ಮುಖ್ಯಮಂತ್ರಿಗಳಲ್ಲೊಂದು ವಿನೀತ ಕೋರಿಕೆ

ಮಾನ್ಯ ಮುಖ್ಯಮಂತ್ರಿಗಳಲ್ಲಿ ನನ್ನ ಮನವಿಯೇನೆಂದರೆ ಫಯಾಝ್ರ ಅಸಹಾಯಕ ಕುಟುಂಬಕ್ಕೆ ತಕ್ಷಣ ಗರಿಷ್ಠ ಮೊತ್ತದ ಪರಿಹಾರವನ್ನು ಬಿಡುಗಡೆಗೊಳಿಸಬೇಕು. ಫಯಾಝ್ರ ಕಂದಮ್ಮಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸರಕಾರ ಉಚಿತವಾಗಿ ಕೊಡಿಸಬೇಕು ಮತ್ತು ವೀರಮರಣವನ್ನಪ್ಪಿದ ಫಯಾಝ್ರ ಹೆಸರಲ್ಲಿ ರಾಜ್ಯ ಸರಕಾರವು ರಾಜ್ಯಮಟ್ಟದ ವಾರ್ಷಿಕ ಶೌರ್ಯ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕು.
ಗೌರವಾನ್ವಿತ ಮುಖ್ಯಮಂತ್ರಿಗಳೇ,
06-08-2016 ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಕಡಲ ಭೋರ್ಗರೆವ ಅಲೆಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ತಮಿಳುನಾಡು ಮೂಲದ ನಾಡದೋಣಿ ಮೀನುಗಾರರ ರಕ್ಷಣೆಗೆ ಕಡಲಿಗೆ ಧುಮುಕಿ ಓರ್ವನನ್ನು ರಕ್ಷಿಸಿ ಇನ್ನೋರ್ವನ ರಕ್ಷಣೆಗಾಗಿ ಹರಸಾಹಸಪಡುತ್ತಿದ್ದಾಗ ಕಡಲಿನಾಳದ ಬಂಡೆಯೇಟು ತಗಲಿ ವೀರ ಮರಣವನ್ನಪ್ಪಿದ ಆಪದ್ಬಾಂಧವ ಫಯಾಝ್ ಬಗ್ಗೆ ತಮಗೆ ಈಗಾಗಲೇ ಮಾಹಿತಿ ದೊರಕಿರಬಹುದು. ಫಯಾಝ್ ತನ್ನ ತಾಯಿ, ಪತ್ನಿ ಮತ್ತು ಮೂವರು ಎಳೆಯ ಕಂದಮ್ಮಗಳನ್ನು ಅಗಲಿ ಹೋಗಿದ್ದಾರೆ. ಮೀನು ಒಣಗಿಸಿ ಮಾರಾಟ ಮಾಡುತ್ತಿದ್ದ ಶ್ರಮಜೀವಿ ಫಯಾಝ್ರ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿತ್ತು. ಫಯಾಝ್ರ ಅಗಲಿಕೆಯಿಂದಾಗಿ ಆ ಬಡ ಕುಟುಂಬ ಕಂಗಾಲಾಗಿದೆ. ಫಯಾಝ್ ಈ ಹಿಂದೆಯೂ ಕಡಲ ತೆರೆಗಳಿಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹಲವಾರು ಜೀವಗಳನ್ನು ರಕ್ಷಿಸಿದ್ದಾರೆ. ಕೆಲವು ಸಮಯದ ಹಿಂದೆ ಮೈಸೂರು ಮೂಲದ ನಾಲ್ವರು ವಿಹಾರಾರ್ಥಿಗಳು ಕಡಲ ಭೋರ್ಗರೆತಕ್ಕೆ ಬಲಿಯಾಗಿದ್ದಾಗ ಅವರ ಮೃತ ದೇಹವನ್ನು ಹುಡುಕಲು ಕಡಲಿನಲ್ಲಿ ಹಗಲು ರಾತ್ರಿಯೆನ್ನದೇ ಈಜಾಡಿದ್ದರು. ಮಾತ್ರವಲ್ಲ, ಮೃತದೇಹಗಳನ್ನು ಹುಡುಕಿ ತಂದಿದ್ದರು. ಕೆಲವು ವರ್ಷಗಳ ಹಿಂದೆ ಗುರುಪುರದ ಫಲ್ಗುಣಿ ನದಿಗೆ ಶಾಲಾ ವಾಹನವೊಂದು ಮಗುಚಿ ಅನೇಕ ಎಳೆ ಕಂದಮ್ಮಗಳು ಬಲಿಯಾದಾಗ ಅವರ ಮೃತ ದೇಹಗಳನ್ನು ನದಿಯಾಳದಿಂದ ಹುಡುಕಿ ತರುವಲ್ಲಿಯೂ ಫಯಾಝ್ರ ದಣಿವರಿಯದ ಶ್ರಮವಿತ್ತು. ಇಷ್ಟು ಮಾತ್ರವಲ್ಲದೆ ಪರಿಸರದಲ್ಲಿ ಯಾವುದೇ ಅಪಘಾತ, ವಿಪತ್ತು ಸಂಭವಿಸಿದಾಗೆಲ್ಲಾ ಫಯಾಝ್ ನೆರವಿಗಾಗಿ ಧಾವಿಸುತ್ತಿದ್ದರು. ಈ ಹಿಂದೆ ಫಯಾಝ್ ಕಡಲ ಸೆಳೆತದಿಂದ ರಕ್ಷಿಸಿದ ಅನೇಕ ಜೀವಗಳಲ್ಲಿ ವಿವಿಧ ಜಾತಿ, ಧರ್ಮಗಳ ಮಂದಿಯಿದ್ದರು. ಕೋಮು ಸೌಹಾರ್ದ ಹದಗೆಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಯಾಝ್ರಂತಹ ಅಪ್ಪಟ ಮಾನವತಾವಾದಿಗಳೂ ಇದ್ದಾರೆ ಎನ್ನುವುದಕ್ಕೆ ಫಯಾಝ್ರ ಆಪದ್ಬಾಂಧವ ಗುಣವೇ ಸಾಕ್ಷಿ. ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ನನ್ನ ಮನವಿಯೇನೆಂದರೆ ಫಯಾಝ್ರ ಅಸಹಾಯಕ ಕುಟುಂಬಕ್ಕೆ ತಕ್ಷಣ ಗರಿಷ್ಠ ಮೊತ್ತದ ಪರಿಹಾರವನ್ನು ಬಿಡುಗಡೆಗೊಳಿಸಬೇಕು. ಫಯಾಝ್ರ ಕಂದಮ್ಮಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸರಕಾರ ಉಚಿತವಾಗಿ ಕೊಡಿಸಬೇಕು. ಕೆಲವು ತಿಂಗಳ ಹಿಂದೆ ಅಪಘಾತದಲ್ಲಿ ಸಿಲುಕಿ ತನ್ನ ದೇಹ ಎರಡು ತುಂಡಾಗಿದ್ದಾಗಲೂ ತನ್ನ ಕಿಡ್ನಿ ಮತ್ತು ಕಣ್ಣನ್ನು ಯಾರಿಗಾದರೂ ಅಳವಡಿಸಿ ಅವರ ಬದುಕಲ್ಲಿ ಬೆಳಕು ಕಾಣಬೇಕೆಂದು ಆಶಿಸುತ್ತಾ ಕೊನೆಯುಸಿರೆಳೆದ ಹರೀಶ್ರ ಹೆಸರಲ್ಲಿ ಆಗಿನ ಆರೋಗ್ಯ ಸಚಿವ ಯು.ಟಿ.ಖಾದರ್ರವರ ಮುತುವರ್ಜಿಯಲ್ಲಿ ‘ಹರೀಶ್ ಯೋಜನೆ’ಯನ್ನು ಸರಕಾರ ಪ್ರಾರಂಭಿಸಿದ್ದು ಶ್ಲಾಘನೀಯ. ಅಂತೆಯೇ ಮಾನ್ಯ ಯು.ಟಿ.ಖಾದರ್ರವರ ಕ್ಷೇತ್ರದ ಇದೀಗ ವೀರಮರಣವನ್ನಪ್ಪಿದ ಫಯಾಝ್ರ ಹೆಸರಲ್ಲಿ ರಾಜ್ಯ ಸರಕಾರವು ರಾಜ್ಯಮಟ್ಟದ ವಾರ್ಷಿಕ ಶೌರ್ಯ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕು. ತನ್ಮೂಲಕ ಅನಾಮಿಕ ಆಪದ್ಬಾಂಧವ ಫಯಾಝ್ರ ಹೆಸರನ್ನು ಚಿರಸ್ಥಾಯಿಯಾಗಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ.





