ಸಂಚರಿಸಬೇಕಾಗುತ್ತದೆ. ಆನಂತರ ಹಳ್ಳಿಯನ್ನು ತಲುಪಲು 8 ಕಿ.ಮೀ.ವರೆಗಿನ ದುರ್ಗಮ ದಾರಿಯಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ. ಈ ಗ್ರಾಮದಲ್ಲಿ 400 ಭೋತಿಯಾ ಸಮುದಾಯದ ಕುಟುಂಬಗಳು ನೆಲೆಸಿವೆ. ಕಡು ಚಳಿಗಾಲದಲ್ಲಿ ಈ ಕುಟುಂಬಗಳು ತಗ್ಗುಪ್ರದೇಶಗಳ ಗ್ರಾಮಗಳಿಗೆ ವಲಸೆ ಹೋಗುತ್ತವೆ.
ಈ ಪ್ರದೇಶದಲ್ಲಿ ಬಾಗಿನಿ, ಚಂಗಾಬಾಂಗ್ ಹಾಗೂ ನೀತಿ ಎಂಬಿತ್ಯಾದಿ ನೀರ್ಗಲ್ಲು ಶಿಖರಗಳಿದ್ದು, ಬೇಸಿಗೆಯ ವೇಳೆ ಭಾರೀ ಸಂಖ್ಯೆಯ ಹೊರಗಿನ ಜನರನ್ನು ಆಕರ್ಷಿಸುತ್ತವೆ. ಇವರಲ್ಲಿ ಹೆಚ್ಚಿನವರು ಗಿಡಮೂಲಿಕೆಗಳನ್ನು ಸಂಗ್ರಹಿಸುವವರಾಗಿದ್ದರೆ, ಇನ್ನು ಕೆಲವರು ಕಸ್ತೂರಿಮೃಗ ಹಾಗೂ ಹಿಮಾಲಯ ಕರಡಿಯಂತಹ ಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡುವವರಾಗಿದ್ದಾರೆ.
ಇಷ್ಟೊಂದು ಎತ್ತರದ ಪ್ರದೇಶದಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲದಿರುವುದರಿಂದ ಗ್ರಾಮಸ್ಥರು ಕುರಿಸಾಕಣೆ ಹಾಗೂ ಗಿಡಮೂಲಿಕೆಗಳನ್ನು ನಗರಗಳಲ್ಲಿ ಮಾರಾಟ ಮಾಡುವ ಮೂಲಕ ಜೀವನಸಾಗಿಸುತ್ತಾರೆ.‘ನೈಸರ್ಗಿಕ ವಯಾಗ್ರ’ ಎಂದೇ ಕರೆಯಲ್ಪಡುವ ಕೀಡಿ ಎಂಬ ಮೂಲಿಕೆಯನ್ನು ಅವರು ಇಲ್ಲಿನ ಹುಲ್ಲುಗಾವಲು ಪ್ರದೇಶಗಳಿಂದ ಸಂಗ್ರಹಿಸಿ ಮಾರಾಟ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಅದಕ್ಕೆ ಭಾರೀ ಬೇಡಿಕೆಯಿದ್ದು, ಚೀನಾ ಮತ್ತಿತರ ಆಗ್ನೇಯ ಏಶ್ಯದ ರಾಷ್ಟ್ರಗಳಿಗೆ ಕಳ್ಳಸಾಗಣೆಯಾಗುತ್ತಿವೆ.
ಹಿಮಾಲಯ ಪರ್ವತಶ್ರೇಣಿಗಳಲ್ಲಿ ಪೌರಾಣಿಕ ಜೀವರಕ್ಷಕ ಗಿಡಮೂಲಿಕೆಯಾದ ಸಂಜೀವಿನಿಯನ್ನು ಪತ್ತೆ ಹಚ್ಚುವುದಕ್ಕಾಗಿ 25 ಕೋಟಿ ರೂ. ವೆಚ್ಚದ ಅನ್ವೇಷಣಾ ಯೋಜನೆಗೆ ಚಾಲನೆ ನೀಡುವ ಉತ್ತರಾಖಂಡ ಸರಕಾರದ ನಿರ್ಧಾರವು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಗಿಡಮೂಲಿಕೆಗಾಗಿ ಇಡೀ ಸಂಜೀವಿನಿ ಪರ್ವತವನ್ನು ವಿರೂಪಗೊಳಿಸಿದ್ದಕ್ಕಾಗಿ ಹಿಮಾಲಯದ ಹಳ್ಳಿಯೊಂದರ ಜನತೆ ಹನುಮಾನ್ನನ್ನು ಈಗಲೂ ಕ್ಷಮಿಸಲು ತಯಾರಿಲ್ಲ. ಇಂತಹ ಸ್ವಾರಸ್ಯಕರ ಕತೆಯೊಂದನ್ನು ನೆನಪಿಸಿಕೊಳ್ಳಲು ಇದೊಂದು ಸುಸಂದರ್ಭವಾಗಿದೆ.
ಲಕ್ಷ್ಮಣನಿಗೆ ಪುನಶ್ಚೇತನ ನೀಡಿದ ಸಂಜೀವಿನಿ
ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಕಾರಣಕ್ಕಾಗಿ ಸಂಜೀವಿನಿ ಹೆಚ್ಚು ಜನಪ್ರಿಯವಾಗಿದೆ. ಈ ಪುರಾಣಕತೆಯ ಪ್ರಕಾರ ಶ್ರೀಲಂಕಾದ ದೊರೆ ರಾವಣನ ಬಂಧನದಿಂದ ಸೀತೆಯನ್ನು ಪಾರುಮಾಡಲು ರಾಮನು ಕಾಳಗ ನಡೆಸುತ್ತಿದ್ದಾಗ, ಆತನ ಸೋದರ ಲಕ್ಷ್ಮಣನು ಗಂಭೀರವಾಗಿ ಗಾಯಗೊಳ್ಳುತ್ತಾನೆ.
ಆಗ ರಾಮನು ವೈದ್ಯ ಸುಸೇನನನ್ನು ಲಕ್ಷ್ಮಣನ ಚಿಕಿತ್ಸೆಗಾಗಿ ಕರೆಯಿಸಿಕೊಳ್ಳುತ್ತಾನೆ. ಆಗ ಸುಸೇನನು ಲಕ್ಷ್ಮಣನನ್ನು ಬದುಕಿ ಸಲು ರಾಮನ ಮುಖ್ಯ ಸಹಚರನಾದ ಹನುಮಂತನಿಗೆ ಹಿಮಾಲಯ ಪರ್ವತಶ್ರೇಣಿಯಲ್ಲಿರುವ ನಾಗಶ್ರೇಷ್ಠ ಸಂಜೀವಿನಿಯನ್ನು ತರುವಂತೆ ಆದೇಶಿಸುತ್ತಾನೆ. ಹಿಮಾಲಯದ ದ್ರೋಣಗಿರಿ ಪರ್ವತವಲಯದಲ್ಲಿ ಸಂಜೀವಿನಿಯು ಬೆಳೆಯುತ್ತಿದೆಯೆಂದು ಸುಸೇನನು ಹನುಮಂತನಿಗೆ ತಿಳಿಸುತ್ತಾನೆ. ರಾತ್ರಿಯಲ್ಲಿ ಈ ಗಿಡವು ವಿಶಿಷ್ಟವಾದ ಬೆಳಕೊಂದನ್ನು ಹೊರಸೂಸುತ್ತದೆಯೆಂಬ ಮಾಹಿತಿಯನ್ನೂ ಆತ ನೀಡುತ್ತಾನೆ. ಹನುಮಂತ ಕೂಡಲೇ ಅಲ್ಲಿಗೆ ತೆರಳುತ್ತಾನೆ. ಆದರೆ ಆತ ದ್ರೋಣಗಿರಿ ಪರ್ವತದ ಬಳಿ ಬಂದಾಗ ಗೊಂದಲಕ್ಕೀಡಾಗುತ್ತಾನೆ ಮತ್ತು ಸಂಜೀವಿನಿಯನ್ನು ಹೇಗೆ ಹುಡುಕುವುದೆಂದೇ ಆತನಿಗೆ ತೋಚುವುದಿಲ್ಲ.
ಆದರೆ ತಡವಾಗಬಾರದೆಂದು ವಾಯುಪುತ್ರನಾದ ಆತ ಸಂಜೀವಿನಿ ಗಿಡವಿರುವ ಇಡೀ ಪರ್ವತವನ್ನೇ ಎತ್ತಿ ತರುತ್ತಾನೆ. ಕೊನೆಗೂ ಸಂಜೀವಿನಿಯ ಮೂಲಕ ಲಕ್ಷ್ಮಣನು ಚೇತರಿಸಿಕೊಳ್ಳುತ್ತಾನೆ. ಇದು ಶತ ಶತಮಾನಗಳಿಂದ ಜನಪ್ರಿಯವಾಗಿರುವ ರಾಮಾಯಣದ ಕತೆಯಾಗಿದೆ.
ಸಂಜೀವಿನಿಯ ಬೇಟೆಯಲ್ಲಿ...
ಇಂದು ಸಂಜೀವಿನಿಯು ಒಂದು ಪೌರಾಣಿಕ ಗಿಡಮೂಲಿಕೆಯಾಗಿಯೇ ಉಳಿದುಬಿಟ್ಟಿದೆ. ಅದು ಅಸ್ತಿತ್ವದಲ್ಲಿರುವ ಬಗ್ಗೆ ಈವರೆಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಲಭಿಸಿಲ್ಲ. ಆದರೆ ಸ್ಥಳೀಯರು ಮಾತ್ರ ಸಂಜೀವಿನಿ ಮೂಲಿಕೆಯು ಅಸ್ತಿತ್ವದಲ್ಲಿದೆಯೆಂದೇ ವಾದಿಸುತ್ತಾರೆ. ಟಿಬೆಟ್ಗೆ ತಾಗಿಕೊಂಡಿರುವ ಉತ್ತರಾಖಂಡದ ಗಡಿಯಲ್ಲಿ ವ್ಯಾಪಕವಾದ ಅನ್ವೇಷಣೆಯನ್ನು ನಡೆಸಿದಲ್ಲಿ ಸಂಜೀವಿನಿ ಮೂಲಿಕೆಯನ್ನು ಪತ್ತೆಹಚ್ಚಬಹುದೆಂದು ಸ್ಥಳೀಯರು ಹೇಳುತ್ತಾರೆ. ಈ ಪೌರಾಣಿಕ ಮೂಲಿಕೆಯನ್ನು ಪತ್ತೆಹಚ್ಚಲು ರಾಜ್ಯ ಸರಕಾರವು ಪ್ರಯತ್ನಿಸಿದ್ದುದು ಇದು ಮೊದಲೇನಲ್ಲ. 2009ರಲ್ಲಿ ಬಿಜೆಪಿಯ ರಮೇಶ್ ‘ನಿಶಾಂಕ್’ ಪೋಖ್ರಿಯಾಲ್ ನೇತೃತ್ವದ ಉತ್ತರಾಖಂಡ ಸರಕಾರವು 6 ಲಕ್ಷ ರೂ. ಮೊತ್ತದ ನಿಧಿಯನ್ನು ಇದಕ್ಕೆಂದೇ ತೆಗೆದಿರಿಸಿತ್ತು ಹಾಗೂ ಹೆಚ್ಚುವರಿ ಅನುದಾನಕ್ಕಾಗಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಕೇಂದ್ರದಿಂದ ಅನುದಾನ ಬಾರದ ಕಾರಣ, ಈ ಯೋಜನೆಯು ಮೂಲೆಗೆ ಸರಿಯಿತು.
ಈ ಸಲ ಕಾಂಗ್ರೆಸ್ ನೇತೃತ್ವದ ಉತ್ತರಾಖಂಡ ಸರಕಾರವು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಹೆಚ್ಚುವರಿ ಅನುದಾನ ಕ್ಕಾಗಿ ಮನವಿ ಸಲ್ಲಿಸಿತ್ತು. ಆದರೆ ನಿರೀಕ್ಷೆಯಂತೆ ಅದು ತಿರಸ್ಕೃತಗೊಂಡಿತ್ತು.
ಆದಾಗ್ಯೂ ಈ ಅನ್ವೇಷಣಾ ಕಾರ್ಯಾಚರಣೆಯು ಪೂರ್ವಯೋಜನೆಯಂತೆ ಮುಂದುವರಿಯಲಿದೆ. ಉತ್ತರಾಖಂಡ ಸರಕಾರದಲ್ಲಿ ಪರ್ಯಾಯ ಔಷಧಗಳ ಸಚಿವರಾದ ಸುರೇಂದ್ರ ನೇಗಿ ನೇತೃತ್ವದ ಆಯುಷ್ ಖಾತೆಯು ಈ ಶೋಧದ ನೇತೃತ್ವ ವಹಿಸುವ ನಿರೀಕ್ಷೆಯಿದೆ.
ಮಾಂತ್ರಿಕ ಗುಣಗಳನ್ನು ಹೊಂದಿದೆಯೆಂಬ ಪ್ರತೀತಿಯಿರುವ ಸಂಜೀವಿನಿಯು ಕೇವಲ ರಾಮಾಯಣದಲ್ಲಿ ಮಾತ್ರವಲ್ಲ ಮಹಾಭಾರತದಲ್ಲೂ ಉಲ್ಲೇಖಗೊಂಡಿದೆ.
ಅಸುರರ ಗುರು ಶುಕ್ರಾಚಾರ್ಯರು, ದೇವತೆಗಳಿಂದ ವಧಿಸಲ್ಪಟ್ಟ ಅಸುರರನ್ನು ಬದುಕಿಸಲು ಈ ಗಿಡಮೂಲಿಕೆಯನ್ನು ಬಳಸುತ್ತಿದ್ದರೆಂದು ಪುರಾಣಗಳು ಹೇಳುತ್ತವೆ. ಪಾಂಡವರ ಪೂರ್ವಿಕನಾದ ಯಯಾ ಮರುಯೌವನವನ್ನು ಪಡೆಯಲು ಹಾಗೂ ಪುರುಷತ್ವವನ್ನು ಪಡೆಯಲು ಈ ಮೂಲಿಕೆಯು ನೆರವಾಗಿತ್ತೆಂದು ಹೇಳಲಾಗುತ್ತಿದೆ.
ಹನುಮಾನ್ನನ್ನು ಕ್ಷಮಿಸಿದ ಗ್ರಾಮಸ್ಥರು
ಪ್ರಾಕೃತಿಕವಾಗಿ ಅತ್ಯಂತ ಸಂವೇದನಾಕಾರಿಯಾದ ಈ ಪ್ರಾಂತದ ಜನರ ಪಾಲಿಗೆ ಹನುಮಂತ ಓರ್ವ ‘ವಿಲನ್’ ಆಗಿದ್ದಾನೆ. ತಾವು ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದ್ದ ಪರ್ವತವನ್ನು ವಿರೂಪಗೊಳಿಸಿದ್ದಕ್ಕಾಗಿ ದ್ರೋಣಗಿರಿಯ ಗ್ರಾಮಸ್ಥರು ಹನುಮಂತನನ್ನು ಇನ್ನೂ ಕ್ಷಮಿಸಿಲ್ಲ.
ಅದಕ್ಕೆ ಸಂಬಂಧಿಸಿದ ಜನಪದ ಕತೆಯೊಂದು ಹೀಗಿದೆ. ತ್ರೇತಾಯುಗದಲ್ಲಿ ರಾಮಾಯಣ ಯುದ್ಧದಲ್ಲಿ ಗಾಯಗೊಂಡ ಲಕ್ಷ್ಮಣನನ್ನು ಬದುಕಿಸಲು ಹನುಮಂತನು ಸಂಜೀವಿನಿಯನ್ನು ಹುಡುಕುತ್ತಾ ದ್ರೋಣಗಿರಿಗೆ ಬರುತ್ತಾನೆ. ಆಗ ಗ್ರಾಮಸ್ಥರು ಆತನಿಗೆ ಸಂಜೀವಿನಿಯಿರುವ ಪರ್ವತಕ್ಕೆ ಹೋಗಲು ದಾರಿಬಿಟ್ಟುಕೊಡುವುದಿಲ್ಲ.
ಆಗಲೇ ಕಾಲಮೀರಿರುತ್ತದೆ ಮತ್ತು ಲಕ್ಷ್ಮಣನು ಸಾವಿನ ಅಂಚಿಗೆ ತಲುಪಿರುತ್ತಾನೆ. ಆಗ ಹನುಮಂತನು ಬಡಪಾಯಿ ಸಾಧುವಿನ ವೇಷದಲ್ಲಿ ಹಳ್ಳಿಯ ವೃದ್ಧ ಮಹಿಳೆಯ ಬಳಿಗೆ ಬಂದು, ಸಂಜೀವಿನಿ ಮೂಲಿಕೆ ಬೆಳೆಯುವ ಮಾಯಾ ಪರ್ವತವನ್ನು ತೋರಿಸುವಂತೆ ಬೇಡಿಕೊಳ್ಳುತ್ತಾನೆ..
ಆಗ ಮನಕರಗಿದ ಮಹಿಳೆಯು, ಆತನಿಗೆ ಪರ್ವತಶ್ರೇಣಿಯ ನಡುವೆ ಗುಪ್ತವಾಗಿದ್ದ ಸಂಜೀವಿನಿ ಪರ್ವತವನ್ನು ತೋರಿಸುತ್ತಾಳೆ. ಆಗ ಹನುಮಂತನು ತಡಮಾಡದೆ ಪರ್ವತದಲ್ಲಿ ಸಂಜೀವಿನಿಗಾಗಿ ಹುಡುಕಾಡತೊಡಗುತ್ತಾನೆ. ಆದರೆ ಸಂಜೀವಿನಿಯನ್ನು ಗುರುತಿಸಲು ಅತನಿಗೆ ಸಾಧ್ಯವಾಗುವುದಿಲ್ಲ. ಕೊನೆಗೆ ಬೇರೆ ದಾರಿಕಾಣದೆ ಸಂಜೀವಿನಿ ಮೂಲಿಕೆಯಿರುವ ಪರ್ವತದ ಭಾಗವನ್ನೇ ಕಿತ್ತುಕೊಂಡು ಲಂಕೆಗೆ ತೆರಳುತ್ತಾನೆ. ಇದರಿಂದಾಗಿ ದ್ರೋಣಗಿರಿಯ ಗ್ರಾಮಸ್ಥರು ಪೂಜಿಸುತ್ತಿದ್ದ ಪರ್ವತವು ವಿರೂಪಗೊಳ್ಳುತ್ತದೆ.
ಆನಂತರ ಹನುಮಂತನಿಗೆ ಸಂಜೀವಿನಿಯಿರುವ ಪರ್ವತಕ್ಕೆ ದಾರಿ ತೋರಿಸಿದ ವೃದ್ಧೆಗೆ ಗ್ರಾಮಸ್ಥರು ಬಹಿಷ್ಕಾರ ಹಾಕುತ್ತಾರೆ. ಹಿಮಾಲಯ ಪರ್ವತಶ್ರೇಣಿಗಳಲ್ಲಿ ಮಾನವರು ನೆಲೆಸಿದಾಗಿನಿಂದ, ಅಲ್ಲಿನ ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆಯು ಜೀವನ ವಿಧಾನವಾಗಿದೆ. ಅಲ್ಲಿಯ ಪರಿಸರಕ್ಕೆ, ಸಸ್ಯ ಹಾಗೂ ಪ್ರಾಣಿ ಸಂಪತ್ತಿಗೆ ಹಾನಿಯುಂಟು ಮಾಡುವ ಯಾವುದೇ ಯತ್ನವು ಅಲ್ಲಿನ ಗ್ರಾಮಸ್ಥರಲ್ಲಿ ಅಸಾಧಾರಣವಾದ ಭಾವೋದ್ವಿಗ್ನತೆಯನ್ನು ಸೃಷ್ಟಿಸುತ್ತದೆ.
ಹನುಮಂತನು ಪರ್ವತದ ಒಂದು ಭಾಗವನ್ನು ನಾಶಪಡಿಸಿದ ಹಿನ್ನೆಲೆಯಲ್ಲಿ ಆ ಪ್ರದೇಶದ ದೇವಾಲಯಗಳಲ್ಲಿ ಈಗಲೂ ಆತನನ್ನು ಪೂಜಿಸುತ್ತಿಲ್ಲ. ಈ ಗ್ರಾಮದಲ್ಲಿ ನಡೆಯುವ ಜಾಗರ್ ಉತ್ಸವದಲ್ಲಿಯೂ ದ್ರೋಣಗಿರಿ ಪರ್ವತದ ಚೈತನ್ಯವು ದರ್ಶನ ಪಾತ್ರಿಯ ಮೇಲೆ ಅವಾಹನೆಯಾಗುತ್ತದೆಯೆಂದು ಗ್ರಾಮಸ್ಥರು ನಂಬುತ್ತಾರೆ. ಅವಾಹನೆಯಾಗುವ ಸಂದರ್ಭದಲ್ಲಿ ದರ್ಶನಪಾತ್ರಿಯ ಬಲಗೈಯು ನಿಷ್ಕ್ರಿಯಾವಸ್ಥೆಯಲ್ಲಿರುತ್ತದೆ. ಆಗ ಹನುಮಂತನು ಕಿತ್ತುಕೊಂಡು ಹೋದ ದ್ರೋಣಗಿರಿಯ ಬಲಬದಿಯನ್ನು ಇದು ಸಂಕೇತಿಸುತ್ತದೆಯೆಂದು ಗ್ರಾಮಸ್ಥರು ಹೇಳುತ್ತಾರೆ.