ಉದನೆ ವಾಹನ ಸಂಚಾರ ನಿರ್ಬಂಧ ತೆರವು
ಪುತ್ತೂರು ನಗರಸಭೆಗೆ ನೀರು ಸರಬರಾಜು ಆರಂಭ
ಉದನೆ ಸಮೀಪದ ಪರವರಕೊಟ್ಯ ಎಂಬಲ್ಲಿ ಅನಿಲ ಟ್ಯಾಂಕರ್ ಹೊಳೆಗೆ ಬಿದ್ದ ಕಾರಣ ಕುಮಾರಧಾರಾದಲ್ಲಿ ಅನಿಲ ಮಿಶ್ರಣಗೊಂಡಿದ್ದು, ಬುಧವಾರ ನೀರು ತಿಳಿಗೊಂಡಿರುವ ಕಾರಣ ಪುತ್ತೂರು ನಗರ ಸಭಾ ವ್ಯಾಪ್ತಿಗೆ ನೀರು ಸರಬರಾಜು ಆರಂಭಗೊಂಡಿದೆ. ಗ್ಯಾಸ್ ಲೀಕೇಜ್ ಆದ ಸಂದರ್ಭ ನದಿಯ ನೀರನ್ನು ಬಳಸದಂತೆ ಇಲಾಖೆ ಸೂಚಿಸಿತ್ತು. ಅದರಂತೆ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಅಣೆಕಟ್ಟೆಯಿಂದ ಪುತ್ತೂರು ನಗರಸಭೆೆಗೆ ನೀರು ಪೂರೈಕೆ ಮಾಡುವುದನ್ನು ನಿಲ್ಲಿಸಲಾಗಿತ್ತು. ನದಿಯಿಂದ ನೀರು ಪಂಪ್ ಮಾಡುವ ಪ್ರಕ್ರಿಯೆ ಬುಧವಾರ ಬೆಳಗ್ಗೆ ಮತ್ತೆ ಆರಂಭಗೊಂಡಿದೆ.
ಉಪ್ಪಿನಂಗಡಿ, ಆ.10: ಉದನೆ ಸಮೀಪದ ಪರವರಕೊಟ್ಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ಅನಿಲ ಟ್ಯಾಂಕರ್ ಢಿಕ್ಕಿಯಾಗಿ ಸೇತುವೆ ಬಿರುಕು ಬಿಟ್ಟಿದೆ ಎಂಬ ಶಂಕೆ ಮೇರೆಗೆ ಆ.10ರ ಮಧ್ಯಾಹ್ನದ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದು ಗ್ರಾಮಸ್ಥರ ತೀವ್ರ ಆಕ್ರೋಶಕ್ಕ್ಕೆ ಕಾರಣವಾದಾಗ ಮಧ್ಯಾಹ್ನದ ವೇಳೆಗೆ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆದರೆ ಘನವಾಹನಗಳನ್ನು ತಜ್ಞರ ತಂಡ ಆಗಮಿಸಿ ಸೇತುವೆ ಪರಿಶೀಲನೆ ನಡೆಸಿದ ಬಳಿಕ ವಷ್ಟೇಬಿಡಲಾಯಿತು. ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಂಜಿನಿಯರ್ರನ್ನು ಸ್ಥಳಕ್ಕೆ ಕರೆಸಿಕೊಂಡು ಸೇತುವೆಯ ಪರಿಶೀಲನೆ ನಡೆಸಿದ್ದರು. ಈ ವೇಳೆ ಹೆದ್ದಾರಿ ಇಂಜಿನಿಯರ್ರವರು ಸೇತುವೆ ಬಿರುಕು ಬಿಟ್ಟಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು ತಜ್ಞರ ಪರಿಶೀಲನೆ ಬಳಿಕವಷ್ಟೇ ವಾಹನ ಸಂಚಾರ ಪುನರಾರಂಭಿಸುವುದು ಸೂಕ್ತ ಎಂದು ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ.9ರ ಮಧ್ಯಾಹ್ನದಿಂದಲೇ ರಾಷ್ಟ್ರೀಯ ಹೆದ್ದಾರಿಯ ಉದನೆ-ಶಿರಾಡಿ ಮಧ್ಯೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.