ಸ್ವಾತಂತ್ರ್ಯ ದಿನಾಚರಣೆ ಭದ್ರತೆಯ ನೆಪಕ್ಕೆ 45 ವರ್ಷದ ವ್ಯಕ್ತಿ ಬಲಿ
ಹೊಸದಿಲ್ಲಿ, ಆ.14: ಸ್ವಾತಂತ್ರ್ಯ ದಿನಾಚರಣೆ ಭದ್ರತೆಯ ನೆಪಕ್ಕೆ 45 ವರ್ಷದ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ನಡೆದಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ಕೈಲಾಶ್ ಮೌರ್ಯ ಎಂಬ ವ್ಯಕ್ತಿಯನ್ನು ಕರೆದೊಯ್ಯುತ್ತಿದ್ದ ಆಟೊ ರಿಕ್ಷಾವನ್ನು ಭದ್ರತಾ ಕಾರಣಗಳಿಂದಾಗಿ ರಾಮ್ಮೋಹನ್ ಲೋಹಿಯಾ ಆಸ್ಪತ್ರೆ ಬಳಿಯ ಗೀತಾ ಕಾಲನಿ ಫ್ಲೈಓವರ್ ಬಳಿ ಮುಂದೆ ಬಿಡದ ಹಿನ್ನೆಲೆಯಲ್ಲಿ ಮೌರ್ಯ ಸಾವಿಗೀಡಾದರು ಎಂದು ಕುಟುಂಬದ ಸದಸ್ಯರು ದೂರಿದ್ದಾರೆ.
ಕೇವಲ 10 ನಿಮಿಷದ ಪ್ರಯಾಣಕ್ಕೆ ಒಂದು ಗಂಟೆಗೂ ಹೆಚ್ಚು ಹೊತ್ತು ಸುತ್ತಬೇಕಾದ ಹಿನ್ನೆಲೆಯಲ್ಲಿ ಮೌರ್ಯ ಮೃತಪಟ್ಟರು ಎನ್ನಲಾಗಿದೆ. ಆದರೆ ಕುಟುಂಬದ ಸದಸ್ಯರು ವೈದ್ಯಕೀಯ ತುರ್ತುಸ್ಥಿತಿ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಪೊಲೀಸರು ಸಬೂಬು ನೀಡುತ್ತಿದ್ದಾರೆ. ಆದರೆ ಪೊಲೀಸರಿಗೆ ಪರಿಪರಿಯಾಗಿ ಮನವಿ ಮಾಡಿದರೂ, ಆಟೊರಿಕ್ಷಾ ತೆರಳಲು ಅವಕಾಶ ನೀಡಲಿಲ್ಲ ಎಂದು ಮೌರ್ಯ ಅವರ ಹಿರಿಯ ಮಗ ಅರವಿಂದ್ ದೂರುತ್ತಾರೆ.
"ತುರ್ತು ವೈದ್ಯಕೀಯ ಅಗತ್ಯದ ಪರಿಸ್ಥಿತಿಯಲ್ಲಿ ಮಾತ್ರ ಯಾವುದೇ ವಾಹನಗಳನ್ನು ಬಿಡುವಂತೆ ಎಲ್ಲ ಸಿಬ್ಬಂದಿಗೆ ಸೂಚಿಸಿದ್ದೇವೆ. ಮೌರ್ಯ ಅವರನ್ನು ಕರೆತರುತ್ತಿದ್ದ ಆಟೊಗಿಂತ ಸ್ವಲ್ಪ ಮೊದಲು ಎರಡು ಅಂಬುಲೆನ್ಸ್ಗಳಿಗೆ ಮುಂದಕ್ಕೆ ಹೋಗಲು ನಾವು ಅವಕಾಶ ನೀಡಿದ್ದೇವೆ" ಎಂದು ಸಂಚಾರ ವಿಭಾಗದ ವಿಶೇಷ ಕಮಿಷನರ್ ಸಂದೀಪ್ ಗೋಯಲ್ ಹೇಳಿದರು.
ಶನಿವಾರ ಮುಂಜಾನೆ 7:30ರ ವೇಳೆಗೆ ಪೂರ್ವದೆಹಲಿಯ ಗಾಂಧಿನಗರದಲ್ಲಿ ಅಂಗಡಿಗೆ ಹೋಗುತ್ತಿದ್ದಾಗ ಮೌರ್ಯ ಹೃದಯಾಘಾತಕ್ಕೆ ತುತ್ತಾದರು. ತಕ್ಷಣ ಆಟೊ ಒಂದನ್ನು ಬಾಡಿಗೆಗೆ ಪಡೆದ ಅವರ ಮಕ್ಕಳು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ ಪೊಲೀಸರನ್ನು ಮನವಿ ಮಾಡಿದರೂ ಆ ಮಾರ್ಗದ ಮೂಲಕ ಹೋಗಲು ಬಿಡಲಿಲ್ಲ ಮತ್ತು ಪರ್ಯಾಯವಾಗಿ ಹತ್ತಿರದ ಮಾರ್ಗವನ್ನು ಸೂಚಿಸಲೂ ಇಲ್ಲ ಎಂದು ಅರವಿಂದ್ ದೂರುತ್ತಾರೆ. ಒಂದು ಗಂಟೆಗೂ ಹೆಚ್ಚು ಕಾಲ ಆಟೊದಲ್ಲಿ ಉಳಿದ ಮೌರ್ಯ ಉಸಿರಾಡಲು ಸಾಧ್ಯವಾಗದೇ ಪ್ರಜ್ಞಾಶೂನ್ಯರಾಗಿ ಬಿದ್ದರು ಎಂದು ಅವರು ವಿವರಿಸುತ್ತಾರೆ.