ಭಟ್ಕಳ: ಉಜಿರೆಯ ಬ್ರಹ್ಮಾನಂದ ಶ್ರೀಗಳಿಗೆ ಮಗ್ದೂಮ್ ಕಾಲನಿಯ ಮುಸ್ಲಿಮರಿಂದ ಭವ್ಯ ಸ್ವಾಗತ
ಹಿಂದೂ-ಮುಸ್ಲಿಂ ಐಕ್ಯತೆಗೆ ಮತ್ತೊಂದು ಉದಾಹರಣೆ

ಭಟ್ಕಳ, ಆ.17: ಭಟ್ಕಳಕ್ಕೆ ಆಗಮಿಸಿದ ಉಜಿರೆ ಶ್ರೀರಾಮಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದಾ ತೀರ್ಥ ಶ್ರೀಗಳನ್ನು ಇಲ್ಲಿನ ಮಗ್ದೂಮ್ ಕಾಲನಿಯ ಮುಸ್ಲಿಮರು ಆದರದಿಂದ ಬರಮಾಡಿಕೊಂಡರು.
ಬುಧವಾರ ಕರಿಕಾಲ್ ಗ್ರಾಮದಲ್ಲಿ ಧ್ಯಾನ ಮಂದಿರ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಮಗ್ದೂಮ್ ಕಾಲನಿಗೆ ಆಗಮಿಸಿದ ಶ್ರೀಗಳಿಗೆ ಮಗ್ದೂಮ್ ಕಾಲನಿ ನಿವಾಸಿಗಳು ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಮರ್ಕಝ್ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಜೈಲಾನಿ ಸಿದ್ದೀಖಾ, ಹಿರಿಯರಾದ ಸಲ್ಮಾನ್ ಚಾಮುಂಡಿ, ಅನ್ಸಾರ್ಎಸ್.ಎಂ., ಮುಖ್ತಾರ್ ಮುಕ್ತೆಸರ್, ಅಬ್ದುಲ್ ಆಹದ್ ಮೆಡಿಕಲ್ ಮುಂತಾದವರು ಉಪಸ್ಥಿತರಿದ್ದರು.
ಮಗ್ದೂಮ್ ಕಾಲನಿ ಶಾಹೀನ್ ಸ್ಪೋರ್ಟ್ಸ್ ಸೆಂಟರ್ನ ಸದಸ್ಯರು ಈ ಹಿಂದೆ ಇಲ್ಲಿ ಮಾರಿಜಾತ್ರಾ ಮೆರವಣಿಗೆಯಲ್ಲಿ ಹಿಂದೂ ಬಾಂಧವರಿಗೆ ತಂಪುಪಾನಿಯ ವಿತರಿಸುವುದರ ಮೂಲಕ ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದನ್ನು ಸ್ಮರಿಸಬಹುದಾಗಿದೆ.
Next Story





