ಈ ಆರ್ಜೆ ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಪ್ರಚೋದಿಸಿದಾಗ ಸಿಕ್ಕಿದ ಪ್ರತಿಕ್ರಿಯೆ ನೋಡಿ...
ಹೊಸದಿಲ್ಲಿ, ಆ.17: ಭಾರತದಲ್ಲಿ ಹಿಂದೂಗಳ ಹಾಗೂ ಮುಸ್ಲಿಮರ ಮಧ್ಯೆ ಉದ್ವಿಗ್ನತೆ ಉಂಟಾದ ಹಲವು ಸಂದರ್ಭಗಳು ಎದುರಾಗಿದ್ದರೂ ತಳಮಟ್ಟದಲ್ಲಿ ಈ ಎರಡು ಸಮುದಾಯಗಳ ನಡುವಣ ಸಂಬಂಧಗಳು ಹೇಗಿವೆಯೆಂಬುದನ್ನು ಪರೀಕ್ಷಿಸಲು ರೇಡಿಯೊ ಮಿರ್ಚಿಯಲ್ಲಿ ತಮ್ಮ ‘ಮುರ್ಗಾ’ ಶೋ ಮೂಲಕ ಖ್ಯಾತರಾದ ಆರ್ಜೆ ನವೇದ್ ಸ್ವಾತಂತ್ರ್ಯ ದಿನದಂದು ಪರೀಕ್ಷಿಸಿಯೇ ಬಿಡೋಣವೆಂದು ಹೊರಟಿದ್ದರು. ಅವರಿಗೆ ಸಿಕ್ಕ ಪ್ರತಿಕ್ರಿಯೆಯಂತೂ ಅತ್ಯದ್ಭುತವಾಗಿತ್ತು.
ಮುಸ್ಲಿಮರು ಹಾಗೂ ಹಿಂದೂಗಳು ಒಬ್ಬರನ್ನೊಬ್ಬರ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂದು ತಿಳಿದುಕೊಳ್ಳುವ ಪ್ರಯತ್ನ ಇದಾಗಿತ್ತು. ನವೇದ್ ಅವರ ಪ್ರಯತ್ನ ರಾಜಕಾರಣಿಗಳು ಹಾಗೂ ಮಾಧ್ಯಮ ಕಣ್ಣಿಗೆ ಗೋಚರಿಸದ ಒಂದು ಸುಂದರವಾದ ಸತ್ಯವನ್ನು ಬಹಿರಂಗಪಡಿಸಿತ್ತು.
ವಾಸ್ತವವಾಗಿ ಹಿಂದೂಗಳು ಹಾಗೂ ಮುಸ್ಲಿಮರು ಸೋದರರು ಎಂಬುದನ್ನು ಈ ವೀಡಿಯೊ ತಿಳಿಸುತ್ತದೆ ಹಾಗೂ ಈ ಎರಡು ಸಮುದಾಯಗಳ ನಡುವೆ ಭೇದ-ಭಾವಗಳ ಬೀಜವನ್ನು ಬಿತ್ತುತ್ತಿರುವವರು ಕೆಲ ಧಾರ್ಮಿಕ ಉಗ್ರವಾದಿಗಳು ಹಾಗೂ ಮೂಲಭೂತವಾದಿಗಳು ಎಂಬುದೂ ಸ್ಪಷ್ಟವಾಗಿದೆ.
ಮುಸ್ಲಿಂ ಬಾಹುಳ್ಯ ಪ್ರದೇಶವಾದ ದಿಲ್ಲಿಯ ನಿಜಾಮುದ್ದೀನ್ ಪ್ರದೇಶಕ್ಕೆ ಭೇಟಿ ನೀಡಿದ ನವೇದ್ ಅಲ್ಲಿ ‘‘ಮುಸ್ಲಿಮರು ಒಂದಾದರೆ ಅದು ಹಿಂದೂಗಳನ್ನು ಹೆದರಿಸಲು ಸುಲಭ’’ ಎಂದು ಫೋನಿನಲ್ಲಿ ಮಾತನಾಡುತ್ತಿರುವಂತೆ ನಟಿಸಿದ್ದಾರೆ. ಜನರು ಸಹಜವಾಗಿ ಅವರಾಡಿದ ಮಾತುಗಳನ್ನು ಕೇಳಿದ್ದಾರೆ ಹಾಗೂ ಅವರ ಪ್ರತಿಕ್ರಿಯೆ ನಿಜಕ್ಕೂ ರೋಮಾಂಚನಕಾರಿ.
ನಂತರ ನವೇದ್ ದೇವಸ್ಥಾನವೊಂದಕ್ಕೆ ಹೋಗಿ ಅಲ್ಲಿನ ಹಿಂದೂಗಳನ್ನೂ ಇದೇ ರೀತಿ ಪ್ರಚೋದಿಸಲು ಯತ್ನಿಸುತ್ತಾರೆ. ಇದಕ್ಕೆ ಸಾಮಾನ್ಯರಿಂದ ದೊರೆತ ಪ್ರತಿಕ್ರಿಯೆ ಭಾರತದ ಜನರು ಧರ್ಮದ ವಿಚಾರದಲ್ಲಿ ಭೇದ ಭಾವ ಮಾಡದೆ ಎಷ್ಟೊಂದು ಸರಳವಾಗಿ ಹಾಗೂ ಸ್ನೇಹಮಯವಾಗಿದ್ದಾರೆಂಬುದನ್ನು ತಿಳಿಸುತ್ತದೆ.
ನವೇದ್ ಅವರ ಮಾತುಗಳಿಗೆ ಜನರಿಂದ ದೊರೆತ ಪ್ರತಿಕ್ರಿಯೆಯ ಈ ವೀಡಿಯೊ ನೋಡಿ ನೀವೂ ಸಂತಸಪಡಿ.