ಕಾಶ್ಮೀರದ ದುಸ್ಥಿತಿಗೆ ರಾಜಕಾರಣಿಗಳು ಕಾರಣ-ಜನರಲ್ಲ: ಮೆಹಬೂಬಾ ಮುಫ್ತಿ
ಶ್ರೀನಗರ, ಆ.15: ಸ್ವಾತಂತ್ರೋತ್ಸವದ ದಿನವಾದ ಇಂದು ತನ್ನ ತಂದೆ ಮುಫ್ತಿ ಮುಹಮ್ಮದ್ ಸಯೀದ್ರ ಶಾಂತಿಯ ಸಂದೇಶವನ್ನು ಜ್ಞಾಪಿಸಿದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಕೇವಲ ಮಾತುಕತೆಯಷ್ಟೇ ಕಾಶ್ಮೀರದ ಜನತೆಗೆ ನೆರವಾಗಬಹುದೇ ಹೊರತು ಬಂದೂಕುಗಳಲ್ಲವೆಂದು ಪುನರುಚ್ಚರಿಸಿದ್ದಾರೆ.
ಶ್ರೀನಗರದ ಬಕ್ಷಿ ಕ್ರೀಡಾಂಗನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಪ್ರಸಕ್ತ ಸಮಸ್ಯೆಗೆ ರಾಜಕೀಯ ನಾಯಕತ್ವನ್ನು ದೂಷಿಸಿದರು. ನರೇಂದ್ರ ಮೋದಿ ಸರಕಾರವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕಾಶ್ಮೀರತೆ, ಮಾನವತೆ ಹಾಗೂ ಪ್ರಜಾಸತ್ತೆಗಳ ಚಿಂತನೆಯನ್ನು ಅನುಸರಿಸುವುದೆಂಬ ಆಶಾವಾದವನ್ನು ಮೆಹಬೂಬಾ ವ್ಯಕ್ತಪಡಿಸಿದರು.
‘‘ಜಮ್ಮು-ಕಾಶ್ಮೀರದ ಜನರು ಕೆಟ್ಟವರಲ್ಲ. ಅವರು ತಪ್ಪು ಮಾಡುವುದಿಲ್ಲ. ನಮ್ಮ ಭಾರತ ದೇಶವೂ ಕೆಟ್ಟದಲ್ಲ. ಒಂದಲ್ಲ ಒಂದು ರೀತಿಯಲ್ಲಿ ರಾಜ್ಯದ ನಾಯಕತ್ವದಿಂದಲೇ ತಪ್ಪುಗಳಾಗಿವೆ. ಜವಾಹರಲಾಲ್ ನೆಹರೂ ಕಾಲದಿಂದ ಇಂದಿನವರೆಗೆ ತಾನು ಸಹಿತ ರಾಜಕೀಯ ನಾಯಕರಿಂದ ತಪ್ಪುಗಳು ನಡೆದಿವೆ’’ ಎಂದು ತನ್ನ ತಂದೆ ಮುಫ್ತಿ ಸಾಬ್ ಸದಾ ಹೇಳುತ್ತಿದ್ದರೆಂದು ಅವರು ಜ್ಞಾಪಿಸಿದರು.
ಕಣಿವೆಯಲ್ಲಿ ಹಿಂಚಾಚಾರವನ್ನು ಖಂಡಿಸುವಂತೆ ಜನರನ್ನು ಒತ್ತಾಯಿಸಿದ ಮೆಹಬೂಬಾ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲೂ ಪರಿಹಾರವನ್ನು ಕಂಡುಕೊಳ್ಳಲು ತಮ್ಮಿಂದ ಸಾಧ್ಯವಾಗದಿದ್ದರೆ, ಅದು ತಮಗೆ ಬೇರೆಲ್ಲೂ ಲಭಿಸಲಾರದು. ವಾಜಪೇಯಿಯವರ ಕಾಲದಲ್ಲಿ ಅಪೂರ್ಣವಾಗಿರುವ ಪ್ರಯತ್ನ ಮೋದಿಯವರ ಕಾಲದಲ್ಲಿ ಪೂರ್ಣಗೊಳ್ಳುವುದೆಂದು ಆಶಿಸೋಣ ಎಂದರು.
ವಿಪಕ್ಷಗಳಾದ ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಈ ಸಮಾರಂಭವನ್ನು ಬಹಿಷ್ಕರಿಸಿದ್ದವು.