ಪ್ರತ್ಯೇಕತಾವಾದಿಗಳಿಂದ ಮೆರವಣಿಗೆಗೆ ಕರೆ
ಕಾಶ್ಮೀರದಲ್ಲಿ ಕರ್ಫ್ಯೂ ಮುಂದುವರಿಕೆ
ಶ್ರೀನಗರ, ಆ.12: ಪ್ರತ್ಯೇಕತಾವಾದಿಗಳು ಹಳೆನಗರದ ಈದ್ಗಾಕ್ಕೆ ಯೋಜಿಸಿರುವ ಮೆರವಣಿಗೆಯನ್ನು ತಡೆಯಲು ಶುಕ್ರವಾರ ಕಾಶ್ಮೀರದಲ್ಲಿ ಕರ್ಫ್ಯೂವನ್ನು ವಿಸ್ತರಿಸಲಾಗಿದೆ ಹಾಗೂ ಕಣಿವೆಯ ಇತರ ಭಾಗಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ.
ಇಡೀ ಶ್ರೀನಗರ ಜಿಲ್ಲೆ, ಅನಂತನಾಗ್ ಪಟ್ಟಣ, ಶೋಪಿಯಾನ್ ಪಟ್ಟಣ, ಬಾರಾಮುಲ್ಲಾ ಪಟ್ಟಣ, ಅವಂತಿಪುರ ಹಾಗೂ ಪಾಂಪೋರ್ ಪಟ್ಟಣಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಕಣಿವೆಯ ಗಂದೇರ್ಬಾಲ್ ಪಟ್ಟಣ, ಚದೂರ, ಮಗಂ, ಕುಂಝೇರ್, ತಂಗ್ಮಾರ್ಗ್ ಹಾಗೂ ಪಟ್ಟಾನ್ ಪ್ರದೇಶಗಳಲ್ಲೂ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕಣಿವೆಯ ಇತರ ಭಾಗಗಳಲ್ಲಿ ಜನರ ಚಲನವಲನದ ಮೇಲೆ ಕಠಿಣ ನಿರ್ಬಂಧ ವಿಧಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಯ ಬಳಿಕ ಅನೇಕ ಸ್ಥಳಗಳಲ್ಲಿ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿತ್ತು. ಈ ಘಟನೆಗಳಲ್ಲಿ ಮೂವರು ಸಾವಿಗೀಡಾಗಿದ್ದು, ಹಲವು ನೂರು ಮಂದಿ ಗಾಯಗೊಂಡಿದ್ದರು.
ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ, 34 ದಿನಗಳ ಹಿಂಸಾತ್ಮಕ ಪ್ರತಿಭಟನೆಯ ವೇಳೆ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಂದು ಹಳೆ ನಗರದ ಈದ್ಗಾದಲ್ಲಿ ಒಟ್ಟು ಸೇರುವಂತೆ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದರು.