ನಾಡಿನೆಲ್ಲೆಡೆ 70ನೆ ಸ್ವಾತಂತ್ರೋತ್ಸವದ ಸಂಭ್ರಮ
![ನಾಡಿನೆಲ್ಲೆಡೆ 70ನೆ ಸ್ವಾತಂತ್ರೋತ್ಸವದ ಸಂಭ್ರಮ ನಾಡಿನೆಲ್ಲೆಡೆ 70ನೆ ಸ್ವಾತಂತ್ರೋತ್ಸವದ ಸಂಭ್ರಮ](https://www.varthabharati.in/sites/default/files/images/articles/2016/08/15/independence-day-wallpaper.gif)
ದೇಶಾದ್ಯಂತ ಇಂದು ಮುಂಜಾನೆಯಿಂದ 70ನೆ ಸ್ವಾತಂತ್ರೋತ್ಸವದ ಸಂಭ್ರಮಾಚರಣೆ. ವಿವಿಧ ಸಂಘಸಂಸ್ಥೆಗಳು, ಶಾಲೆಗಳು, ಮಸೀದಿ, ಮದ್ರಸ, ದೇವಳಗಳಲ್ಲಿ, ಬಸ್, ರಿಕ್ಷಾ ನಿಲ್ದಾಣಗಳಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿದರು.
*ಬಂಗಾಡಿಯ ಮುಹಿಯುದ್ದೀನ್ ಜುಮಾ ಮಸೀದಿ
ಪಿಚಲಾರು ಬಂಗಾಡಿಯ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ನೂರುಲ್ ಹುದಾ ಮದ್ರಸದ ಆಶ್ರಯದಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಜಮಾಅತ್ ಉಪಾದ್ಯಕ್ಷರಾದ ಅಝೀಝ್ ಸಾಹೇಬ್ ಜಮಾಅತ್ ಪ್ರಧಾನ ಕಾರ್ಯದರ್ಶಿ ವಝೀರ್ ಮುಹಮ್ಮದ್, ಸಿರಾಜುದ್ದೀನ್ ಸಖಾಫಿ ಸುಲೈಮಾನ್ ಮುಸ್ಲಿಯಾರ್, ಜಮಾಅತ್ ಸದಸ್ಯರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡಿ, ಸಿಹಿ ತಿಂಡಿ ವಿತರಣೆ ಮಾಡಲಾಯಿತು.
ಬನ್ನೂರು ಜುಮಾ ಮಸೀದಿ
ಪುತ್ತೂರಿನ ಬನ್ನೂರು ಜುಮಾ ಮಸೀದಿಯಲ್ಲಿ 70ನೆ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿತು. ಈ ವೇಳೆ ಜಮಾಅತ್ ಪದಾಧಿಕಾರಿಗಳು, ಸ್ಥಳೀಯರು ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತಣ್ಣೀರುಬಾವಿ ಖಿಳಿರಿಯಾ ಮದ್ರಸ
ತಣ್ಣೀರುಬಾವಿಯ ಅಲ್ಮದ್ರಸತ್ತುಲ್ ಖಿಳಿರಿಯ್ಯ ವತಿಯಿಂದ ಇಂದು ಬೆಳಗ್ಗೆ 6:30ಕ್ಕೆ ಸ್ವಾತಂತ್ರೋತ್ಸವ ಆಚರಿಸಲಾಯಿತು.
ಇಲ್ಲಿನ ಗೌಸಿಯ ಮುಹಿಯುದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ ಸ್ಥಳೀಯ ಖತೀಬ್ ಬಿ.ಎ.ಕೆ.ಶಾಫಿ ಅಲ್ಅಝ್ಹರಿ ಉಪ್ಪಿನಂಗಡಿ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಧ್ವಜಾರೋಹಣ ನೆರವೇರಿತು. ಕಾರ್ಯಕ್ರಮದಲ್ವಿ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ವಾಸಿಂ ಅಕ್ರಮ್, ಜೊತೆ ಕಾರ್ಯದರ್ಶಿ ಇಕ್ಬಾಲ್ ಆಸಿಫ್, ಹೊಸ ಮದ್ರಸ ನಿರ್ಮಾಣ ಸಮಿತಿಯ ಅಧ್ಯಕ್ಷ ಮುಹಮ್ಮದ್ ಬಶೀರ್ ಹಾಗೂ ಜಮಾಅತ್ ಸದಸ್ಯರು, ಎಸ್ಕ್ಎಸ್ಬಿವಿ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ನೆರೆದವರಿಗೆ ಸಿಹಿತಿಂಡಿ ವಿತರಿಸಲಾಯಿತು.
ಪಕ್ಕಲಡ್ಕ ಸ್ನೇಹ ಪಬ್ಲಿಕ್ ಸ್ಕೂಲ್
ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್ ಸ್ವಾತಂತ್ರ ದಿನಾಚರಣೆ ಸಂಭ್ರಮದಿಂದ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ ಧ್ವಜಾರೋಹಣ ನೆರವೇರಿಸಿದರು.
ಡಾ.ಸುರೇಶ್ ನೆಗಳಗುಳಿ ಪಕ್ಕಲಡ್ಕ ಅತಿಥಿಯಾಗಿ ಭಾಗವಹಿಸಿದ್ದರು. ಶಾಲೆಯ ಕರೆಸ್ಪಾಂಡೆಂಟ್ ಯೂಸುಫ್ ಪಕ್ಕಲಡ್ಕ, ಸಮಿತಿಯ ಟ್ರಸ್ಟಿಗಳು,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಪಿ.ಬಿ. ಮತ್ತು ಪದಾಧಿಕಾರಿಗಳು,ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ನಾಗರತ್ನಾ ಸ್ವಾಗತಿಸಿದರು. ಶಿಕ್ಷಕಿ ಆಯಿಶಾ ನಿತಾಶ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪುಷ್ಪಾ ಶೆಟ್ಟಿ ವಂದಿಸಿದರು.
ಶಾಂತಿನಗರ ಅಕ್ಕರೆ ಗೈಸ್ ಮತ್ತು ಎಸ್ಡಿಪಿಐ
ಅಕ್ಕರೆ ಗೈಸ್ ಶಾಂತಿನಗರ ಹಾಗೂ ಎಸ್ಡಿಪಿ ಎಣ್ಣೆಹೊಳೆ ಇದರ ಜಂಟಿ ಆಶ್ರಯದಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಶಾಂತಿನಗರ ಮೈದಾನದಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ನಿವ್ರತ್ತ ಪ್ರಾಂಶುಪಾಲ ವೈ.ಪಾಂಡುರಂಗ ನಾಯಕ್ ನೆರವೇರಿಸಿ, ಸ್ವಾತಂತ್ರ ದಿನದ ಸಂದೇಶ ನೀಡಿದರು. ಪಂಚಾಯತ್ ಸದಸ್ಯರಾದ ರಮೇಶ್, ಎಸ್ಡಿಪಿಐ ಸದಸ್ಯರು ಹಾಗೂ ಊರಿನ ಹಿರಿಯರಾದ ಉಮರಬ್ಬ, ಮಯ್ಯದಿ ಬ್ಯಾರಿ, ಜಯಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.
ಒಂಟಿಕಟ್ಟೆ: ಅಗ್ನಿಶಾಮಕ ಠಾಣೆ
ಮೂಡುಬಿದಿರೆ ಸಮೀಪದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ಬಳಿ ಇರುವ ಅಗ್ನಿಶಾಮಕ ಠಾಣೆಯಲ್ಲಿ 70ನೆ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಅಗ್ನಿಶಾಮಕ ಇಲಾಖೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಸಾಧಕರಿಗೆ ನೀಡುವ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು. ಮೂಡುಬಿದಿರೆ ಅಗ್ನಿಶಾಮಕ ಠಾಣಾಧಿಕಾರಿ ಕಿಶೋರ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ನಂತರ ಇಲಾಖೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಸಿಬ್ಬಂದಿಯಾದ ಸತೀಶ್ ಹಾಗೂ ಕೃಷ್ಣ ನಾಯ್ಕಿರಿಗೆ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಠಾಣಾಧಿಕಾರಿ ಪ್ರವೀಣ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.