ಬಿಪಿಎಲ್ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ತೊಗರಿ ಬೇಳೆ: ಮುಖ್ಯಮಂತ್ರಿ ಸಿದ್ದರಾಮಯ್ಯ
♦‘ಅನ್ನಭಾಗ್ಯ’ ಹೆಚ್ಚುವರಿ ಒಂದು ಕೆಜಿ ಅಕ್ಕಿ ♦ ‘ಕ್ಷೀರಭಾಗ್ಯ’ ಐದು ದಿನಗಳಿಗೆ ವಿಸ್ತರಣೆ ♦ ಪ್ರಮುಖ ನಗರಗಳಲ್ಲಿ ಶೀಘ್ರವೇ ಉಚಿತ ವೈ-ಫೈ ♦ ಎಲ್ಲ್ಲ ಗ್ರಾ.ಪಂ.ಗಳಲ್ಲೂ ಉಚಿತ ವೈ-ಫೈ

ಬೆಂಗಳೂರು, ಆ. 15: ‘ಅನ್ನಭಾಗ್ಯ ಫಲಾನುಭವಿಗಳಿಗೆ ಹೆಚ್ಚುವರಿ ಒಂದು ಕೆಜಿ ಅಕ್ಕಿ, ಪಡಿತರ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ತೊಗರಿ ಬೇಳೆ ಪ್ರಸ್ತಾವ ಪರಿಶೀಲನೆ, ಶಾಲಾ ಮಕ್ಕಳಿಗೆ ‘ಕ್ಷೀರಭಾಗ್ಯ’ ಯೋಜನೆ 5 ದಿನಗಳಿಗೆ ವಿಸ್ತರಣೆ, ಪ್ರಮುಖ ನಗರಗಳಲ್ಲಿ ಶೀಘ್ರವೇ ಉಚಿತ ವೈ-ಫೈ ಹಾಟ್ಸ್ಪಾಟ್ಸ್, ಎಲ್ಲ್ಲ ಗ್ರಾ.ಪಂ.ಗಳಲ್ಲೂ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸೋಮವಾರ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಪೆರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ರೈತರು ಪಡೆದ ಸಾಲದ ಮೊತ್ತದ ಅರ್ಧದಷ್ಟನ್ನಾದರೂ ಕೇಂದ್ರ ಸರಕಾರ ಮನ್ನಾ ಮಾಡಿದರೆ, ಸಹಕಾರಿ ಸಂಘಗಳ ಮೂಲಕ ರೈತರು ಪಡೆದ ಸಾಲದ ಅರ್ಧದಷ್ಟನ್ನು ಮನ್ನಾ ಮಾಡಲು ರಾಜ್ಯ ಸರಕಾರ ಸಿದ್ಧ ಎಂದು ಪ್ರಕಟಿಸಿದರು.
ರಾಜ್ಯದ 1.8 ಕೋಟಿ ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆಗೆ ವರದಾನ ಆಗಿರುವ ಹಾಗೂ ಪ್ರಸುತ ವಾರಕ್ಕೆ ಮೂರು ದಿನ 150ಮಿಲಿ ಲೀಟರ್ ಕೆನೆಭರಿತ ಹಾಲು ವಿತರಿಸುತ್ತಿರುವ ಕ್ಷೀರಭಾಗ್ಯ ಯೋಜನೆಯನ್ನು ಐದು ದಿನಗಳಗೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ತಮ್ಮದು ರೈತಪರ ಸರಕಾರ ಎನ್ನುವುದು ಕೇವಲ ಘೋಷಣೆಯಲ್ಲ, ನುಡಿದಂತೆ ನಡೆದು ತೋರಿಸಿದ್ದೇವೆ. ಆದರೆ, ಪ್ರಕೃತಿ ಎದುರು ಮಾನವ ಅಸಹಾಯಕ. ಐದು ವರ್ಷಗಳಿಂದ ರಾಜ್ಯ ನಿರಂತರವಾಗಿ ಬರಕ್ಕೆ ತುತ್ತಾಗಿರುವುದರಿಂದ ರಾಜ್ಯದ ರೈತರು ಕಷ್ಟದಲ್ಲಿದ್ದಾರೆ. ಬರಗಾಲದ ಕಾರಣಕ್ಕಾಗಿ ಮಧ್ಯಮ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಪಾವತಿ 1ವರ್ಷ ಮುಂದೂಡಲಾಗಿದೆ. ಅಲ್ಲದೆ, 2015ರ ಸೆ.30ರ ವರೆಗೆ ಬಾಕಿ ಇರುವ ಸಹಕಾರಿ ಸಂಘಗಳ ಸಾಲದ ಮೇಲಿನ ಬಡ್ಡಿಮನ್ನಾ ಮಾಡಿದೆ. ಇದರಿಂದ 2.07ಲಕ್ಷ ರೈತರಿಗೆ 316.54 ಕೋಟಿ ರೂ.ನೆರವು ನೀಡಿದಂತಾಗಿದೆ.
ಎರಡು ವರ್ಷಗಳಲ್ಲಿ ರೈತರಿಗೆ ನೀಡುವ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಪ್ರಮಾಣ ಶೇ.50ಕ್ಕಿಂತಲೂ ಹೆಚ್ಚಾಗಿದೆ. ಸುಮಾರು 1800 ಕೋಟಿ ರೂ.ಬಡ್ಡಿ ಸರಕಾರವೆ ಭರಿಸಿದೆ. ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ಪಡೆದ ಸಾಲದ ಮೊತ್ತ 29ಸಾವಿರ ಕೋಟಿ ರೂ.ಗಳು. ಈ ಮೊತ್ತದಲ್ಲಿ ಅರ್ಧದಷ್ಟನ್ನಾದರೂ ಕೇಂದ್ರ ಸರಕಾರ ಮನ್ನಾ ಮಾಡಿದರೆ, ಸಹಕಾರಿ ಸಂಘಗಳ ಮೂಲಕ ರೈತರು ಪಡೆದ ಸಾಲದ ಅರ್ಧದಷ್ಟನ್ನು ಮನ್ನಾ ಮಾಡಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.
ರಾಜ್ಯದ ಪ್ರಮುಖ ನಗರಗಳಲ್ಲಿ ಉಚಿತ ವೈ-ಫೈ ಹಾಟ್ಸ್ಪಾಟ್ಗಳನ್ನು ಹಾಗೂ ಎಲ್ಲ ಗ್ರಾ.ಪಂ.ಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರಕಟಿಸಿದರು.
ಆಯುಷ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸಲಾಗುವುದು. ಮುಂದಿನ 2ವರ್ಷಗಳಲ್ಲಿ ದಕ್ಷಿಣ ಕನ್ನಡ, ಗದಗ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ನಗರಗಳಲ್ಲಿ 50ಹಾಸಿಗೆಗಳ ಆಯುಷ್ ಆಸ್ಪತ್ರೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಅಂತೆಯೆ, ಮೈಸೂರು ನಗರದಲ್ಲಿ ನೂರು ಹಾಸಿಗೆಗಳ ಹೈಟೆಕ್ ಪಂಚಕರ್ಮ ಆಸ್ಪತ್ರೆ, ನೂರು ಹಾಸಿಗೆಗಳ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
‘ನೆಲ-ಜಲ-ಭಾಷೆಯ ವಿಚಾರದಲ್ಲಿ ಸರಕಾರ ಯಾವುದೇ ರೀತಿಯ ರಾಜಿ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಯಾರೂ ಅನಗತ್ಯ ಪ್ರಚೋದನೆ-ಭಾವೋದ್ವೇಗಕ್ಕೆ ಒಳಗಾಗದೆ ಸರಕಾರದ ಮೇಲೆ ಭರವಸೆ ಇಟ್ಟು ಸಹಕರಿಸಬೇಕು’
-ಸಿದ್ದರಾಮಯ್ಯ ಮುಖ್ಯಮಂತ್ರಿ







