ಜಜ್ಜಿಹೋದ ಬಲಗೈ: ಎಡಗೈಯಲ್ಲಿ ಪರೀಕ್ಷೆ ಬರೆದಾಕೆಗೆ ಡಿಸ್ಟಿಂಕ್ಷನ್
ಅಪಘಾತದ ನೋವನ್ನು ಮೆಟ್ಟಿನಿಂತ ಅಪರೂಪದ ಸಾಧಕಿ ರೂಪಾ
![ಜಜ್ಜಿಹೋದ ಬಲಗೈ: ಎಡಗೈಯಲ್ಲಿ ಪರೀಕ್ಷೆ ಬರೆದಾಕೆಗೆ ಡಿಸ್ಟಿಂಕ್ಷನ್ ಜಜ್ಜಿಹೋದ ಬಲಗೈ: ಎಡಗೈಯಲ್ಲಿ ಪರೀಕ್ಷೆ ಬರೆದಾಕೆಗೆ ಡಿಸ್ಟಿಂಕ್ಷನ್](https://www.varthabharati.in/sites/default/files/images/articles/2016/08/11/Roopa-Writing-Exam-final.gif)
ಮಂಗಳೂರು, ಆ.10: ಆಕೆ ಇಂಜಿನಿಯರಿಂಗ್ ಕಾಲೇಜೊಂದರ ಅಂತಿಮ ವರ್ಷದ ಬಿ.ಇ. ಕಂಪ್ಯೂಟರ್ ಸಾಯನ್ಸ್ ವಿದ್ಯಾರ್ಥಿನಿ. ರಜೆ ಕಳೆದು ಬಸ್ನಲ್ಲಿ ಕಾಲೇಜಿಗೆ ಬರುತ್ತಿದ್ದಾಗ ಸಂಭವಿಸಿದ ಅಪಘಾತದಿಂದ ಬಲಗೈಗೆ ಗಂಭೀರ ಗಾಯಗಳಾಗಿತ್ತು. ಮತ್ತೆ ಪದವಿ ಶಿಕ್ಷಣ ಮುಗಿಸಿ ಇಂಜಿನಿಯರ್ ಆಗುವ ಕನಸು ನನಸಾಗಲು ಸಾಧ್ಯವೇ ಇಲ್ಲ ಎಂಬ ಋಣಾತ್ಮಕ ಮನೋಭಾವ ವನ್ನು ಬದಿಗೊತ್ತಿ ಹಲವಾರು ಶಸ್ತ್ರಚಿಕಿತ್ಸೆಗಳ ನೋವಿನ ನಡು ವೆಯೂ ಎಡಗೈಯಲ್ಲಿ ಇಂಜಿನಿಯರಿಂಗ್ ಪರೀಕ್ಷೆ ಬರೆದು, ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣಳಾಗುವ ಮೂಲಕ ಈಕೆ ಅಪರೂಪದ ಸಾಧನೆಗೈದಿದ್ದಾರೆ.
ಈ ಸಾಧಕಿಯ ಹೆಸರು ರೂಪಾ ಡಿ. ಹಲಗೇರಿ. ಕುಂದಾಪುರದ ದಿನಕರ ಹಲಗೇರಿ ಮತ್ತು ಪ್ರತಿಮಾದೇವಿ ದಂಪತಿಯ ಪುತ್ರಿಯಾಗಿರುವ ಈಕೆ ಬೆಂಜನಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ. 2015ರ ಫೆ.16ರಂದು ಕುಂದಾಪುರದಿಂದ ಬಸ್ನಲ್ಲಿ ಹೊರಟಿದ್ದ ರೂಪಾ ಎರ್ಮಾಳ್ ಬಳಿ ತಲುಪಿದಾಗ ಬಸ್ಗೆ ಲಾರಿಯೊಂದು ಢಿಕ್ಕಿ ಹೊಡೆದಿತ್ತು. ಪರಿಣಾಮ ರೂಪಾಳ ಬಲಗೈ ಜಜ್ಜಿ ಹೋಗಿತ್ತು. ಬಸ್ಸಿನಲ್ಲಿದ್ದ ನಿವೇದಿತಾ ಎಂಬವರು ರೂಪಾರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ, ಅಲ್ಲಿಂದ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದು ಬಳಿಕ ತನ್ನ ಸಹೋದರನನ್ನು ಕರೆಸಿ ರಕ್ತದಾನ ಮಾಡಿಸುವ ಮೂಲಕ ಮಾನವೀಯತೆ ಮೆರೆದರು.
ಆಸ್ಪತ್ರೆಗೆ ದಾಖಲಾಗಿ ಒಂದೂವರೆ ತಿಂಗಳಲ್ಲಿ 5ರಿಂದ 6 ಶಸ್ತ್ರಚಿಕಿತ್ಸೆಗಳಾದವು. ಈ ಆಕಸ್ಮಿಕ ಅಪಘಾತ ರೂಪಾಳ ಕುಟುಂಬದ ಸ್ಥೈರ್ಯಗೆಡಿಸಿತ್ತು. ಶಿಕ್ಷಣದ ಒಂದು ವರ್ಷವನ್ನೂ ಆಕೆ ಕಳೆದುಕೊಳ್ಳಬೇಕಾಯಿತು. ಆದರೆ ರೂಪಾ ತನ್ನ ಚಿಕಿತ್ಸೆ ನಡೆಯುತ್ತಿದ್ದಾಗ ಮನೆಯಲ್ಲಿ ಸುಮ್ಮನಿರಲಿಲ್ಲ. ತಾಯಿಯ ಬೆಂಬಲದೊಂದಿಗೆ ನಿಧಾನವಾಗಿ ಎಡಗೈಯಲ್ಲಿ ಬರವಣಿಗೆ ಆರಂಭಿಸಿ ವರ್ಷ ಕಳೆಯುವಷ್ಟರಲ್ಲೇ ಮತ್ತೆ ತರಗತಿಗೆ ಹಾಜರಾದಳು. ಪರೀಕ್ಷೆ ಎದುರಾದಾಗ ಎಲ್ಲರಲ್ಲೂ ಆತಂಕವಿತ್ತು. ಆದರೆ ಎಡಗೈಯಲ್ಲಿ ನಿರಾಳವಾಗಿ ನಿಗದಿತ ಅವಧಿಯಲ್ಲೇ ಉತ್ತರ ಪತ್ರಿಕೆ ಬರೆದು ಮುಗಿಸಿದ್ದ ಆಕೆಯ ಫಲಿತಾಂಶದ ಬಗ್ಗೆಯೂ ಸಾಕಷ್ಟು ಕುತೂಹಲವಿತ್ತು.
ಆತ್ಮವಿಶ್ವಾಸ ಹಾಗೂ ಪೂರ್ವ ತಯಾರಿಯೊಂದಿಗೆ ಪರೀಕ್ಷೆ ಎದುರಿಸಿದ್ದ ರೂಪಾ ಶೇ.70 ಅಂಕಗಳೊಂದಿಗೆ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾದರು. ಇದೀಗ ಈ ಸಾಧಕಿ ಬೆಂಗಳೂರಿನ ಇಎಂಸಿ ಸ್ಕ್ವಾರ್ನಲ್ಲಿ ಉದ್ಯೋಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈಗಾಗಲೇ ರೂಪಾರಿಗೆ ಹದಿಮೂರು ಸರ್ಜರಿಗಳಾಗಿವೆ. ಇನ್ನೊಂದು ಬಾಕಿ ಇದೆ. ಇವರ ಆತ್ಮವಿಶ್ವಾಸದ ಫಲ ಎಂಬಂತೆ ಬಲಗೈ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಇಷ್ಟರಲ್ಲೇ ನಾಲ್ಕೈದು ಲಕ್ಷ ರೂ.ಗಳಿಗೂ ಅಧಿಕ ಖರ್ಚಾಗಿದ್ದು, ಆರಂಭಿಕ ಚಿಕಿತ್ಸೆಯ ಎರಡು ಲಕ್ಷ ರೂ. ನೆರವನ್ನು ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಭರಿಸುವಲ್ಲಿ ಸಹಕರಿಸಿದ್ದರು.
ಸಂದಿಗ್ದ ಪರಿಸ್ಥಿತಿಯಲ್ಲೂ ಧೃತಿಗೆಡದೆ ಸವಾಲನ್ನು ಸ್ವೀಕರಿಸಿದ ರೂಪಾರ ಆತ್ಮವಿಶ್ವಾಸ ಅಪರೂಪದ್ದು ಮಾತ್ರವಲ್ಲ ಮಾದರಿಯಾದದ್ದು ಎನ್ನುವುದರಲ್ಲಿ ಅನುಮಾನವೇ ಇಲ್ಲ.
ನಮಗೆ ಆತ್ಮವಿಶ್ವಾಸ ತುಂಬಿದ್ದಳಾಕೆ!‘‘ರೂಪಾಳಿಗೆ ಅಪಘಾತವಾದಾಗ ನಾನಂತೂ ತೀರಾ ಹತಾಶನಾಗಿದ್ದೆ. ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದೆ. ಇನ್ನೇನು ಇಂಜಿನಿಯರಿಂಗ್ ಪದವಿ ಮುಗಿಸಲಿದ್ದ ಮಗಳ ಪರಿಸ್ಥಿತಿ ಹೀಗಾಯಿತಲ್ಲ ಎಂದು ಸಂಕಟದಲ್ಲಿರಬೇಕಾದರೆ ಧೈರ್ಯ ತುಂಬಿದವಳೇ ನನ್ನ ಮಗಳು. ಹಲವಾರು ಶಸ್ತ್ರಚಿಕಿತ್ಸೆಗಳನ್ನು ಎದುರಿಸುತ್ತಲೇ ತನ್ನ ಭವಿಷ್ಯದ ಕನಸನ್ನು ನನಸಾಗಿಸಲು ಆಕೆ ಪಣ ತೊಟ್ಟಿದ್ದಳು. ಪೂರ್ವತಯಾರಿ ನಡೆಸಿ ಪರೀಕ್ಷೆ ಬರೆದು ಹಠ ಸಾಧಿಸಿಯೇ ಬಿಟ್ಟಳು. ನನಗೆ ಮತ್ತು ಪತ್ನಿಗೆ ಆತ್ಮವಿಶ್ವಾಸ ತುಂಬಿದವಳು ಅವಳೇ. ಅವಳ ಸಾಧನೆ ನಮಗೆಲ್ಲಾ ಹೆಮ್ಮೆ’’
-ದಿನಕರ ಹಲಗೇರಿ, ರೂಪಾರ ತಂದೆ