ಜೈಲಿನೊಳಗೆ ಚಮಚದಿಂದ ಕೈದಿಯ ಕೊಲೆ

ಸಹರಾನ್ ಪುರ, ಆ.18: ಉತ್ತರಪ್ರದೇಶದ ಸಹರಾನ್ ಪುರ ಜಿಲ್ಲಾ ಕಾರಾಗ್ರಹದಲ್ಲಿ ಹತ್ಯಾರೋಪಿ ಕೈದಿಯೊಬ್ಬನನ್ನು ಇನ್ನೊಬ್ಬ ಕೈದಿ ಚಮಚವನ್ನು ಹರಿತಗೊಳಿಸಿ ಕೊರಳು ಸೀಳಿ ಕೊಂದು ಹಾಕಿದ ಘಟನೆ ವರದಿಯಾಗಿದೆ. ವಿಷಯ ತಿಳಿದು ಪೊಲೀಸ್ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿದ್ದಾರೆ ಹಾಗೂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿತಿಳಿಸಿದೆ. ಬೆಳಗ್ಗಿನ ಜಾವ 4 ಗಂಟೆಯ ವೇಳೆಗೆ ಸಹಾರನ್ಪುರ್ ಜೈಲಿನಲ್ಲಿ, ಶಹನಾರ್ ಎಂಬ ಕೈದಿ, ಸಹಕೈದಿಯಾದ 2 ವರ್ಷಗಳಿಂದ ಕಾರಾಗೃಹದಲ್ಲಿರುವ ಸೂಖಾ ಎಂಬಾತನ ಕೊರಳನ್ನು ಹರಿತವಾದ ಚಮಚದಿಂದ ಇರಿದು ಕೊಲೆಗೈದಿದ್ದಾನೆ ಎಂದು ಅಪರ ಪೊಲೀಸ್ ಅಧೀಕ್ಷಕ ಸಂಜಯ್ ಸಿಂಗ್ ತಿಳಿಸಿದ್ದಾರೆ.
ಶಹನಾರ್ ಕಳೆದ 4ವರ್ಷಗಳಿಂದ ಮುಝಪ್ಫರ್ ನಗರ ಅವಳಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಸಹಾರನ್ಪುರ ಜೈಲಿನಲ್ಲಿದ್ದಾನೆ. ಈತ ವಿಕ್ಕಿತ್ಯಾಗಿ ಗ್ಯಾಂಗ್ನ ಸದಸ್ಯನೆಂದು ತಿಳಿದು ಬಂದಿದೆ. ಹತ್ಯೆಯಾಗಿರುವ ಸೂಖಾನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆಂದು ವರದಿ ತಿಳಿಸಿದೆ.





