ಉತ್ತರಪ್ರದೇಶ: ಗ್ರಾಮೀಣರಿಂದಲೇ ಗ್ರಾಮೀಣ್ ಸೇನೆ
![ಉತ್ತರಪ್ರದೇಶ: ಗ್ರಾಮೀಣರಿಂದಲೇ ಗ್ರಾಮೀಣ್ ಸೇನೆ ಉತ್ತರಪ್ರದೇಶ: ಗ್ರಾಮೀಣರಿಂದಲೇ ಗ್ರಾಮೀಣ್ ಸೇನೆ](https://www.varthabharati.in/sites/default/files/images/articles/2016/08/14/group.jpg)
ಲಕ್ನೊ,ಆ.14: ಮಹಿಳೆಯರ ವಿರುದ್ಧ ದೌರ್ಜನ್ಯಗಳು ಹೆಚ್ಚುತ್ತಿದ್ದು, ಪೊಲೀಸರು ಬರೇ ಪ್ರೇಕ್ಷಕರಂತಾಗಿರುವುದನ್ನು ವಿರೋಧಿಸಿ ಉತ್ತರಪ್ರದೇಶದಲ್ಲಿ ಗ್ರಾಮೀಣರು ಒಗ್ಗೂಡುತ್ತಿದ್ದಾರೆ ಎಂದು ವರದಿಯಾಗಿದೆ. ಬುಲಂದ್ಶಹರ್ ಸಾಮೂಹಿಕ ಅತ್ಯಾಚಾರ ಘಟನೆಯಾದ ಹಿನ್ನೆಲೆಯಲ್ಲಿ ಗ್ರಾಮೀಣರು ಒಗ್ಗೂಡಿದ್ದು, ಮಹಿಳೆಯರಿಗಾಗಿ “ಗ್ರಾಮೀಣ್ ಸೇನೆ”ಗೆ ರೂಪು ನೀಡಲು ಸಜ್ಜಾಗಿದ್ದಾರೆ ಎಂದು ವರದಿ ತಿಳಿಸಿದೆ.
ಭರೌತ್ನಲ್ಲಿ ನಡೆದ ಪಂಚಾಯತ್ನಲ್ಲಿ ಗ್ರಾಮಗಳ ಹಿರಿಯ ಸದಸ್ಯರ ನೇತೃತ್ವದಲ್ಲಿ ಊರವರನ್ನು ಸೇರಿಸಿ ಸೇನೆಯನ್ನು ರೂಪಿಸಲಾಗುವುದು ಎಂದು ಘೋಷಿಸಲಾಗಿದೆ. ದೆಹಾತ್ ಸುರಕ್ಷಾ ಬಲ್ ಎಂಬ ಹೆಸರಿನ ಸೇನೆ ಗ್ರಾಮೀಣರ ದೈನಂದಿನ ಸಮಸ್ಯೆಗೆ ಪರಿಹಾರಹುಡುಕಿಕೊಡಲಿದೆ. ಸೇನೆಗೆ ಯುನಿಫಾರಂ ಇರಲಿದೆ. ಅಪರಾಧಿಗಳ ಕುರಿತು ಮಾಹಿತಿದಾರರೂ ಇರಲಿದ್ದಾರೆ. ರಸ್ತೆಗಳಲ್ಲಿ ಸೇನೆ ಗಸ್ತು ನಡೆಸಲಿದೆ ಎಂದು ತಿಳಿದು ಬಂದಿದೆ.
ಸೇನೆಯಲ್ಲಿ ಮಹಿಳೆಯರೂ ಇರಲಿದ್ದು, ಎಲ್ಲ ಗ್ರಾಮಗಳಿಂದ ತಲಾ ಹನ್ನೆರಡು ಮಂದಿಯನ್ನು ಸೇನೆಗೆ ಆಯ್ಕೆ ಮಾಡಲಾಗುವುದು, ಅವರು ಆಯಾ ಗ್ರಾಮ ಸಂಘಗಳೊಂದಿಗೆ ಸೇರಿ ಜಂಟಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ." ಅತ್ಯಾಚಾರ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿವೆ. ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸರು ಕೇಸು ದಾಖಲಿಸುವುದಿಲ್ಲ. ಆದ್ದರಿಂದ ರಾಜ್ಯದ ಕಾನೂನು ವ್ಯವಸ್ಥೆಯಲ್ಲಿ ನಾವು ನಂಬಿಕೆ ಕಳಕೊಂಡಿದ್ದೇವೆ" ಎಂದು ಕಂದೇರ ಗ್ರಾಮದ ಅಶೋಕ್ ಚೌಧರಿ ಎಂಬ ವ್ಯಕ್ತಿ ಹೇಳಿದ್ದಾರೆ.
ಭಯೋತ್ಪಾದಕರಂತೆ ಸಶ್ತ್ರಗಳನ್ನು ಹಿಡಿದುಕೊಂಡು ಈ ಸೇನೆ ಸುತ್ತಾಡುವುದಿಲ್ಲ. ಅಪಾಯಕಾರಿ ಸಂದರ್ಭದಲ್ಲಿ ಊರಿನವರಿಗೆ ಸುದ್ದಿ ಮುಟ್ಟಿಸಿ ಗ್ರಾಮೀಣರನ್ನು ಒಂದು ಸ್ಥಳದಲ್ಲಿ ಸೇರಿಸುವ ಕೆಲಸವನ್ನು ಅದು ಮಾಡಲಿದೆ. ನಂತರ ಗ್ರಾಮೀಣರು ಒಟ್ಟು ಸೇರಿ ಅಕ್ರಮಿಗಳನ್ನು ಎದುರಿಸಲಿದ್ದಾರೆ. ಭಾಗ್ಪತ್, ಮೀರತ್, ಮುಝಪ್ಫರ್ನಗರ ಜಿಲ್ಲೆಗಳಿಂದ ಗ್ರಾಮೀಣ ಸೇನೆಗೆ ಜನರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಈ ಮಳೆಗಾಲ ಕಳೆದ ನಂತರ ಆರಂಭವಾಗಲಿದೆ ಎಂದು ವರದಿತಿಳಿಸಿದೆ.