ಜಾತಿಧರ್ಮದ ಹೆಸರಿನಲ್ಲಿ ದೇಶ ಒಡೆಯುವವರು
ಮಾನ್ಯರೆ,
ಹಿಂದೆ ಸ್ವಾತಂತ್ರ ಪೂರ್ವದಲ್ಲಿ ದನ-ಹಂದಿಯನ್ನು ನೆಪವಾಗಿಟ್ಟುಕೊಂಡು ನಮ್ಮ ದೇಶಬಾಂಧವರ ಒಗ್ಗಟ್ಟನ್ನು ಮುರಿಯುವಲ್ಲಿ ಬ್ರಿಟಿಷರು ಯಶಸ್ವಿಯಾಗಿದ್ದರು. ವಸ್ತು ಸ್ಥಿತಿಯ ಅರಿವಾದಾಗ ಭಾರತೀಯರ ಸೂಕ್ಷ್ಮ ಪ್ರಜ್ಞೆ, ಬುದ್ಧಿವಂತಿಕೆ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿತು. ಇಂದು ಇತಿಹಾಸ ಮತ್ತೆ ಮರುಕಳಿಸುತ್ತಿದೆ. ಜಾತಿಧರ್ಮದ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ. ಈ ಕಾಲದಲ್ಲೂ ಆಂತರಿಕ ಕಲಹಕ್ಕೆ ದನವು ಒಂದು ನೆಪವಾಗುತ್ತಿದೆ.
ದೇಶದಲ್ಲಿ ಆಂತರಿಕ ಕಲಹಗಳಾಗುವುದೆಂದರೆ ದೇಶವು ಸ್ವಾರ್ಥಹಿತಾಸಕ್ತಿಗಳ ಆಕ್ರಮಣಕ್ಕೆ ಒಳಗಾಗಲಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ. ಇನ್ನಾದರೂ ಈ ದೇಶದ ಬುದ್ಧಿಜೀವಿಗಳು, ಧಾರ್ಮಿಕ ಪಂಡಿತರು, ಚಿಂತಕರು, ಹೋರಾಟಗಾರರು ಎಚ್ಚೆತ್ತುಕೊಂಡು ಧರ್ಮಭೇದ ಮರೆತು ಒಗ್ಗಟ್ಟಾಗುವರೇ? ಸ್ವಾರ್ಥಹಿತಾಸಕ್ತಿಗಳನ್ನು ಗುರುತಿಸುವರೇ?
ಇತ್ತೀಚೆಗೆ ಸೇನೆಯ ಸರ್ವಾಧಿಕಾರಿ ಆಕ್ರಮಣಕ್ಕೆ ಟರ್ಕಿಯ ಜನತೆ ನೀಡಿದ ಉತ್ತರ, ಭಾರತದಂತಹ ಪ್ರಜಾಪ್ರಭುತ್ವ ಸರಕಾರಕ್ಕೆ ಅತ್ಯುತ್ತಮ ಮಾದರಿಯಾಗಿದೆ. ಭಾರತವೂ ಹೀಗೆ ಎಚ್ಚೆತ್ತರೆ ಮಾತ್ರ ನಾವು ಆಚರಿಸುವ ಸ್ವಾತಂತ್ರ್ಯೋತ್ಸವ ಅರ್ಥಪೂರ್ಣವಾಗಲು ಸಾಧ್ಯ. ಪ್ರಜಾಪ್ರಭುತ್ವ ಉಳಿಯಲು ಸಾಧ್ಯ.





