ಗುಜರಾತ್ ನಲ್ಲೇ ಗೋಮಾತೆಯ ಸ್ಥಿತಿ ಹೀಗಾದರೆ ಹೇಗೆ ?
ಹಾಲು ಕೊಡುವಾಗ ಹಸು ಮನೆಯಲ್ಲಿ, ಮತ್ತೆ ಬೀದಿಯಲ್ಲಿ !

ಹಸುಗಳನ್ನು ನಾವು ಗೋಮಾತೆಯಾಗಿ ಪೂಜಿಸುತ್ತೇವೆ. ಗೋವಿನ ವಿಷಯದಲ್ಲಿ ಸಂಘರ್ಷಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಅದರ ರಕ್ಷಣೆ, ಅವುಗಳ ಸುರಕ್ಷತೆ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸುವುದಿಲ್ಲ ಎಂಬುದು ಮಾತ್ರ ಒಬ್ಬ ಪ್ರಾಣಿ ಪ್ರಿಯನಾಗಿ ನನ್ನ ಅನಿಸಿಕೆ.
ನನ್ನ ಈ ಮಾತಿಗೆ ಬಲವಾದ ಕಾರಣವಿದೆ. ನಾನು ಮೂಲತ: ಮಂಗಳೂರಿನವ. ಹುಟ್ಟಿದ್ದು, ಬೆಳೆದಿದ್ದು ಇಲ್ಲೇ. ಆದರೆ ಬಾಲ್ಯದಲ್ಲೇ ಬದುಕಿನ ಮಾರ್ಗ ಹುಡುಕಿ ಹೊರಟ ನಾನು ಮುಂಬೈನಲ್ಲಿ ನೆಲೆ ಕಂಡುಕೊಂಡವ. ಕಳೆದ ಸುಮಾರು 20 ವರ್ಷಗಳಿಂದ ನಾನು ಮುಂಬೈನಲ್ಲೇ ನೆಲೆಸಿದ್ದೇನೆ. ಮಾತ್ರವಲ್ಲ, ಆಗಾಗ ಮಂಗಳೂರಿಗೂ ಬರುತ್ತಿರುತ್ತೇನೆ. ನನ್ನ ತಾಯಿ, ಸಹೋದರ ಸಹೋದರಿಯರು ಮಂಗಳೂರಿನಲ್ಲಿ ನೆಲೆಸಿ ಇದರ ಜತೆ ನನ್ನ ವೃತ್ತಿಯ ನಿಮಿತ್ತ ನನ್ನ ಸ್ನೇಹಿತರ ಜತೆ ಆಗಾಗ್ಗೆ ಗುಜರಾತ್ಗೆ ಭೇಟಿ ನೀಡುತ್ತಿರುತ್ತೇನೆ.
ಗುಜರಾತ್ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜಕೀಯ ನಾಯಕನಾಗಿ ಬೆಳೆದ ರಾಜ್ಯ. ಅದರಲ್ಲೂ ಗುಜರಾತ್ ಎಂದರೆ ಅಭಿವೃದ್ಧಿಗೊಂದು ಮಾದರಿ ರಾಜ್ಯ ಎಂದು ಕರೆಸಿಕೊಳ್ಳುವ ರಾಜ್ಯ. ಹಾಗಾಗಿ ನಮ್ಮೆಲ್ಲರಿಗೂ ಗುಜರಾತ್ ಬಗ್ಗೆ ಅಭಿಮಾನ ಹೆಚ್ಚು. ಆದರೆ, ಒಬ್ಬ ಪ್ರಾಣಿ ಪ್ರಿಯನಾಗಿರುವ ನನಗೆ ಗೋವುಗಳ ಬಗ್ಗೆ ಅಲ್ಲಿನ ಸಾರ್ವಜನಿಕರು ಕಾಳಜಿ ವಹಿಸುತ್ತಿಲ್ಲ ಎಂಬ ನೋವು ಕಾಡುತ್ತಿದೆ. ಯಾಕೆಂದರೆ ಇಲ್ಲಿನ ಹೆದ್ದಾರಿ, ರಸ್ತೆಗಳಲ್ಲಿ ಗೋವುಗಳು ರಾತ್ರಿ ಹಗಲೆನ್ನದೆ ಅಡ್ಡಾಡುತ್ತಿರುತ್ತವೆ. ಸಾಕು ಪ್ರಾಣಿಗಳಾದ ಗೋವುಗಳು ರಸ್ತೆಗಳಲ್ಲೇ ಅಡ್ಡಾಡುತ್ತಿರುವಾಗ ಯಾವುದೋ ವಾಹನಗಳಿಗೆ ಡಿಕ್ಕಿಯಾಗಿ ನರಳುತ್ತಿರುವುದನ್ನೂ ನಾನು ಹಲವಾರು ಬಾರಿ ಕಂಡು ಮರುಗಿದ್ದೇನೆ.
ಕೆಲ ದಿನಗಳ ಹಿಂದಷ್ಟೇ ನಾನು ಗುಜರಾತ್ನ ಬಿಲ್ಲಿಮೋರಾ ರೈಲ್ವೇ ಜಂಕ್ಷನ್ ಬಳಿ ನನ್ನ ಗೆಳೆಯ ಧನಂಜಯ ಹಾಗೂ ಇನ್ನು ಕೆಲವರ ಜತೆ ಕೆಲಸದ ನಿಮಿತ್ತ ಕೆಲ ದಿನಗಳ ಕಾಲ ಅಲ್ಲಿದ್ದೆ. ಆ ಸಂದರ್ಭದಲ್ಲಿ ಹತ್ತಿಪ್ಪತ್ತಕ್ಕೂ ಮೇಲ್ಪಟ್ಟ ಸಂಖ್ಯೆಯಲ್ಲಿ ಗೋವುಗಳು ದಿನರಾತ್ರಿ ರಸ್ತೆಗಳಲ್ಲೇ ಅಡ್ಡಾಡುತ್ತಿರುವುದು, ಮಲಗುತ್ತಿರುವುದನ್ನು ಕಂಡೆ. ಅವುಗಳು ಹಸಿದಿರುತ್ತವೋ ಎಂಬ ಆತಂಕ ನನ್ನದು. ಹಾಗಾಗಿ ಅಲ್ಲಿಯೇ ಸಮೀಪದ ಅಂಗಡಿಯಿಂದ ಅವುಗಳಿಗೆ ಬಾಳೆಹಣ್ಣು ಖರೀದಿಸಿ ತಿನ್ನಿಸುವುದನ್ನೂ ಮಾಡಿದ್ದೇನೆ. ಜತೆಗೆ ಅಲ್ಲಿನ ಸ್ಥಳೀಯರಲ್ಲಿ ಇದು ಯಾರ ಗೋವುಗಳು, ಯಾಕಾಗಿ ಹೀಗೆ ರಸ್ತೆಯಲ್ಲಿ ಅಡ್ಡಾಡುತ್ತಿವೆ ಎಂದು ವಿಚಾರಿಸಿದ್ದೆ ಕೂಡಾ. ಅವರು ಹೇಳುವುದಿಷ್ಟೆ, ದನಗಳನ್ನು ಹಾಲು ಕರೆಯುವಾಗ ಮನೆಗೆ ಕೊಂಡೊಯ್ಯುತ್ತಾರೆ. ಮತ್ತೆ ಅವುಗಳನ್ನು ಹೀಗೇ ಬಿಟ್ಟು ಬಿಡುತ್ತಾರೆ ಎಂದು.
ನಿಜ, ಈ ಮಾತು ಕೇಳಿ ಮನಸ್ಸಿಗೆ ತುಂಬಾ ನೋವಾಯಿತು. ಕಳೆದ ಶುಕ್ರವಾರವೂ ನಾನು ಬಿಲ್ಲಿಮೋರಾದಲ್ಲಿದ್ದೆ. ಅಂದು ರಾತ್ರಿ ಸುಮಾರು 9.30ರ ಮೇಲಾಗಿರಬಹುದು. ಕೆಲಸ ಮುಗಿಸಿ ನನ್ನ ರೂಮಿನತ್ತ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಯುವತಿಯೊಬ್ಬಳ ದ್ವಿಚಕ್ರ ವಾಹನ ದನದ ಕರುವೊಂದಕ್ಕೆ ಡಿಕ್ಕಿ ಹೊಡೆಯಿತು. ಯುವತಿಯೂ ಬಿದ್ದಳು. ಕರುವೂ ತಾಗಿ ನೆಲಕ್ಕುರುಳಿತು. ಅಷ್ಟು ಹೊತ್ತಿಗಾಗಲೇ ಅಲ್ಲಿದ್ದ ಜನರು ಯುವತಿಯನ್ನು ಉಪಚರಿಸತೊಡಗಿದರು. ಅದನ್ನು ಮಾಡಬೇಕು ಕೂಡಾ. ಆದರೆ, ಇದೇ ಹೊತ್ತಿನಲ್ಲಿ ಯುವತಿಯ ದ್ವಿಚಕ್ರ ವಾಹನಕ್ಕೆ ತಾಗಿ ನೆಲಕ್ಕುರುಳಿದ್ದ ಕರು ಮಾತ್ರ ಮೂರ್ಛೆ ಹೋಗಿತ್ತು. ಅದನ್ನು ಕಂಡು ನನ್ನ ಮನಸ್ಸು ತಡೆಯಲಿಲ್ಲ. ಸಮೀಪದ ಗೋವಾಸ್ಪತ್ರೆಗೆ ಒಂದಿಬ್ಬರ ಸಹಾಯ ಪಡೆದು ಸಾಗಿಸಿದೆ. ಸುಮಾರು ಒಂದೆರಡು ಗಂಟೆಗಳ ಕಾಲ ನಾನು ಅಲ್ಲೇ ಇದ್ದು ಕರು ಎಚ್ಚರವಾದ ಬಳಿಕ ನನ್ನ ರೂಮಿಗೆ ಹಿಂದಿರುಗಿದೆ. ಅಂದು ನಿದ್ದೆಯೂ ಹತ್ತಲಿಲ್ಲ. ಊಟವೂ ಸೇರಲಿಲ್ಲ. ಹಾಗಾಗಿ ಈ ನೋವನ್ನು ಹಂಚಿಕೊಳ್ಳಬೇಕೆನ್ನಿಸಿತು.
ಗೋವುಗಳಿಗಾಗಿ ಪರಸ್ಪರ ಹೊಡೆದಾಟಕ್ಕೂ ಹಿಂದೆ ಮುಂದೆ ನೋಡದ ನಾವು ಸಾರ್ವಜನಿಕವಾಗಿ ಅವುಗಳ ಸುರಕ್ಷತೆ, ರಕ್ಷಣೆಯ ಬಗ್ಗೆಯೂ ಗಮನ ಹರಿಸುವುದು ಮುಖ್ಯವಲ್ಲವೇ? ನಮ್ಮ ಮನೆಯಲ್ಲಿ ಸಾಕುವ ಪ್ರಾಣಿಗಳನ್ನು ಈ ರೀತಿ ರಸ್ತೆಯಲ್ಲಿ ಅಲೆದಾಡಲು ಬಿಟ್ಟರೆ, ಅವುಗಳು ಎದುರಿಸಬೇಕಾದ ಅಪಾಯದಿಂದ ಅವುಗಳಿಗೆ ರಕ್ಷಣೆ ಹೇಗೆ ಸಾಧ್ಯ. ನಾವು ಈ ಬಗ್ಗೆ ಗಮನಿಸಬೇಕಲ್ಲವೇ?







