ಸುಳ್ಯದಲ್ಲಿ ರಕ್ತದಾನಿಗಳ ಕ್ಲಬ್ ರಚನೆ: ರಕ್ತ ವರ್ಗೀಕರಣ ಶಿಬಿರ
![ಸುಳ್ಯದಲ್ಲಿ ರಕ್ತದಾನಿಗಳ ಕ್ಲಬ್ ರಚನೆ: ರಕ್ತ ವರ್ಗೀಕರಣ ಶಿಬಿರ ಸುಳ್ಯದಲ್ಲಿ ರಕ್ತದಾನಿಗಳ ಕ್ಲಬ್ ರಚನೆ: ರಕ್ತ ವರ್ಗೀಕರಣ ಶಿಬಿರ](https://www.varthabharati.in/sites/default/files/images/articles/2016/08/18/rakthadanigala-club-udfghatane-(1).jpg)
ಸುಳ್ಯ, ಆ.18: ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಮಿತಿಯ ಆಶ್ರಯದಲ್ಲಿ ರಕ್ತದಾನಿಗಳ ಕ್ಲಬ್ ಉದ್ಘಾಟನೆ, ರಕ್ತ ವರ್ಗೀಕರಣ ಶಿಬಿರ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಕುಟುಂಬಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ನಿರ್ದೇಶಕಿ ಶೋಭಾ ಚಿದಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಸರ್ಕಲ್ ಇನ್ಸ್ಪೆಕ್ಟರ್ವಿ.ಕೃಷ್ಣಯ್ಯ ರಕ್ತದಾನಿಗಳ ಕ್ಲಬ್ಗೆ ಚಾಲನೆ ನೀಡಿದರು.
ಒಳ್ಳೆಯ ಆರೋಗ್ಯಕ್ಕೆ ಉತ್ತಮ ಆಹಾರ ಮುಖ್ಯ. ವ್ಯಾಯಾಮವೂ ಅಷ್ಟೇ ಅಗತ್ಯ. ನಿತ್ಯ ಕೆಲಸದ ಒತ್ತಡದಲ್ಲಿರುವ ಪೊಲೀಸರು ಒತ್ತಡ ನಿವಾರಣೆಗಾಗಿ ಕೆಲಸಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಆರೋಗ್ಯದ ಕಡೆಗೆ ಗಮನ ನಿಡುವುದಿಲ್ಲ. ಆಗಾಗ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಆರೋಗ್ಯವನ್ನು ಕಾಪಾಡಬಹುದುದಾಗಿದ್ದು, ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವವನ್ನೂ ಉಳಿಸಬಹುದು ಎಂದರು.
ಕೆವಿಜಿ ಸುಳ್ಯ ಹಬ್ಬ ಸೇವಾ ಸಮಿತಿಯವರು ರಕ್ತದಾನಿಗಳ ಕ್ಲಬ್ ಆರಂಭಿಸಿದ್ದು, ಉತ್ತಮ ಕಾರ್ಯ ಎಂದು ಎಸ್ಸೈ ಚಂದ್ರಶೇಖರ್ ಹೇಳಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಮಾತನಾಡಿ, ರಕ್ತದಾನಿಗಳ ಕ್ಲಬ್ ಸಸದಸ್ಯರು ಉತ್ಸಾಹದಿಂದ ಬಂದು ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡಿದಾಗ ಮಾತ್ರ ಅದು ಯಶಸ್ವಿಯಾಗುತ್ತದೆ. ಆ ಕಾರ್ಯ ಈ ಕ್ಲಬ್ನಿಂದ ಆಗಲಿ ಎಂದರು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ವತಿಯಿಂದ ಈ ವರ್ಷ ಪ್ರತಿ ತಿಂಗಳೂ ಒಂದೊಂದು ಕಾರ್ಯಕ್ರಮವನ್ನು ಹಾಕಿಕೊಳ್ಳುವ ಮೂಲಕ ಕುರುಂಜಿಯವರನ್ನು ನೆನಪಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದವರು ಹೇಳಿದರು.
ಸಮಿತಿ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಕಾಲೇಜಿನ ಪ್ರಾಂಶುಪಾಲೆ ಡಾ.ರೂಪಾ ಆರ್.ಕುಲಕರ್ಣಿ, ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪೇರಾಲು, ಸಂಚಾಲಕ ದಿನೇಶ್ ಅಂಬೆಕಲ್ಲು, ಕೋಶಾಧಿಕಾರಿ ಡಾ.ಕೆ.ಜಿ.ಪುರುಷೋತ್ತಮ ವೇದಿಕೆಯಲ್ಲಿದ್ದರು. ಕೆ.ಎಂ.ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು.