ಐಸಿಯುನಲ್ಲಿದ್ದ ಅಪ್ಪನ ಹೆಬ್ಬೆಟ್ಟು ಹಾಕಿಸಿ, ಜೀವ ರಕ್ಷಕ ಪೈಪನ್ನೇ ತೆಗೆದು ಹಾಕಿದ ಮಗಳು
ಆಘಾತಕಾರಿ ವೀಡಿಯೊ
ಚೆನ್ನೈ, ಆ.13: 82 ವರ್ಷದ ಹೃದ್ರೋಗಿ ತಂದೆ ತೀವ್ರ ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಿದ್ದ ವೇಳೆ ಸ್ವಂತ ಮಗಳೇ ಅಪ್ಪನ ಕೈಯಿಂದ ದಾಖಲೆಗಳಿಗೆ ಹೆಬ್ಬೆಟ್ಟು ಹಾಕಿಸಿದ ಬಳಿಕ ಜೀವ ರಕ್ಷಕ ಪೈಪನ್ನು ತೆಗೆದು ಹಾಕಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಘಟನೆ ನಡೆದದ್ದು 2015ರ ಸೆಪ್ಟಂಬರ್ನಲ್ಲಿ ಆದರೆ ಆಕೆಯ ಅಪ್ಪ 2 ತಿಂಗಳ ಬಳಿಕ ನಿಧನರಾಗಿದ್ದು,ಪುತ್ರಿ ಡಾ.ಜಯಸುಧಾ ಮನೋಹರನ್ ಎಂಬಾಕೆ ಮೇಲೆ ಕೊಲೆಯತ್ನ ಆರೋಪದಡಿ ಇತ್ತೀಚೆಗೆ ದೋಷಾರೋಪ ಪಟ್ಟಿಯನ್ನು ಚೆನ್ನೈ ಪೊಲೀಸರು ಸಲ್ಲಿಸಿದ್ದಾರೆ.
ಆದಿತ್ಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ತಂದೆಯ ಕ್ಷೇಮವನ್ನು ವಿಚಾರಿಸಲು ತನ್ನ ಪುತ್ರರೊಂದಿಗೆ ಪುತ್ರಿ ಡಾ.ಜಯಸುಧಾ ಮನೋಹರನ್ ಆಗಮಿಸಿದ್ದರು.ದಾದಿಗಳು ಕೊಠಡಿಯಿಂದ ನಿರ್ಗಮಿಸಿದ ಬಳಿಕ ಆಕೆಯ ಪುತ್ರ ಡಾ.ಹರಿಪ್ರಸಾದ್ ತನ್ನ ಮೇಲುಡುಪಿನಿಂದ ತೆಗೆದ ದಾಖಲೆಗಳನ್ನು ತೆಗೆದು ಇಂಕ್ ಪ್ಯಾಡ್ನಿಂದ ಅಪ್ಪನ ಹೆಬ್ಬೆಟ್ಟು ಹಾಕುವಲ್ಲಿ ಯಶ್ವಸಿಯಾಗಿದ್ದಳು.
ಇದಾದ ಬಳಿಕ ನಡೆದ ಘಟನೆ ಬೆಚ್ಚಿಬೀಳುಸುವಂತಿತ್ತು. ಐಸಿಯುನಲ್ಲಿ ಜೀವನ್ಮರಣ ಹೋರಾಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಗೆ ಅಳವಡಿಸಿದ ಜೀವ ರಕ್ಷಕ ಔಷಧಿಯ ಪೈಪನ್ನೇ ಡಾ.ಜಯಸುಧಾ ತೆಗೆದುಹಾಕಿದ್ದಾಳೆ.ಈ ಸಂದರ್ಭದಲ್ಲಿ ಆಸ್ಪತ್ರೆಯ ನೆಲದಲ್ಲಿ ರಕ್ತ ಜಿನುಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸ್ಪತ್ರೆಯಲ್ಲಿದ್ದ ವೈದ್ಯರು, ದಾದಿಗಳು ಸ್ಥಳಕ್ಕೆ ಧಾವಿಸಿದಾಗ ಜಯಸುಧಾಳು ಚಕಿತಳಾಗಿ ಹೊರ ನಡೆದಿದ್ದಾಳೆ.
ಆಕೆಯ ಸಹೋದರ ತನ್ನ ತಂದೆ ಡಾ.ಇ.ರಾಜಗೋಪಾಲ್ರವರನ್ನು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಸಹೋದರಿ ಡಾ.ಜಯಸುಧಾ ಮನೋಹರ್, ಆಕೆಯ ಪತಿ ಹಾಗೂ ಪುತ್ರನ ಮೇಲೆ ತಮಿಳುನಾಡು ರಾಜ್ಯ ವೈದ್ಯಕೀಯ ಮಂಡಳಿಗೆ ಇದೇ ಫೆಬ್ರವರಿಯಲ್ಲಿ ದೂರನ್ನು ದಾಖಲಿಸಿದ್ದರು.
ಕುಟುಂಬದ ವಿರುದ್ಧ ಅತಿಕ್ರಮ ಪ್ರವೇಶ, ಸುಲಿಗೆ ಮತ್ತು ಬೆದರಿಕೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿದ ಪೊಲೀಸರು ನಂತರ ದೋಷಾರೋಪ ಪಟ್ಟಿಯಲ್ಲಿ ಕೊಲೆ ಯತ್ನ ಪ್ರಕರಣ ಎಂದು ನಮೂದಿಸಿದ್ದರು.ಡಾ.ಜಯಸುಧಾಳ ಸಹೋದರ ಆಕೆಯ ವಿರುದ್ಧ ವೈದ್ಯಕೀಯ ವೃತ್ತಿಗೆ ಚ್ಯುತಿ ತಂದ ಹಿನ್ನೆಲೆಯಲ್ಲಿ, ಆಕೆಯನ್ನು ವೈದ್ಯಕೀಯ ವೃತ್ತಿಯಿಂದ ವಜಾಗೊಳಿಸುವಂತೆ ರಾಜ್ಯ ವೈದ್ಯಕೀಯ ಮಂಡಳಿಗೆ ದೂರಿನ ನೀಡಿದ ಹಿನ್ನೆಲೆಯಲ್ಲಿ ಡಾ.ಜಯಸುಧಾ ಮನೋಹರನ್ ಮತ್ತು ಆಕೆಯ ಕುಟುಂಬದವರು ಜುಲೈ 22ರಂದು ರಾಜ್ಯ ವೈದ್ಯಕೀಯ ಮಂಡಳಿಯ ವಿಚಾರಣಾ ಸಮಿತಿಯ ಮುಂದೆ ಹಾಜರಾಗುವಂತೆ ಕೇಳಿಕೊಂಡಿತ್ತು.