ಅಲಿಘರ್ ಮುಸ್ಲಿಂ ವಿ.ವಿ. ಅಲ್ಪಸಂಖ್ಯಾತ ಸಂಸ್ಥೆಯಲ್ಲ ಎಂದು ಹೇಳಿದ ಕೇಂದ್ರಕ್ಕೆ ವಿ.ವಿ. ತರಾಟೆ
![ಅಲಿಘರ್ ಮುಸ್ಲಿಂ ವಿ.ವಿ. ಅಲ್ಪಸಂಖ್ಯಾತ ಸಂಸ್ಥೆಯಲ್ಲ ಎಂದು ಹೇಳಿದ ಕೇಂದ್ರಕ್ಕೆ ವಿ.ವಿ. ತರಾಟೆ ಅಲಿಘರ್ ಮುಸ್ಲಿಂ ವಿ.ವಿ. ಅಲ್ಪಸಂಖ್ಯಾತ ಸಂಸ್ಥೆಯಲ್ಲ ಎಂದು ಹೇಳಿದ ಕೇಂದ್ರಕ್ಕೆ ವಿ.ವಿ. ತರಾಟೆ](https://www.varthabharati.in/sites/default/files/images/articles/2016/08/17/53732420.jpg)
ಹೊಸದಿಲ್ಲಿ, ಆ.17: ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯವನ್ನು ‘ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆ’ ಎಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಮುಂದೆ ಹೇಳಿರುವುದು ವಿಶ್ವವಿದ್ಯಾನಿಲಯದ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ರಾಜಕೀಯ ದೃಷ್ಟಿಯಿಂದ ಇಂತಹ ಒಂದು ಧೋರಣೆ ತಳೆದಿದೆ ಹಾಗೂ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ವಿಶ್ವವಿದ್ಯಾನಿಲಯ ಹೇಳಿದೆ.
ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಯೆಂಬ ಸ್ಥಾನಮಾನವನ್ನು ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ನೀಡಲು ಸಂಸತ್ತು ಸಂಬಂಧಿತ ಕಾನೂನನ್ನು 1981 ರಲ್ಲಿ ತಿದ್ದುಪಡಿ ಮಾಡಿತ್ತು ಎಂದು ಸುಪ್ರೀಂ ಕೋರ್ಟ್ ಮುಂದೆ ವಿಶ್ವವಿದ್ಯಾನಿಲಯ ಸಲ್ಲಿಸಿರುವ ಅಫಿಡವಿಟ್ನಲ್ಲಿ ಹೇಳಲಾಗಿದೆ. ವಿಶ್ವವಿದ್ಯಾನಿಲಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನದ ಬೆಂಬಲವಾಗಿ ಹಿಂದಿನ ಯುಪಿಎ ಸರಕಾರ ಸಲ್ಲಿಸಿದ್ದ ಅರ್ಜಿಯನ್ನೂ ಕೇಂದ್ರ ಹಿಂದಕ್ಕೆ ಪಡೆದುಕೊಂಡಿದೆ.
‘‘ಸಂಸತ್ತು ತಿದ್ದುಪಡಿ ಮಾಡಿರುವ ಕಾನೂನೊಂದರ ನ್ಯಾಯಬದ್ಧತೆಯನ್ನು ಕೇಂದ್ರ ಸರಕಾರ ಪ್ರಶ್ನಿಸುವಂತಿಲ್ಲ ಹಾಗೂ ಇದು ಸಂಸತ್ ನಿಂದನೆಗೆ ಸಮವಾಗುತ್ತದೆ’’ಎಂದು ವಿಶ್ವವಿದ್ಯಾನಿಲಯ ತನ್ನ ಅಫಿಡವಿಟ್ನಲ್ಲಿ ಹೇಳಿದೆ.
1981 ರಲ್ಲಿ ಎಎಂಯು ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದ್ದರೂ 1967ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪೊಂದು ಇನ್ನೂ ಅನ್ವಯಿಸುತ್ತದೆ ಎಂದು ಕೇಂದ್ರ ವಾದಿಸಿತ್ತು. ಅಝೀಝ್ ಬಾಶಾ ಪ್ರಕರಣದಲ್ಲಿ ತನ್ನ ತೀರ್ಪನ್ನು 1967 ರಲ್ಲಿ ನೀಡಿದ್ದ ಸುಪ್ರೀಂ ಕೋರ್ಟ್ ಸಂಸ್ಥೆಯನ್ನು ಸಂಸತ್ತಿನ ಕಾನೂನೊಂದರ ಮುಖಾಂತರ ಸ್ಥಾಪಿಸಲಾಗಿತ್ತೇ ವಿನಹ ಮುಸ್ಲಿಮರಿಂದ ಸ್ಥಾಪಿತವಾಗಿಲ್ಲದ ಕಾರಣ ಅದನ್ನು ಅಲ್ಪಸಂಖ್ಯಾತ ಸಂಸ್ಥೆಯೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಹೇಳಿತ್ತು.