ಭಾರತ ತನ್ನ ನಿಲುವು ನಿರ್ಧರಿಸಲಿ: ವಾಂಗ್ಯಿ
ದಕ್ಷಿಣ ಚೀನಾ ಸಮುದ್ರ ವಿವಾದ
ಪಣಜಿ, ಆ.12: ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ಭಾರತವು ಚೀನಾವನ್ನು ಬೆಂಬಲಿಸ ಬಯಸುತ್ತಿದೆಯೇ ಎಂಬುದನ್ನು ಅದು ನಿರ್ಧರಿಸಬೇಕೆಂದು ಚೀನಾದ ವಿದೇಶಾಂಗ ಸಚಿವ ವಾಂಗ್ಯಿ ಶುಕ್ರವಾರ ಹೇಳಿದ್ದಾರೆ.
ಅವರು, ದಕ್ಷಿಣ ಚೀನಾ ಸಮುದ್ರ ವಿವಾದದ ಬಗ್ಗೆ ಭಾರತದ ಬೆಂಬಲ ಕೋರಲು ಬಂದಿದ್ದಾರೆಯೇ ಎಂಬ ಪ್ರಶ್ನೆಗೆ, ಯಾವ ನಿಲುವನ್ನು ತಳೆಯಬೇಕೆಂಬುದು ಭಾರತಕ್ಕೆ ಬಿಟ್ಟ ವಿಚಾರವೆಂದು ವಾಂಗ್ ಉತ್ತರಿಸಿದರು.
ಮೂರು ದಿನಗಳ ಭಾರತ ಪ್ರವಾಸದಲ್ಲಿ ರುವ ಅವರು, ಬ್ರಿಕ್ಸ್ ಸಮ್ಮೇಳನದ ಕುರಿತು ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ರೊಂದಿಗೆ ಸಭೆಯೊಂದನ್ನು ನಡೆಸುವು ದಕ್ಕಾಗಿ ಶುಕ್ರವಾರ ಬೆಳಗ್ಗೆ ಗೋವಾಕ್ಕೆ ಆಗಮಿಸಿದ್ದಾರೆ.
ದಕ್ಷಿಣ ಚೀನಾ ಸಮುದ್ರದ ಕುರಿತು ಭಾರತದ ಗಮನವು ಚೀನಾದೊಂದಿಗಿನ ಅದರ ಬಾಂಧವ್ಯಕ್ಕೆ ಕೆಡುಕಾಗಬಹುದು ಹಾಗೂ ಭಾರತೀಯ ವ್ಯಾಪಾರಿಗಳಿಗೆ ಅಡ್ಡಿಯನ್ನು ಸೃಷ್ಟಿಸಬಹುದೆಂದು ಚೀನಾದ ಸರಕಾರಿ ಸ್ವಾಮ್ಯದ ಪತ್ರಿಕೆಯೊಂದು ವಾಂಗ್ರ ಭೇಟಿಗೆ ಮುನ್ನ ಎಚ್ಚರಿಕೆ ನೀಡಿತ್ತು.
ಸಮಗ್ರ ಆರ್ಥಿಕ ಭಾಗಿದಾರಿಕೆಯೆಂದು ಕರೆಯಲಾಗುವ ಮುಕ್ತ ವ್ಯಾಪಾರ ಮಾತುಕತೆಯ ನಡುವೆ, ಚೀನಾಕ್ಕೆ ರಫ್ತಾಗುವ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಮೇಲೆ ತೆರಿಗೆ ಕಡಿತ ಸೇರಿದಂತೆ ಆರ್ಥಿಕ ಸಹಕಾರಕ್ಕೆ ಉತ್ತಮ ವಾತಾವರಣವನ್ನು ಸೃಷ್ಟಿಸುವ ಬಯಕೆ ಭಾರತಕ್ಕಿದ್ದರೆ, ವಾಂಗ್ರ ಭೇಟಿಯ ವೇಳೆ ಅದು, ದಕ್ಷಿಣ ಚೀನಾ ಸಮುದ್ರದ ಕುರಿತು ಚೀನಾದೊಂದಿಗೆ ಅನಗತ್ಯ ತೊಡಕನ್ನು ನಿವಾರಿಸಲು ಇಚ್ಛಿಸಬಹುದೆಂದು ‘ಗ್ಲೋಬಲ್ ಟೈಮ್ಸ್’ ತನ್ನ ಮಂಗಳವಾರದ ಸಂಪಾದಕೀಯದಲ್ಲಿ ಹೇಳಿತ್ತು.
ವಾಂಗ್, ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ರನ್ನು ಭೇಟಿಯಾಗಲಿದ್ದಾರೆ.
ಜಿ-20 ಸಮ್ಮೇಳನದಲ್ಲಿ ದಕ್ಷಿಣ ಚೀನಾ ಸಮುದ್ರದ ಕುರಿತ ವಿವಾದಿತ ವಿಷಯವನ್ನು ಎತ್ತುವಲ್ಲಿ ಪ್ರಧಾನಿ ಮೋದಿ, ಇತರ ದೇಶಗಳೊಂದಿಗೆ ಕೈಜೋಡಿಸದಂತೆ ಖಚಿತಪಡಿಸಲು ವಾಂಗ್ ಪ್ರಯತ್ನಿಸ ಬಹುದೆಂದು ಮೂಲಗಳು ಅಭಿಪ್ರಾಯಿಸಿವೆ.