"ನಮ್ಮ ಮುಂದಿನ ಪೀಳಿಗೆ ದನದ ಚರ್ಮ ಸುಲಿಯಲು ಬರುವುದಿಲ್ಲ"
ವಿದ್ಯಾವಂತ ದಲಿತ ತಂದೆಯ ಸ್ಪಷ್ಟ ನುಡಿ
ಮೀರತ್, ಆ.15: ಬಹುಶಃ ದೇಶದಲ್ಲಿ ದನದ ಚರ್ಮ ಸುಲಿಯುವ ದಲಿತರ 'ಸಾಂಪ್ರದಾಯಿಕ ವೃತ್ತಿ ನಮ್ಮ ಪೀಳಿಗೆಗೆ ಮುಕ್ತಾಯವಾಗುತ್ತದೆ, ನಮ್ಮ ಮುಂದಿನ ತಲೆಮಾರಿನವರು ಈ ಕೆಲಸಕ್ಕೆ ಜೋತು ಬೀಳುವುದಿಲ್ಲ ಎಂಬ ತುಂಬು ವಿಶ್ವಾಸವಿದೆ"
ಚರಣ್ಸಿಂಗ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದರೂ ಕೊನೆಗೆ ತಮ್ಮ ಕುಟುಂಬ ಸಾಂಪ್ರದಾಯಿಕವಾಗಿ ನಿರ್ವಹಿಸಿಕೊಂಡು ಬಂದ ದನದ ಚರ್ಮ ಸುಲಿಯುವ ವೃತ್ತಿಗೇ ಅಂಟಿಕೊಳ್ಳಬೇಕಾಗಿ ಬಂದ ಓವಿಂದ್ರ ಪಾಲ್ ಅವರ ಸ್ಪಷ್ಟ ನುಡಿ ಇದು. ಇತಿಹಾಸದ ಬಗ್ಗೆ ಸ್ಪಷ್ಟ ಕಲ್ಪನೆ ಇರುವ ಅವರು ಭವಿಷ್ಯದ ಪೀಳಿಗೆ ರೂಪಿಸುವ ಬಗ್ಗೆ ತಮ್ಮದೇ ಕನಸು ಹೊಂದಿದ್ದಾರೆ.
"ಒಬ್ಬ ಮಗ ಕಾನೂನು ಪದವೀಧರ. ಮತ್ತೊಬ್ಬ ಮಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಅಧ್ಯಯನ ನಡೆಸುತ್ತಿದ್ದಾನೆ. ಇಬ್ಬರೂ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ನಿರೀಕ್ಷೆ ನಮ್ಮದು" ಎಂದು ಅವರು ಹೇಳುತ್ತಾರೆ.
ಮೌರ್ಯ ಸಾಮ್ರಾಜ್ಯ ಪತನವಾದ ಬಳಿಕ ಅಂದರೆ ಕ್ರಿಸ್ತಪೂರ್ವ 150ರಿಂದೀಚೆಗೆ ಸಮಾಜದ ಮೇಲೆ ಬ್ರಾಹ್ಮಣ್ಯದ ಪ್ರಭಾವದಿಂದಾಗಿ ಕೆಳವರ್ಗದವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು. ಶತಮಾನಗಳಿಂದ ದಲಿತರು ಮೇಲೇಳಲು ಸಾಧ್ಯವಾಗಲಿಲ್ಲ ಎಂದು ಹತಾಶರಾಗಿ ನುಡಿಯುತ್ತಾರೆ.
ತಂದೆಯ ಹತಾಶೆ ಮತ್ತು ನಿರೀಕ್ಷೆ ಬಗ್ಗೆ ಸ್ಪಷ್ಟ ಅರಿವು ಇರುವ ಮಗ ಅವಿನಾಶ್ ಗೌತಮ್, ತಂದೆಯ ನಿರೀಕ್ಷೆ ಹುಸಿಗೊಳಿಸುವುದಿಲ್ಲ ಎಂಬ ಭರವಸೆ ನೀಡುತ್ತಾರೆ. ಮೀರತ್ ನ ಭಗವತ್ಪುರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೊಟ್ಟಮೊದಲ ದಲಿತ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದರೂ ಕೊನೆಗೂ ತಮ್ಮ ಕುಟುಂಬ ನಡೆಸಿಕೊಂಡು ಬಂದ ವೃತ್ತಿಯನ್ನೇ ಅವರು ಮುಂದುವರಿಸಿಕೊಂಡು ಬರಬೇಕಾಯಿತು.