ನೆಲ್ಯಾಡಿ: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
![ನೆಲ್ಯಾಡಿ: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ ನೆಲ್ಯಾಡಿ: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ](https://www.varthabharati.in/sites/default/files/images/articles/2016/08/12/02.jpg)
ಉಪ್ಪಿನಂಗಡಿ, ಆ.12: ನೆಲ್ಯಾಡಿ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ನಾಲ್ವರು ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಿ ವರ್ಗಾವಣೆ ಮಾಡುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಆ.12ರಂದು ನಡೆದಿದೆ. ಅಲ್ಲದೇ ಶಿಕ್ಷಕರನ್ನು ಕೂಡಿಹಾಕಿ ತರಗತಿ ಕೊಠಡಿಗೆ ಬೀಗ ಹಾಕಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಶಾಲೆಗೆ ಆಗಮಿಸಿದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಎಸ್ಡಿಎಂಸಿ, ಪೋಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಅವರ ಮನವೊಲಿಕೆ ಮಾಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂತೆಗೆದುಕೊಂಡು ತರಗತಿಗೆ ಹಾಜರಾಗಿದ್ದಾರೆ. ನೆಲ್ಯಾಡಿ ಉನ್ನತ ಹಿ.ಪ್ರಾ.ಶಾಲೆಯ ಶಿಕ್ಷಕಿಯರಾದ ಜೆಸ್ಸಿ ಕೆ., ಉಮಾವತಿ ಎ., ತಾರಮ್ಮ ಎಂ., ಮಮತಾ ಸಿ.ಎಚ್.ರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಿ ವರ್ಗಾವಣೆಗೆ ಆದೇಶವಾಗಿದೆ. ಈ ಸಂಬಂಧ ಶಾಲಾ ಮುಖ್ಯಶಿಕ್ಷಕರಿಗೆ ರಿಲೀವ್ ಆದೇಶವೂ ಬಂದಿದೆ.
ಆ.12ರಂದು ಬೆಳಗ್ಗೆ ಎಂದಿನಂತೆ ತರಗತಿಗೆ ಹಾಜರಾಗಿದ್ದ ವಿದ್ಯಾರ್ಥಿಗಳು ವಿರಾಮದ ಅವಧಿಯಲ್ಲಿ ತರಗತಿಯಿಂದ ಹೊರಬಂದವರು ನಾಮಫಲಕಗಳನ್ನು ಹಿಡಿದುಕೊಂಡು ಶಿಕ್ಷಕರ ವರ್ಗಾವಣೆ ಮಾಡದಂತೆ ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನೆ ಮಾಡದಂತೆ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರುಗಳು, ಪೋಷಕರು, ಮುಖ್ಯಶಿಕ್ಷಕರು ಮನವಿ ಮಾಡಿದರೂ ಪಟ್ಟುಸಡಿಲಿಸದ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದರು.
ತರಗತಿಯೊಳಗೆ ಶಿಕ್ಷಕರು ಇರುವಂತೆಯೇ ವಿದ್ಯಾರ್ಥಿಗಳು ಕೊಠಡಿಗೆ ಬೀಗ ಜಡಿದ ಘಟನೆಯೂ ನಡೆದಿದೆ. ಅಲ್ಲದೇ ಕೊಠಡಿಯ ಬಾಗಿಲಿಗೆ ’ನೋ ಎಂಟ್ರಿ’ಎಂಬ ಫಲಕವನ್ನೂ ವಿದ್ಯಾರ್ಥಿಗಳು ಅಂಟಿಸಿದ್ದರು. ಇದರಿಂದಾಗಿ ಶಿಕ್ಷಕರು ಮಧ್ಯಾಹ್ನದ ತನಕವೂ ಕೊಠಡಿಯೊಳಗೆ ಕಾಲ ಕಳೆಯುವಂತಾಯಿತು. ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಲು ಹಿಂದೇಟು ಹಾಕಿದರು. ಮಧ್ಯಾಹ್ನ 1 ಗಂಟೆ ವೇಳೆಗೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಆಗಮಿಸಿ ಎಸ್ಡಿಎಂಸಿ, ಪೋಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.
ಶಿಕ್ಷಕರ ವರ್ಗಾವಣೆ ಆದೇಶ ಸರಕಾರದ ಮಟ್ಟದಲ್ಲಿ ನಡೆಯುತ್ತದೆ. ಕಾನೂನು ಪ್ರಕಾರವೇ ವರ್ಗಾವಣೆ ನಡೆದಿದೆ. ಇದರಲ್ಲಿ ಶಿಕ್ಷಣಾಧಿಕಾರಿಗಳ ಪಾತ್ರ ಇಲ್ಲ. ಇಲಾಖಾಧಿಕಾರಿಗಳು ಆದೇಶ ಪಾಲನೆ ಮಾಡುತ್ತಿದ್ದಾರೆ. ಶಿಕ್ಷಕರ ನಿಯೋಜನೆಗೊಳಿಸುವ ಅಧಿಕಾರ ಶಿಕ್ಷಣಾಧಿಕಾರಿಗಳಿಗೆ ಇದೆ. ಅವಶ್ಯಕತೆ ಇದ್ದಲ್ಲಿ ನೆಲ್ಯಾಡಿ ಶಾಲೆಗೆ ಶಿಕ್ಷಕರ ನಿಯೋಜನೆಗೆ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಇಸ್ಮಾಯೀಲ್ ನೆಲ್ಯಾಡಿ ಶಿಕ್ಷಕರ ಅವಶ್ಯಕತೆ ಕುರಿತಂತೆ ವಿವರಿಸಿದರು. ಎಸ್ಡಿಎಂಸಿ, ಪೋಷಕರ ಅಹವಾಲುಗಳನ್ನು ಲಿಖಿತವಾಗಿ ಇಲಾಖೆಗೆ ಸಲ್ಲಿಸಿ. ಇಲಾಖೆ ವತಿಯಿಂದ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಬಳಿಕ ಈ ವಿಚಾರವನ್ನು ವಿದ್ಯಾರ್ಥಿಗಳ ಗಮನಕ್ಕೂ ತರಲಾಯಿತು. ನಂತರ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ ತರಗತಿಗೆ ಹಾಜರಾದರು.
ನಾಲ್ವರು ಶಿಕ್ಷಕರ ವರ್ಗಾವಣೆ ವಿರೋಧಿಸಿ ಎಸ್ಡಿಎಂಸಿ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷ ಇಸ್ಮಾಯೀಲ್ ಹಾಗೂ ಇತರ ಸದಸ್ಯರುಗಳು ನೆಲ್ಯಾಡಿ ಗ್ರಾ.ಪಂ.ನ ನಾಗರಿಕ ಸೌಲಭ್ಯ ಸಮಿತಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷ ಇಸ್ಮಾಯೀಲ್, ನಾಲ್ವರು ಶಿಕ್ಷಕರ ವರ್ಗಾವಣೆಗೆ ಆದೇಶ ಬಂದಿದ್ದು ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಲಿದೆ. ಈ ವಿಚಾರವನ್ನು ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಎಸ್ಡಿಎಂಸಿ ಅಧ್ಯಕ್ಷತೆಗೆ ರಾಜೀನಾಮೆ ನೀಡುತ್ತಿದ್ದೇವೆ ಎಂದಿದ್ದಾರೆ.
ಸರಕಾರದ ಆದೇಶ ಎಲ್ಲಾ ಶಾಲೆಗಳಿಗೂ ಅನ್ವಯ ಆಗಬೇಕು. ವಿದ್ಯಾರ್ಥಿ ದಿವೀತ್ ರೈ ಮನವಿಗೆ ಸ್ಪಂದಿಸಿರುವ ಗೃಹ, ಶಿಕ್ಷಣ ಸಚಿವರು ವರ್ಗಾವಣೆ ಆದೇಶಕ್ಕೆ ತಡೆಯೊಡ್ಡಿದ್ದಾರೆ. ಅದೇ ರೀತಿ ನೆಲ್ಯಾಡಿ ಶಾಲೆಯ ಮಕ್ಕಳ ಕೂಗಿಗೂ ಸ್ಪಂದಿಸಲಿ. ಹಾರಾಡಿ ಶಾಲೆಗೊಂದು ನೆಲ್ಯಾಡಿ ಶಾಲೆಗೊಂದು ಕಾನೂನು ಎಂಬಂತೆ ವರ್ತಿಸಬಾರದು. ಹಾರಾಡಿ ಶಾಲೆಯಂತೆಯೇ ನೆಲ್ಯಾಡಿ ಶಾಲೆಯನ್ನು ಪರಿಗಣಿಸಬೇಕು. ಇಲ್ಲೂ ಗುಣಮಟ್ಟದ ಕಲಿಕೆ ಇದೆ. 325 ಮಕ್ಕಳಿದ್ದಾರೆ. ದಿವೀತ್ ರೈಯಂತಹ ವಿದ್ಯಾರ್ಥಿಗಳು ಇಲ್ಲಿನ ಶಾಲೆಯಲ್ಲೂ ಇದ್ದಾರೆ. ಸರಕಾರಕ್ಕೆ ಇಲ್ಲಿನ ಮಕ್ಕಳ ಕೂಗು ಕೇಳುವುದು ಬೇಡವೇ ?, ಎಲ್ಲಾ ಶಾಲೆಗಳಿಗೂ ಒಂದೇ ರೀತಿಯ ಕಾನೂನು ಪಾಲಿಸಲಿ. ವರ್ಗಾವಣೆ ಆದೇಶ ಆಗಿರುವ ನೆಲ್ಯಾಡಿ ಶಾಲಾ ಶಿಕ್ಷಕರ ರಿಲೀವ್ ಮಾಡಬಾರದು. ಮಾಡಿದ್ದಲ್ಲಿ ಪ್ರತಿಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಹಾರಾಡಿ ಶಾಲೆಯ ವಿದ್ಯಾರ್ಥಿ ದಿವಿತ್ ರೈ ಮನವಿಗೆ ಸ್ಪಂಧಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ರವರು ಹಾರಾಡಿ ಶಾಲಾ ಶಿಕ್ಷಕರ ವರ್ಗಾವಣೆ ತಡೆಗೆ ಆದೇಶಿಸಿರುವ ಬಗ್ಗೆ ಶಿಕ್ಷಣಾಧಿಕಾರಿಗಳ ಕಚೇರಿಗೆ ಇಲ್ಲಿಯ ತನಕವೂ ಆದೇಶ ಬಂದಿಲ್ಲ. ಈ ಬಗ್ಗೆ ಪತ್ರಿಕೆ, ಮೊಬೈಲ್ ವಾಟ್ಸಪ್ಗಳಲ್ಲಿ ಮಾಹಿತಿ ಬರುತ್ತಿವೆ. ಅಲ್ಲಿನ ಶಿಕ್ಷಕರಿಗೂ ಇಲಾಖೆಯಿಂದ ರಿಲೀವ್ ಆದೇಶ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮಾತುಕತೆ ವೇಳೆ ತಾ.ಪಂ.ಸದಸ್ಯೆ ಉಷಾ ಅಂಚನ್, ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಮತ್ತಿತರರು ಉಪಸ್ಥಿತರಿದ್ದರು.