ಕೆಂಪು ಕೋಟೆಯಿಂದ ಪ್ರಧಾನಿ ಹೇಳಿದ್ದು ' ಸುಳ್ಳು' ಎಂದ ಉತ್ತರ ಪ್ರದೇಶದ ಗ್ರಾಮಸ್ಥರು !
ಹೊಸದಿಲ್ಲಿ, ಆ. 16 : ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಉತ್ತರ ಪ್ರದೇಶದ ನಗಲ ಫತೇಲ ಎಂಬ ಗ್ರಾಮಕ್ಕೆ ಸ್ವಾತಂತ್ರ್ಯ ಬಂದ ೭೦ ವರ್ಷಗಳ ಬಳಿಕ ವಿದ್ಯುತ್ ತಲುಪಿದೆ ಎಂದು ಪ್ರಧಾನಿ ಮೋದಿಯವರು ನೀಡಿದ ಹೇಳಿಕೆ ಬಗ್ಗೆ ಈಗ ಪ್ರಶ್ನೆ ಎದ್ದಿದೆ. ದಿಲ್ಲಿಯಿಂದ ಕೇವಲ ಮೂರು ಗಂಟೆಗಳ ದೂರದಲ್ಲಿರುವ ಉತ್ತರ ಪ್ರದೇಶದ ಈ ಗ್ರಾಮಕ್ಕೆ ೭೦ ವರ್ಷಗಳ ಬಳಿಕ ಈಗ ವಿದ್ಯುತ್ ತಲುಪಿದೆ ಎಂದು ಪ್ರಧಾನಿ ಹೇಳಿದ್ದರು. ಆದರೆ ಅಲ್ಲಿನ ಗ್ರಾಮಸ್ಥರು ' ಇದು ಸುಳ್ಳು ' ಎಂದು ಹೇಳುತ್ತಿದ್ದಾರೆ.
" ನಮ್ಮ ಊರಿನಲ್ಲಿ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಆರು ತಿಂಗಳ ಹಿಂದೆ ವಿದ್ಯುತ್ ತಂತಿಗಳನ್ನೂ ಅಳವಡಿಸಲಾಗಿದೆ. ಎಲ್ಲ ಮನೆಗಳಿಗೆ ಮೀಟರ್ ಅನ್ನೂ ಹಾಕಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಈವರೆಗೆ ಕೊಟ್ಟಿಲ್ಲ. ಇನ್ನು ಕೆಲವರು ಖಾಸಗಿ ಕೇಬಲ್ ಗಳ ಮೂಲಕ ಗ್ರಾಮದ ಹೊರಗಿನಿಂದ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಇದನ್ನು ತೋರಿಸಿ ವಿದ್ಯುತ್ ಇಲಾಖೆಯವರು ಊರಿನಲ್ಲಿ ವಿದ್ಯುತ್ ಸಂಪರ್ಕ ಬಂದಿದೆ ಎಂದು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸೋಮವಾರ ನಗಲ ಫತೇಲ ಗ್ರಾಮಸ್ಥರು ಟಿವಿಯಲ್ಲಿ ಪ್ರಧಾನಿ ಮೋದಿ ಅವರ ಭಾಷಣ ವೀಕ್ಷಿಸುತ್ತಿರುವ ಚಿತ್ರಗಳನ್ನು ಪ್ರಧಾನಿ ಕಚೇರಿ ಬಿಡುಗಡೆ ಮಾಡಿತ್ತು.