ಕಾವೇರಿ ನೀರಿಗಾಗಿ ಸುಪ್ರೀಮ್ನಲ್ಲಿ ಅರ್ಜಿ ಸಲ್ಲಿಸುವಂತೆ ಜಯಲಲಿತಾ ಆದೇಶ
![ಕಾವೇರಿ ನೀರಿಗಾಗಿ ಸುಪ್ರೀಮ್ನಲ್ಲಿ ಅರ್ಜಿ ಸಲ್ಲಿಸುವಂತೆ ಜಯಲಲಿತಾ ಆದೇಶ ಕಾವೇರಿ ನೀರಿಗಾಗಿ ಸುಪ್ರೀಮ್ನಲ್ಲಿ ಅರ್ಜಿ ಸಲ್ಲಿಸುವಂತೆ ಜಯಲಲಿತಾ ಆದೇಶ](https://www.varthabharati.in/sites/default/files/images/articles/2016/08/18/o-JAYALALITHA-facebook.jpg)
ಚೆನ್ನೈ,ಆ.18: ಕಾವೇರಿ ನದಿನೀರು ನ್ಯಾಯಾಧಿಕರಣದ ಅಂತಿಮ ತೀರ್ಪಿನಂತೆ ಕಾವೇರಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕ ಸರಕಾರವು ನಿರಾಕರಿಸಿರುವುದರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸುವಂತೆ ತಾನು ಆದೇಶಿಸಿರುವುದಾಗಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಸ್ವಯಂಪ್ರೇರಿತ ಹೇಳಿಕೆಯಲ್ಲಿ ತಿಳಿಸಿದರು.
ಇನ್ನೆರಡು ದಿನಗಳಲ್ಲಿ ಅರ್ಜಿ ಸಲ್ಲಿಕೆಯಾಗಲಿದೆ. ಸರ್ವೋಚ್ಚ ನ್ಯಾಯಾಲಯವು ಸೂಕ್ತ ಆದೇಶ ನೀಡುತ್ತದೆ ಮತ್ತು ನ್ಯಾಯಾಧಿಕರಣದ ಅಂತಿಮ ತೀರ್ಪಿನಂತೆ ಕಾವೇರಿ ನೀರಿನಲ್ಲಿ ರಾಜ್ಯವು ತನ್ನ ಪಾಲನ್ನು ಪಡೆಯುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.
ಕರ್ನಾಟಕದ ಪ್ರಮುಖ ಜಲಾಶಯಗಳಾದ ಹಾರಂಗಿ,ಕೃಷ್ಣರಾಜಸಾಗರ ಮತ್ತು ಕಬಿನಿಗಳ ಒಟ್ಟು ಸಂಗ್ರಹ ಸಾಮರ್ಥ್ಯ 114.575 ಟಿಎಂಸಿಗಳಾಗಿದ್ದು,ಆ.17ಕ್ಕೆ ಈ ಜಲಾಶಯಗಳಲ್ಲಿ 64.849 ಟಿಎಂಸಿ ನೀರಿತ್ತು. ಕರ್ನಾಟಕವು ತನ್ನ ಸ್ವಂತ ಕೃಷಿಕಾರ್ಯಗಳಿಗಾಗಿ ಈ ಜಲಾಶಯಗಳಿಂದ ನೀರನ್ನು ಬಿಡುಗಡೆಗೊಳಿಸುತ್ತಿದೆ. ಆದರೆ ಮೆಟ್ಟೂರು ಜಲಾಶಯದಲ್ಲಿ 27.560 ಟಿಎಂಸಿ ಮಾತ್ರ ನೀರಿದೆ ಎಂದರು.