ಜಿಎಸ್ಟಿಗೆ ಲೋಕಸಭೆ ಅಸ್ತು: ಎಪ್ರಿಲ್ನಿಂದ ಜಾರಿಗೊಳ್ಳುವ ನಿರೀಕ್ಷೆ
ಹೊಸದಿಲ್ಲಿ, ಆ.8: ಮಹತ್ವದ ಸರಕು ಹಾಗೂ ಸೇವಾ ತೆರಿಗೆಗೆ( ಜಿಎಸ್ಟಿ) ತಿದ್ದುಪಡಿ ವಿಧೇಯಕಕ್ಕೆ ಸೋಮವಾರ ಲೋಕಸಭೆ ಅಂಗೀಕಾರ ನೀಡಿದೆ. ಕಳೆದ ವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಜಿಎಸ್ಟಿ ವಿಧೇಯಕವನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ ಮಂಡಿಸಿದರು. ಇದರೊಂದಿಗೆ ಬಹಳ ಸಮಯದಿಂದ ನೆನೆಗುದಿಯಲ್ಲಿದ್ದ ಜಿಎಸ್ಟಿಗೆ ಉಭಯ ಸದನಗಳ ಅನುಮೋದನೆ ದೊರೆತಂತಾಗಿದೆ.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದಾಗ, ಸದನದಲ್ಲಿ ಉಪಸ್ಥಿತರಿದ್ದ ಎಲ್ಲಾ 443 ಮಂದಿ ಸದಸ್ಯರು ವಿಧೇಯಕದ ಪರವಾಗಿ ಮತ ಚಲಾಯಿಸಿದರು. ವಿಧೇಯಕವನ್ನು ಬಲವಾಗಿ ವಿರೋಧಿಸುತ್ತಲೇ ಬಂದಿದ್ದ ಅಣ್ಣಾ ಡಿಎಂಕೆಯ ಎಲ್ಲಾ ಸದಸ್ಯರು ಸಭಾತ್ಯಾಗ ಮಾಡಿದರು. ಜಿಎಸ್ಟಿ ವಿಧೇಯಕದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಮಹತ್ವದ ತೆರಿಗೆ ಸುಧಾರಣೆಯು ಪಾರದರ್ಶಕತೆ ಹಾಗೂ ಬದಲಾವಣೆಯೆಡೆಗೆ ಇಡಲಾದ ಮಹಾನ್ ಹೆಜ್ಜೆಯೆಂದು ಬಣ್ಣಿಸಿದ್ದಾರೆ.
ಅಣ್ಣಾ ಡಿಎಂಕೆ ಹೊರತುಪಡಿಸಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಜಿಎಸ್ಟಿ ವಿಧೇಯಕವನ್ನು ಬೆಂಬಲಿಸಿದ್ದವು. ಲೋಕಸಭೆಯಲ್ಲಿ ಅನುಮೋದನೆ ಗೊಂಡ ಬಳಿಕ ವಿಧೇಯಕವನ್ನು ರಾಷ್ಟ್ರಪತಿಯವರ ಅಂಕಿತಕ್ಕಾಗಿ ಕಳುಹಿಸಲಾಗುವುದು. ಒಂದೇ ದೇಶ ಒಂದೇ ತೆರಿಗೆ ಎಂಬ ಘೋಷಣೆಯೊಂದಿಗೆ ಕೇಂದ್ರ ಸರಕಾರವು ಜಾರಿಗೊಳಿಸಲು ಹೊರಟಿಸುವ ಜಿಎಸ್ಟಿ ವಿಧೇಯಕವು ಎಲ್ಲಾ ರೀತಿಯ ಪರೋಕ್ಷ ತೆರಿಗೆಗಳನ್ನು ರದ್ದುಪಡಿಸಲಿದೆ ಹಾಗೂ ಎಲ್ಲಾ ಸರಕು ಹಾಗೂ ಸೇವೆಗಳಿಗೆ ದೇಶಾದ್ಯಂತ ಏಕರೂಪದ ತೆರಿಗೆ ವಿಧಿಸಲಾಗುವುದು. ಮುಂದಿನ ವರ್ಷದ ಎಪ್ರಿಲ್ನಿಂದ ಜಿಎಸ್ಟಿ ವಿಧೇಯಕವನ್ನು ಜಾರಿಗೊಳಿಸುವ ನಿರೀಕ್ಷೆಯನ್ನು ಕೇಂದ್ರ ಸರಕಾರ ಹೊಂದಿದೆ.
ಕಳೆದ ವಾರ ಜಿಎಸ್ಟಿ ತಿದ್ದುಪಡಿ ವಿಧೇಯಕವನ್ನು ರಾಜ್ಯಸಭೆ ಅಂಗೀಕರಿಸಿದ್ದು, ಇಂದು ಅದನ್ನು ಚರ್ಚೆಗಾಗಿ ಲೋಕಸಭೆಗೆ ಕಳುಹಿಸಿಕೊಡಲಾಗಿತ್ತು. ರಾಜ್ಯಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿಲ್ಲವಾದ ಕಾರಣ, ಅಲ್ಲಿ ಈ ವಿಧೇಯಕವನ್ನು ಅಂಗೀಕರಿಸುವುದು ಅದರ ಪಾಲಿಗೆ ಅಗ್ನಿಪರೀಕ್ಷೆಯಾಗಿತ್ತು. ಆದರೆ ಲೋಕಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿರುವ ಕಾರಣ ಅದು ಆ ಬಗ್ಗೆ ಆತಂಕಗೊಂಡಿರಲಿಲ್ಲ.