ಮೋದಿ ಕುರಿತು ಹೇಳಿದರೆ ವಿವಾದವಾಗಬಹುದು!: ರಘುರಾಂ ರಾಜನ್
ಲಂಡನ್, ಆ.13: ರಿಸರ್ವ್ಬ್ಯಾಂಕ್ ಗವರ್ನರ್ ಸ್ಥಾನದಿಂದ ಮುಂದಿನ ತಿಂಗಳು ನಿವೃತ್ತರಾಗಲಿರುವ ರಘುರಾಂ ರಾಜನ್ ರಾಜಕೀಯ ವಿವಾದಗಳಿಗೆ ತಾನು ಲಭ್ಯನಲ್ಲ ಎಂದು ಹೇಳಿದ್ದಾರೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ರಾಜಕೀಯವಾದ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಕುರಿತು ಅಭಿಪ್ರಾಯವನ್ನು ಕೇಳಲಾದಾಗ" ಮೋದಿ ಕುರಿತು ಏನೇ ಹೇಳಿದರೂ ಅದರಿಂದ ವಿವಾದ ಸೃಷ್ಟಿಯಾಗಬಹುದು" ಎಂದು ಹೇಳಿದ್ದಾರೆಂದು ವರದಿ ತಿಳಿಸಿದೆ.
ರಘುರಾಂರಾಜನ್ ಆರ್ಬಿಐ ಗವರ್ನರ್ ಹುದ್ದೆಯಿಂದ ಮೂರುವರ್ಷಗಳ ಅವಧಿಯನ್ನು ಪೂರ್ತಿಗೊಳಿಸಿ ಸೆಪ್ಟಂಬರ್ ನಾಲ್ಕಕ್ಕೆ ನಿವೃತ್ತರಾಗಲಿದ್ದಾರೆ. ಷಿಕಾಗೊ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿದ್ದ ಅವರು ಪುನಃ ಅಧ್ಯಾಪನ ವೃತ್ತಿಗೆ ತೆರಳುವುದಾಗಿ ತಿಳಿಸಿದ್ದಾರೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮುಂತಾದವರ ಟೀಕೆಯಿಂದಾಗಿ ಎರಡನೆ ಬಾರಿ ಗವರ್ನರ್ ಸ್ಥಾನಕ್ಕೆ ಕಾಯದೆ ನಿವೃತ್ತರಾಗುತ್ತಿದ್ದಾರೆ. ತಾನು ರಾಜಕೀಯ ಪ್ರವೇಶಿಸುವುದಿಲ್ಲವೆಂದೂ ಈ ಸಂದರ್ಭದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ರಘುರಾಂರಾಜನ್ ಮಾನಸಿಕವಾಗಿ ಪೂರ್ಣ ಭಾರತೀಯರಲ್ಲವಾದ್ದರಿಂದ ಬಡ್ಡಿಕಡಿಮೆಗೊಳಿಸದೆ ಭಾರತದ ಪ್ರಗತಿಗೆಅಡ್ಡಿಯಾಗಿದ್ದಾರೆ ಎಂದು ಈ ಹಿಂದೆ ಆರೋಪಿಸಿದ್ದರು ಎಂದು ವರದಿ ತಿಳಿಸಿದೆ.