ಕಾಶ್ಮೀರದಲ್ಲಿ ಕರ್ಫ್ಯೂ ಮುಂದುವರಿಕೆ : ಹಿಂಸಾಚಾರದಲ್ಲಿ ಮೃತರ ಸಂಖ್ಯೆ 56ಕ್ಕೆ
ಶ್ರೀನಗರ, ಆ.13: ನಗರ ಕೇಂದ್ರದಲ್ಲಿ 2 ದಿನಗಳ ಧರಣಿ ನಡೆಸಲು ಪ್ರತ್ಯೇಕತಾವಾದಿಗಳು ಹಾಕಿಕೊಂಡಿರುವ ಯೋಜನೆಯನ್ನು ತಡೆಯಲು, ಇಡೀ ಶ್ರೀನಗರ ಜಿಲ್ಲೆ ಹಾಗೂ ಅನಂತನಾಗ್ ಪಟ್ಟಣದಲ್ಲಿ ಇಂದು ಕರ್ಫ್ಯೂವನ್ನು ಜಾರಿಯಲ್ಲಿರಿಸಲಾಗಿದೆ.
ನಗರ ಕೇಂದ್ರದ ಲಾಲ್ಚೌಕ್ನಲ್ಲಿ 2 ದಿನ ಧರಣಿ ನಡೆಸಲು ಕೆಲವು ದುಷ್ಟಶಕ್ತಿಗಳು ಯೋಜನೆ ರೂಪಿಸಿವೆ. ಅದನ್ನು ತಡೆಯಲು ಇಡೀ ಶ್ರೀನಗರ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ದಕ್ಷಿಣಕಾಶ್ಮೀರದ ಅನಂತನಾಗ್ ಪಟ್ಟಣದಲ್ಲೂ ಕರ್ಫ್ಯೂ ಚಾಲ್ತಿಯಲ್ಲಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಹಾಗೂ ನಾಳೆ ಲಾಲ್ಚೌಕ್ನಲ್ಲಿ ‘ಜನಮತಗಣನೆ’ ಮೆರವಣಿಗೆಯೊಂದನ್ನು ನಡೆಸುವಂತೆ ಸೈಯದ್ ಅಲಿಶಾ ಗೀಲಾನಿ, ಮಿರ್ನೈಝ್ ಉಮರ್ ಫಾರೂಕ್ ಹಾಗೂ ಮುಹಮ್ಮದ್ ಯಾಸಿನ್ ಮಲಿಕ್ ನೇತೃತ್ವದ ಪ್ರತ್ಯೇಕತಾವಾದಿ ಪಾಳಯ ಜನರಿಗೆ ಕರೆನೀಡಿತ್ತು.
ಇದೇ ವೇಳೆ, ಕಳೆದ ವಾರ ಪೊಲೀಸ್ ಗೋಲಿಬಾರ್ನಲ್ಲಿ ಗಾಯಗೊಂಡಿದ್ದ ಸುಹೈಲ್ ಅಹ್ಮದ್ ವಾನಿ ಎಂಬ ಯುವಕ ಇಂದು ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾನೆ. ಇದರೊಂದಿಗೆ ಭಯೋತ್ಪಾದಕ ಬುರ್ಹಾನ್ ವಾನಿ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ನಡೆಯುತ್ತಿರುವ ಅವ್ಯಾಹತ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 56ಕ್ಕೇರಿದೆ.