ಮೂಡುಬಿದಿರೆ : ಅಸ್ಕಾಲೈಟ್ ಹಸ್ತಾಂತರ ಮತ್ತು ವನ ಮಹೋತ್ಸವ
![ಮೂಡುಬಿದಿರೆ : ಅಸ್ಕಾಲೈಟ್ ಹಸ್ತಾಂತರ ಮತ್ತು ವನ ಮಹೋತ್ಸವ ಮೂಡುಬಿದಿರೆ : ಅಸ್ಕಾಲೈಟ್ ಹಸ್ತಾಂತರ ಮತ್ತು ವನ ಮಹೋತ್ಸವ](https://www.varthabharati.in/sites/default/files/images/articles/2016/08/16/IMG-20160816-WA0030.jpg)
ಮೂಡುಬಿದಿರೆ, ಆ.16: ಗೃಹ ರಕ್ಷಕ ದಳ ಮೂಡುಬಿದಿರೆಯ ನೇತೃತ್ವದಲ್ಲಿ ಅಸ್ಕಾಲೈಟ್ ಹಸ್ತಾಂತರ ಮತ್ತು ವನ ಮಹೋತ್ಸವ ಕಾರ್ಯಕ್ರಮವು ಮೂಡುಬಿದಿರೆ ಪೊಲೀಸ್ ಠಾಣಾ ಆವರಣದಲ್ಲಿ ರವಿವಾರ ನಡೆಯಿತು.
ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ರಿಗೆ ಅಸ್ಕಾಲೈಟ್ನ್ನು ಹಸ್ತಾಂತರಿಸಿ ಮಾತನಾಡಿ, ಗೃಹರಕ್ಷಕರೆಂದರೆ ಫಲಾಪೇಕ್ಷೆ ಇಲ್ಲದೆ ದುಡಿಯುವವರು ಎಂದರ್ಥ. ಸುಂದರ ಸಮಾಜದ ನಿರ್ಮಾಣದಲ್ಲಿ ಗೃಹರಕ್ಷಕರ ಪಾತ್ರವೂ ಮುಖ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ವೇಳೆಗಳಲ್ಲಿ ಅವಘಡಗಳು ಸಂಭವಿಸಿದಾಗ ಅಲ್ಲಿ ವಿದ್ಯುತ್ನ ಕೊರತೆಯಿದ್ದರೆ ಅಲ್ಲಿ ಈ ಅಸ್ಕಾಲೈಟ್ ಉಪಯೋಗವಾಗುತ್ತದೆ. 40 ಅಡಿ ಎತ್ತರವಿರುವ ಈ ಅಸ್ಕಾಲೈಟ್ 400 ಮೀಟರ್ ಅಂತರಕ್ಕೆ ಬೆಳಕು ಚೆಲ್ಲುವ ಸಾಮರ್ಥ್ಯ ಹೊಂದಿದ್ದು, 1ಲೀಟರ್ ಡೀಸೆಲ್ನಲ್ಲಿ ಒಂದು ಗಂಟೆ ಕಾಲ ಉರಿಯುತ್ತದೆ ಎಂದು ತಿಳಿಸಿದರು.
ಕೋಟಿವೃಕ್ಷ ಅಭಿಯಾನದಂಗವಾಗಿ ಜಿಲ್ಲೆಯಲ್ಲಿ 2,000 ಗಿಡಗಳನ್ನು ಗೃಹರಕ್ಷಕದಳದಿಂದ ನೆಡಲಾಗುತ್ತಿದೆ. ಮುಂದಿನ ಯೋಜನೆಯಾಗಿ ಸ್ವಚ್ಛ ಭಾರತ್ ಅಭಿಯಾನದ ಮೂಲಕ ಒಂದು ಕೇರಿಯನ್ನು ಅಥವಾ ಬಸ್ ತಂಗುದಾಣಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಸಿಬಂದಿಗಳು ತಮ್ಮನ್ನು ತೊಡಗಿಸಿಕೊಳ್ಳಲು ಸಿದ್ಧವಾಗಬೇಕಾಗಿದೆ ಎಂದು ತಿಳಿಸಿದರು.
ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಯುನಿಟ್ನ ಮಾಜಿ ಸದಸ್ಯ, ಪಡುಮಾರ್ನಾಡು ಗ್ರಾ.ಪಂನ ಸದಸ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪೊಲೀಸ್ ಉಪನಿರೀಕ್ಷಕ ದೇಜಪ್ಪ, ಆರಕ್ಷಕ ಠಾಣೆಯ ಮತ್ತು ಗೃಹರಕ್ಷಕದಳದ ಸಿಬ್ಬಂದಿ ಈ ಸಂದರ್ಭ ಉಪಸ್ಥಿತರಿದ್ದರು. ಮೂಡುಬಿದಿರೆ ಯುನಿಟ್ ಆಫೀಸರ್ ಪಾಂಡಿರಾಜ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ನಾಯ್ಕಿ ವಂದಿಸಿದರು.