ಕಲ್ಲಡ್ಕ: ಮುಂದುವರಿದ ವಿದ್ಯಾರ್ಥಿಗಳ ಪ್ರತಿಭಟನೆ
![ಕಲ್ಲಡ್ಕ: ಮುಂದುವರಿದ ವಿದ್ಯಾರ್ಥಿಗಳ ಪ್ರತಿಭಟನೆ ಕಲ್ಲಡ್ಕ: ಮುಂದುವರಿದ ವಿದ್ಯಾರ್ಥಿಗಳ ಪ್ರತಿಭಟನೆ](https://www.varthabharati.in/sites/default/files/images/articles/2016/08/17/kalladka shale 03.jpg)
ಬಂಟ್ವಾಳ, ಆ. 16: ತಾಲೂಕಿನ ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ವರ್ಗಾವಣೆಯನ್ನು ವಿರೋಧಿಸಿ ವಿದ್ಯಾರ್ಥಿಗಳು, ಎಸ್ಡಿಎಂಸಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಊರಿನ ನಾಗರಿಕರು ಶಾಲಾ ಆವರಣದ ಗೇಟಿಗೆ ಬೀಗ ಜಡಿದು ಮಂಗಳವಾರವೂ ಪ್ರತಿಭಟನೆ ನಡೆಸಿದರು. ಶಾಲೆ ಆವರಣದ ಹೊರಭಾಗದಲ್ಲಿರುವ ಸಂತೆ ಮಾರುಕಟ್ಟೆ ಕಟ್ಟಡದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸರಕಾರ, ಶಿಕ್ಷಣಾಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರಾದರೂ, ಕ್ಷೇತ್ರ ಶಿಕ್ಷಣಾಧಿಕಾರಿಯೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.
125 ವರ್ಷ ಇತಿಹಾಸವಿರುವ ಈ ಶಾಲೆಯಲ್ಲಿ 90ರ ದಶಕದಲ್ಲಿ 1,500 ವಿದ್ಯಾರ್ಥಿಗಳು ಕಲಿತ್ತಿದ್ದು, ತಾಲೂಕಿನ ಮಾದರಿ ಶಾಲೆಯಾಗಿತ್ತು. ಪ್ರಸ್ತುತ ವರ್ಷ ಈ ಶಾಲೆಯಲ್ಲಿ 213 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಈ ಶಾಲೆಯಲ್ಲಿದ್ದ 10 ಮಂದಿ ಶಿಕ್ಷಕರ ಪೈಕಿ ಇಬ್ಬರಿಗೆ ವರ್ಗಾವಣೆ ಆದೇಶ ಬಂದಿರುವುದು ಶಾಲಾಭಿವೃದ್ಧಿ ಮಂಡಳಿ ಹಾಗೂ ವಿದ್ಯಾರ್ಥಿಗಳ ಪೋಷಕರನ್ನು ಕಂಗೆಡಿಸಿದೆ. ಉಳಿದ ಎಂಟು ಮಂದಿ ಶಿಕ್ಷಕರಲ್ಲಿ ಮುಖ್ಯ ಶಿಕ್ಷಕಿ ಹಾಗೂ ದೈಹಿಕ ಶಿಕ್ಷಕಿಯರನ್ನು ಹೊರತುಪಡಿಸಿದರೆ ಆರು ಮಂದಿ ಶಿಕ್ಷಕರು ಕರ್ತವ್ಯದಲ್ಲಿರುತ್ತಾರೆ. ಶಿಕ್ಷಣ ಇಲಾಖೆಯ ಅನುಪಾತ ಲೆಕ್ಕಾಚಾರದಲ್ಲೂ ವಿದ್ಯಾರ್ಥಿಗಳಿಗೆ ಬೇಕಾದಷ್ಟು ಶಿಕ್ಷಕರು ಲಭ್ಯವಿಲ್ಲದಿರುವುದರಿಂದ ಶಿಕ್ಷಕರ ವರ್ಗಾವಣೆ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು. ವರ್ಗಾವಣೆಗೊಂಡ ಇಬ್ಬರು ಶಿಕ್ಷಕರ ಪೈಕಿ ಒಬ್ಬರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ಒಬ್ಬ ಬದಲಿ ಶಿಕ್ಷಕನನ್ನು ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಪಂ ಸದಸ್ಯೆ ಕಮಲಾಕ್ಷಿ, ತಾಪಂ ಸದಸ್ಯೆ ಮಹಾಬಲ ಆಳ್ವ, ಪ್ರಮುಖರಾದ ರಾಜೇಶ್ ಕೊಟ್ಟಾರಿ, ಯತಿನ್ ಪೂಜಾರಿ, ವಜ್ರನಾಥ ಕಲ್ಲಡ್ಕ, ಮುಸ್ತಫಾ ಕಲ್ಲಡ್ಕ, ಶಾಫಿ ಕಲ್ಲಡ್ಕ, ಜಾಫರ್ ಕಲ್ಲಡ್ಕ, ಅಬೂಬಕರ್, ಅಶ್ರಫ್, ಗ್ರಾಪಂ ಸದಸ್ಯೆ ಆಯಿಶಾ ಪಾಲ್ಗೊಂಡಿದ್ದರು.