ವಿಕಾಸ್ ಕಾಲೇಜಿನಲ್ಲಿ ಸಂಸ್ಕೃತೋತ್ಸವ
![ವಿಕಾಸ್ ಕಾಲೇಜಿನಲ್ಲಿ ಸಂಸ್ಕೃತೋತ್ಸವ ವಿಕಾಸ್ ಕಾಲೇಜಿನಲ್ಲಿ ಸಂಸ್ಕೃತೋತ್ಸವ](https://www.varthabharati.in/sites/default/files/images/articles/2016/08/18/vikas1.jpg)
ಮಂಗಳೂರು, ಆ.18: ನಗರದ ವಿಕಾಸ್ ಕಾಲೇಜಿನಲ್ಲಿ ನಡೆದ ಸಂಸ್ಕೃತೋತ್ಸವವನ್ನು ಆದರ್ಶ ಗೋಖಲೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲವೂ ನನ್ನದು ಅಂದುಕೊಂಡಾಗ ಕೆಲಸದಲ್ಲಿ ಪರಿಪೂರ್ಣತೆ ಸಾಧ್ಯ ಎಂದು ಸಂಸ್ಕೃತ ಶ್ಲೋಕಗಳ ಅರ್ಥವನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ವಿದ್ಯಾರ್ಥಿ ಜೀವನದಲ್ಲಿ ನಾವು ಏನನ್ನು ಅಳವಡಿಸಿಕೊಂಡಿದ್ದೇವೋ, ಅದನ್ನು ಸಾಧಿಸುವುದು ಬಹಳ ಮುಖ್ಯ, ಭಾರತ ಜ್ಞಾನದ ಭಂಡಾರ. ಅನುಕರಣೆಗಿಂತ ಅನುಸರಣೆ ಬಹಳ ಮುಖ್ಯ. ಎಲ್ಲಾ ಆಕರ್ಷಣೆಗಳು ತಾತ್ಕಾಲಿಕ ಎಂದು ಹೇಳಿದರು.
ಉಪಪ್ರಾಂಶುಪಾಲೆ ಮೋಹನಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಕಾಸ್ ಎಜುಕೇಷನ್ ಟ್ರಸ್ಟ್ನ ಟ್ರಸ್ಟಿ ಜೆ.ಕೊರಗಪ್ಪ, ವಿಕಾಸ್ ಎಜ್ಯೂ ಸೊಲ್ಯುಷನ್ನ ನಿರ್ದೇಶಕ ಡಾ.ಅನಂತ್ಪ್ರಭು ಜಿ., ಸಂಚಾಲಕ ರಾಜಾರಾಮ್ ಉಪಸ್ಥಿತರಿದ್ದರು.
ಸಂಸ್ಕೃತ ಉಪನ್ಯಾಸಕ ಲಕ್ಷ್ಮೀಶ್ ಭಟ್ ಸ್ವಾಗತಿಸಿದರು, ಪೃಥ್ವಿ ವಂದಿಸಿದರು. ಯುಕ್ತಾ ಮತ್ತು ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕೃತೋತ್ಸವದ ಪ್ರಯುಕ್ತ ಪದಬಂಧ, ಮೂಕಾಭಿನಯ, ರಸಪ್ರಶ್ನೆ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.