ಸ್ವಾತಂತ್ರ ದಿನಾಚರಣೆ ಹಿನ್ನೆಲೆ: ಪೊಲೀಸ್ ಇಲಾಖೆ ಕಟ್ಟೆಚ್ಚರ
ಮಂಗಳೂರು, ಆ.11: ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ದ.ಕ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.
ಅನುಮಾನಸ್ಪದ ವ್ಯಕ್ತಿಗಳು, ವಸ್ತುಗಳು, ಅಪರಿಚಿತರು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ, ಕಚೇರಿ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಕಂಟ್ರೋಲ್ ರೂಮ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಜಿಲ್ಲಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಪೆಟ್ರೋಲಿಂಗ್ ಹಾಗೂ ಪಿಕೇಟಿಂಗ್ ಕರ್ತವ್ಯಕ್ಕಾಗಿ ಹೆಚ್ಚಿನ ಅಧಿಕಾರಿ/ಸಿಬ್ಬಂದಿಯನ್ನು ನೇಮಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಜನಸಂದಣಿ ಹೆಚ್ಚು ಸೇರುವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಉಪವಿಭಾಗ ಅಧಿಕಾರಿ, ತಹಶೀಲ್ದಾರರ ಕಚೇರಿ, ಕೋರ್ಟ್ ಹಾಗೂ ಇತರ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿಗಳಲ್ಲಿ, ಶೌಚಾಲಯಗಳಲ್ಲಿ, ಕಸದ ತೊಟ್ಟಿಗಳಲ್ಲಿ ಮತ್ತು ನಿರ್ಜನ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯಿಂದ ಬಾಂಬ್ ತಪಾಸಣೆ ದಳ ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುವ ಸಂಘಟಕರು ಭಾರತೀಯ ಧ್ವಜ ಸಂಹಿತೆಯಲ್ಲಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಬಳಸಬಾರದು. ಬಾಡಿಗೆ ಮನೆಗಳಲ್ಲಿ ಹೊಟೇಲ್, ಚೌಟರಿ ಮತ್ತು ಲಾಡ್ಜ್ ಗಳಲ್ಲಿ ಅಪರಿಚಿತರು, ಅನುಮಾನಸ್ಪದ ವ್ಯಕ್ತಿಗಳು ತಂಗದಂತೆ ಎಚ್ಚರ ವಹಿಸಬೇಕು ಹಾಗೂ ತಂಗಿರುವ ವ್ಯಕ್ತಿಗಳ ಭಾವಚಿತ್ರ ಮತ್ತು ಮೊಬೈಲ್ ನಂಬರನ್ನು ಪರಿಶೀಲಿಸಿ ಪಡೆದುಕೊಳ್ಳುವುದು. ಸಂಶಯವಿದ್ದಲ್ಲಿ ಪೊಲೀಸರಿಗೆ ಮಾಹಿತಿಯನ್ನು ನೀಡಬೇಕು. ಸಾರ್ವಜನಿಕರು ಪೊಲೀಸ್ ತಪಾಸಣೆ ವೇಳೆ ಹಾಗೂ ಪೊಲೀಸ್ ಕರ್ತವ್ಯಕ್ಕೆ ಸಹಕರಿಸಬೇಕು ಎಂದು ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.