ಮೋಡ ಬಿತ್ತನೆಗೆ ರಾಜ್ಯ ಸರಕಾರ ಚಿಂತನೆ
ಜಲಾಶಯಗಳಲ್ಲಿನ ನೀರು ಕೃಷಿ ಬಳಕೆಗೆ ಇಲ್ಲ: ಸಚಿವ ಸಂಪುಟ ತೀರ್ಮಾನ
ಬೆಂಗಳೂರು, ಆ.10: ನಿರೀಕ್ಷಿತ ಪ್ರಮಾಣದ ಮಳೆ ಬೀಳದ ಹಿನ್ನೆಲೆಯಲ್ಲಿ ಆಲಮಟ್ಟಿ, ನಾರಾಯಣಪುರ ಹೊರತುಪಡಿಸಿ ಉಳಿದ ಎಲ್ಲ ಜಲಾಶಯಗಳಲ್ಲಿನ ನೀರನ್ನು ಕೃಷಿ ಬಳಕೆಗೆ ನೀಡದಿರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ, ಶರಾವತಿ, ತುಂಗಾಭದ್ರಾ, ಕೃಷ್ಣರಾಜ ಸಾಗರ ಸೇರಿ ರಾಜ್ಯದ ಎಲ್ಲ ಜಲಾಶಯಗಳಲ್ಲಿನ ನೀರನ್ನು ಕುಡಿಯುವ ಉದ್ದೇಶಕ್ಕಾಗಿಯಷ್ಟೇ ಬಳಕೆ ಮಾಡಬೇಕೆಂದು ನಿರ್ಧರಿಸಲಾಗಿದೆ ಎಂದರು.
ಕೆಲ ಜಿಲ್ಲೆಗಳನ್ನು ಹೊರತುಪಡಿಸಿದರೆ ಮಲೆನಾಡು, ಕರಾವಳಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆ ಆಗಿಲ್ಲ. ಹೀಗಾಗಿ ಜಲಾಶಯಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಂದಿಲ್ಲ ಎಂದ ಅವರು ರಾಜ್ಯದ 470 ಹಳ್ಳಿಗಳಿಗೆ ಇನ್ನೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮೋಡ ಬಿತ್ತನೆ: ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ಉದ್ದೇಶಿಸಿದ್ದು, ಸುಮಾರು 30 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಮಳೆ ಸುರಿಸುವ ಮೋಡಗಳ ಬಗ್ಗೆ ಅಧ್ಯಯನ ನಡೆಸಲು 20 ಕೋಟಿ ರೂ.ಗಳಷ್ಟು ವೆಚ್ಚವಾಗಲಿದ್ದು, ಈ ಸಂಬಂಧ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಈ ಸಂಬಂಧ ಅಧ್ಯಯನ ವರದಿ ಬಂದ ಬಳಿಕ ಮೋಡ ಬಿತ್ತನೆ ಸಂಬಂಧ ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ರೇಷ್ಮೆ ಗೂಡಿಗೆ ಪ್ರೋತ್ಸಾಹ ಧನ: ರೇಷ್ಮೆ ಗೂಡಿಗೆ ಪ್ರೋತ್ಸಾಹ ಧನ ನೀಡಲು 20 ಕೋಟಿ ರೂ.ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ಹಾವೇರಿ ಜಿಲ್ಲೆಯ ದೇವಿ ಹೊಸೂರಿನಲ್ಲಿ ತೋಟಗಾರಿಕೆ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾ ವಿದ್ಯಾಲಯ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಗಣಕೀಕರಣ: ತೋಟಗಾರಿಕೆ ಇಲಾಖೆಯ ಸಮಗ್ರ ಗಣಕೀಕರಣ ಯೋಜನೆಯನ್ನು 14.18 ಕೋಟಿ ರೂ.ಮೊತ್ತದ ಆರ್ಕೆವಿವೈ ಅಡಿಯಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಟ್ಟಡ ನಿರ್ಮಾಣಕ್ಕೆ 81.33 ಕೋಟಿ ರೂ.ನೀಡಲು ಒಪ್ಪಿಗೆ ನೀಡಲಾಗಿದೆ.
ಏರಿ ರಸ್ತೆ ನಿರ್ಮಾಣ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ವರ್ತುಲ ರಸ್ತೆಯ ಮಧ್ಯದ ರೈಲು ಮಾರ್ಗದಲ್ಲಿನ ಮೇಲ್ಸೇತುವೆ ಎರಡೂ ಬದಿಯಲ್ಲಿ 21.57 ಕೋಟಿ ರೂ.ವೆಚ್ಚದಲ್ಲಿ ಏರಿ ರಸ್ತೆ ನಿರ್ಮಾಣಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.
ರಾಯಭಾಗ್-ಚಿಂಚೋಲಿ ರೈಲ್ವೆ ನಿಲ್ದಾಣಗಳ ಮಧ್ಯೆ ಬದಲಿ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ 16.42 ಕೋಟಿ ರೂ.ಗಳ ಪೈಕಿ ರಾಜ್ಯದ ಪಾಲನ್ನು ಶೇ.50ರಷ್ಟು ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಭೂಮಿ ಖರೀದಿಸಲು ಒಪ್ಪಿಗೆ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ 15 ಮಂದಿ ಸದಸ್ಯರನ್ನು ಒಳಗೊಂಡಂತೆ ‘ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ’ವನ್ನು ರಚಿಸಲು ಸಂಪುಟ ಸಮ್ಮತಿಸಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರಸ್ಥ ಸಮಿತಿಯ ಶಿಫಾರಸಿನಂತೆ ಮಂಗಳೂರಿನ ವಿಶಾಲ್ ಹೆಗ್ಡೆ ಶಿಕ್ಷಣ ಸಂಸ್ಥೆ ಸೇರಿದಂತೆ 6 ಸಂಸ್ಥೆಗಳಿಗೆ ಭೂ ಸುಧಾರಣೆ ಕಾಯ್ದೆ ಅನ್ವಯ ವಿವಿಧ ಸಂಸ್ಥೆಗಳನ್ನು ಸ್ಥಾಪಿಸಲು ರೈತರ ಭೂಮಿ ಖರೀದಿಸಲು ಒಪ್ಪಿಗೆ ನೀಡಲಾಗಿದೆ ಎಂದರು.
ಕುಡಿಯು ನೀರಿನ ಯೋಜನೆಗೆ ಅನುಮೋದನೆ: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಮತ್ತು ಬಾಣಾವರ ಬ್ಲಾಕ್ನ 530 ಜನವಸತಿ ಪ್ರದೇಶಗಳಿಗೆ 254.32 ಕೋಟಿ ರೂ.ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಟೆಂಡರ್ಗೆ ಅನುಮೋದನೆ ನೀಡಲಾಗಿದೆ. ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕೆ ಮಾನವ ಸಂಪನ್ಮೂಲ ಸಂಸ್ಥೆಗಳ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ತೆಗೆದುಕೊಳ್ಳಲು 92 ಕೋಟಿ ರೂ.ನೀಡಲು ಒಪ್ಪಿಗೆ ನೀಡಲಾಗಿದೆ.
ವಸತಿ ಶಾಲೆ ನಿರ್ಮಾಣ: ಹಿಂ.ವರ್ಗದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಸಂಕೀರ್ಣವನ್ನು ಗದಗ ಜಿಲ್ಲೆಯ ಅಬ್ಬಿಗೆರೆಯಲ್ಲಿ ನಿರ್ಮಾಣ ಮಾಡಲು 16.10 ಕೋಟಿ ರೂ.ನೀಡಲು ಒಪ್ಪಿಗೆ ನೀಡಿದೆ. ಹಿಂ.ವರ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣವನ್ನು ಕನಕಪುರದ ದೊಡ್ಡಾಲಹಳ್ಳಿಯಲ್ಲಿ ನಿರ್ಮಿಸಲು 16.25 ಕೋಟಿ ರೂ.ನೀಡಲು ಒಪ್ಪಿಗೆ ನೀಡಲಾಗಿದೆ.
ವಿಶ್ವೇಶ್ವರಯ್ಯ ಜಲ ನಿಗಮ ಸ್ಥಾಪನೆ: ಬಯಲುಸೀಮೆಯ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳ ತ್ವರಿತ ಅನುಷ್ಠಾನಗೊಳಿಸುವ ದೃಷ್ಟಿಯಿಂದ ‘ವಿಶ್ವೇಶ್ವರಯ್ಯ ಜಲ ನಿಗಮ’ವನ್ನು ಹೊಸದಾಗಿ ಸ್ಥಾಪಿಸಲು ಸಂಪುಟ ಸಮ್ಮತಿಸಿದೆ. ವಿಜಯಪುರ ಜಿಲ್ಲೆ ಇಂಡಿಯ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ 1.20 ಟಿಎಂಸಿ ನೀರನ್ನು ಬಳಸಿಕೊಳ್ಳುವ 413 ಕೋಟಿ ರೂ. ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅನುದಾನ
ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡಕ್ಕೆ 46.18 ಕೋಟಿ ರೂ. ಹಾಗೂ ಕಲಬುರಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ 60.90 ಕೋಟಿ ರೂ. ಹಾಗೂ ಕೊಪ್ಪಳ ದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ 57.18 ಕೋಟಿ ರೂ.ಗಳನ್ನು ನೀಡಲು ಸಂಪುಟ ಸಮ್ಮತಿಸಿದೆ.
-ಟಿ.ಬಿ.ಜಯಚಂದ್ರ, ಕಾನೂನು ಸಚಿವ
ಮೆಟ್ರೋ ಭೂಮಿ ಭೋಗ್ಯಕ್ಕೆ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಂಸ್ಥೆಯ ಇಲ್ಲಿನ ಪೀಣ್ಯ, ಜಾಲಹಳ್ಳಿ, ನಾಗಸಂದ್ರ, ಬನಶಂಕರಿ, ಸ್ವಾಮಿ ವಿವೇಕಾನಂದ ನಿಲ್ದಾಣ, ಬೈಯಪ್ಪನಹಳ್ಳಿ ಸೇರಿದಂತೆ ವಿವಿಧೆಡೆಗಳಲ್ಲಿನ ಭೂಮಿಯನ್ನು 60 ವರ್ಷ ಭೋಗ್ಯಕ್ಕೆ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿ







