ಬೆಳ್ತಂಗಡಿ: ತಾ.ಪಂ. ಸಭೆಯಲ್ಲಿ ಪ್ರತಿಧ್ವನಿಸಿದ ಅಟ್ರಿಂಜೆ ಕೊರಗರ ಬದುಕು
![ಬೆಳ್ತಂಗಡಿ: ತಾ.ಪಂ. ಸಭೆಯಲ್ಲಿ ಪ್ರತಿಧ್ವನಿಸಿದ ಅಟ್ರಿಂಜೆ ಕೊರಗರ ಬದುಕು ಬೆಳ್ತಂಗಡಿ: ತಾ.ಪಂ. ಸಭೆಯಲ್ಲಿ ಪ್ರತಿಧ್ವನಿಸಿದ ಅಟ್ರಿಂಜೆ ಕೊರಗರ ಬದುಕು](https://www.varthabharati.in/sites/default/files/images/articles/2016/08/9/9dl_TP-(2).jpg)
ಬೆಳ್ತಂಗಡಿ, ಆ. ತಾಲೂಕಿನಲ್ಲಿ ಕೊರಗರ ಸ್ಥಿತಿಗತಿ ತುಂಬಾ ಚಿಂತಾಜನಕವಾಗಿದೆ. ಇನ್ನೂ ಮೂಲಭೂತ ಸೌಲಭ್ಯಗಳಿಲ್ಲದೆ ಅವರು ಬದುಕುತ್ತಿದ್ದಾರೆ. ಅವರಿಗಾಗಿಯೇ ಇರುವ ಇಲಾಖೆಗಳು ಅವರತ್ತ ತಿರುಗಿಯೂ ನೋಡುತ್ತಿಲ್ಲ. ನಾವರದ ಅಟ್ರಿಂಜೆಯ ಐದು ಕೊರಗ ಕುಟುಂಬಗಳ ಬಗ್ಗೆ ಕೂಡಲೆ ಅಲ್ಲಿಗೆ ತೆರಳಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ತಾಲೂಕು ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾ.ಪಂ ಸಾಮಾನ್ಯ ಸಭೆ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ ಕುಕ್ಕೇಡಿ, ಕೊರಗ ಕುಟುಂಬಗಳು ಈ ರೀತಿ ಬದುಕುತ್ತಿದ್ದರೆ ಅದಕ್ಕೆ ಅಧಿಕಾರಿಗಳು ಜನಪ್ರತಿನಿಧಿಗಳು ಸಮಾನ ಜವಾಬ್ದಾರರು. ಈ ಐದು ಕುಟುಂಬಗಳ ಬಗ್ಗೆ ಇಲಾಖೆಗಳಲ್ಲಿ ಮಾಹಿತಿಯಿಲ್ಲವಾದುದು ಹೇಗೆ ಎಂದು ಪ್ರಶ್ನಿಸಿದರು. ಇವರಿಗೆ ಆಹಾರ ಪೂರೈಕೆ ಮಾಡುವಾಗ ಇಲಾಖೆಗೆ ಯಾಕೆ ಮಾಹಿತಿ ಸಿಕ್ಕಿಲ್ಲ, ಶಾಲೆಗೆ ಸೇರಿದ ಮಗು ಎರಡು ತಿಂಗಳು ಶಾಲೆಯಿಂದ ಹೊರಗುಳಿದರೂ ಶಿಕ್ಷಣ ಇಲಾಖೆ ಅದರತ್ತ ಯಾಕೆ ಗಮನಿಸಿಲ್ಲ ಎಂದು ಪ್ರಶ್ನಿಸಿದರು.
ಕೊರಗ ಕುಟುಂಬಗಳು ಈ ರೀತಿ ಬದುಕನ್ನು ನಡೆಸುವಂತಾಗಲು ಸಮಾಜಕಲ್ಯಾಣ ಇಲಾಖೆ, ಐಟಿಡಿಪಿ ಅಧಿಕಾರಿಗಳು, ಶಿಕ್ಷಣ ಇಲಾಖೆ , ಕಂದಾಯ ಇಲಾಖೆಗಳು ಕಾರಣವಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆದು ಕುಟುಂಬಗಳ ಸ್ಥಿತಿಗತಿಗಳ ಬಗ್ಗೆ ತಿಳಿಯಲು ಸಂಬಂಧಿಸಿದ ಎಲ್ಲ ಇಲಾಖಾಧಿಕಾರಿಗಳು ಕೂಡಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವುದಾಗಿ ತಿಳಿಸಲಾಯಿತು. ಈ ಕುಟುಂಬಗಳಿಗೆ ಜಮೀನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರರು ತಿಳಿಸಿದರು. ಜಮೀನು ದೊರೆತರೆ ಮನೆ ಕಟ್ಟಿಕೊಡಲು ಸಿದ್ದರಿರುವುದಾಗಿ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡುವ ಕಾರ್ಯ ಗ್ರಾಮಮಟ್ಟದಲ್ಲೇ ಆಗಬೇಕು ಎಂದು ಈ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈ ನಿರ್ಣಯಕ್ಕೆ ತದ್ವಿರುದ್ಧವಾಗಿ ಅಧ್ಯಕ್ಷರು ನಡೆದುಕೊಂಡಿದ್ದಾರೆ ಎಂದು ಸದಸ್ಯೆ ವಸಂತಿ ಆರೋಪಿಸಿದರು. ತಹಶೀಲ್ದಾರ್ ಪ್ರಸನ್ನ ಮೂರ್ತಿ ಸಾಧ್ಯವಾದಷ್ಟು ಪರಿಹಾರವನ್ನು ಫಲಾನುಭವಿಗಳ ಮನೆಗೇ ಹೋಗಿ ಕೊಟ್ಟಿದ್ದೇವೆ. ಸಿಗದವರಿಗೆ ತಾಲೂಕು ಕಚೇರಿಗೆ ಬರ ಹೇಳಲು ಹೇಳಿದ್ದೇವೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಡಿಸಿ ಮನ್ನಾ ಜಾಗವು ಅರ್ಹರಿಗೆ ಸಿಗಲು ಸರಕಾರದ ಆದೇಶ ಕಾಯಬೇಕು. ಆದರೆ ಬೇರೆಯವರಿಗೆ ಶೀಘ್ರವಾಗಿ ಮಂಜೂರಾಗುತ್ತದೆ. ಕಲ್ಮಂಜ ಗ್ರಾಮದಲ್ಲಿ ಡಿಸಿಮನ್ನಾ ಜಾಗವನ್ನು ಇತರರಿಗೆ ಮಂಜೂರು ಮಾಡಲಾಗಿದೆ ಎಂದು ಜಿ.ಪಂ.ಸದಸ್ಯ ಕೊರಗಪ್ಪ ನಾಯ್ಕ ಪ್ರಶ್ನಿಸಿದರು. ಬೇರೆಯವರಿಗೆ ಜಾಗ ಮಂಜೂರಾಗಿದ್ದಲ್ಲಿ ಅದು ಅನೂರ್ಜಿತವಾಗುತ್ತಿದೆ. ಇಂತಹ ಪ್ರಕರಣಗಳು ಇದ್ದಲ್ಲಿ ಶೀಘ್ರ ನನ್ನ ಗಮನಕ್ಕೆ ತನ್ನಿ ಎಂದು ತಹಶೀಲ್ದಾರ್ ಪ್ರತಿಕ್ರಿಯಿಸಿದರು.
ದೊಡ್ಡ ಗ್ರಾ.ಪಂ ಆಗಿರುವ ಉಜಿರೆಗೆ ಕಾಯಂ ಗ್ರಾಮಕರಣಿಕ ಇರುವುದು ಅವಶ್ಯ. ವಾರದಲ್ಲಿ ಎರಡು ಮೂರು ದಿನ ಇದ್ದರೆ ಹದಿನೈದು ಸಾವಿರ ಜನರಿರುವ ಪಂ. ಕೆಲಸಗಳಿಗೆ ತೊಂದರೆಯಾಗುತ್ತದೆ ಎಂದು ಸದಸ್ಯ ಶಶಿಧರ ಕಲ್ಮಂಜ ಹೇಳಿದಾಗ, ತಾಲೂಕಿನಲ್ಲಿ ಗ್ರಾಮ ಕರಣಿಕರ ಹಾಗೂ ಸಿಬ್ಬಂದಿಯ ಕೊರತೆ ಇದೆ. ಇಲ್ಲಿನ ಸಮಸ್ಯೆಗೆ ಪರಿಹಾರ ಕಾಣಲು ಪ್ರಯತ್ನಿಸಲಾಗುವುದು ಎಂದು ತಿಳಿಸಲಾಯಿತು. ಗ್ರಾಮ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಬರದಿದ್ದರೆ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಸದಸ್ಯ ಜಯರಾಂ ಹೇಳಿದಾಗ ಕಾರ್ಯನಿರ್ವಹಣಾಧಿಕಾರಿಯವರು, ಎಲ್ಲಾ ಕಡೆ ತಾಲೂಕು ಮಟ್ಟದ ಅಧಿಕಾರಿಗಳು ಹೋಗುವುದು ಅಸಾಧ್ಯ. ಆದರೆ ಕುಗ್ರಾಮಗಳಿಗೆ ವಿಶೇಷ ಆದ್ಯತೆ ಮೇರೆಗೆ ತಾ.ಮಟ್ಟದ ಅಧಿಕಾರಿಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ತಾಪಂ ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ. ಆರ್. ನರೇಂದ್ರ, ತಹಶೀಲ್ದಾರ್ ಪ್ರಸನ್ನಮೂರ್ತಿ, ವಿವಿಧ ಇಲಾಖೆಯ ಅಧಿಕಾರಿಗಳು, ಜಿಪಂ ಹಾಗೂ ತಾಪಂ ಸದಸ್ಯರು ಇದ್ದರು.
ತಾಲೂಕಿನ ಅನೇಕ ಭಾಗಗಳಲ್ಲಿ ಬೆಳಗ್ಗೆ ಸಂಜೆ ಸಮರ್ಪಕವಾದ ಬಸ್ ಇಲ್ಲದೆ ಪಾಸ್ ಇರುವ ವಿದ್ಯಾರ್ಥಿಗಳು ಪರದಾಡುತ್ತಿರುವ ಬಗ್ಗೆ ಸದಸ್ಯರುಗಳು ವಿವರಿಸಿದರು. ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ನಿಗಮದ ಅಧಿಕಾರಿಗಳನ್ನು ಸೇರಿಸಿ ಆ. 14 ರಂದು ಸಭೆ ನಡೆಸುವುದಾಗಿ ಶಾಸಕರು ತಿಳಿಸಿದರು. ಅದೇ ರೀತಿ 25 ರಂದು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಜನಸ್ಪಂದನ ನಡೆಸಲಾಗುವುದು ಸಭೆಯಲ್ಲಿ ತಿಳಿಸಲಾಯಿತು.