ನೇತಾಜಿ ' ಪುಣ್ಯತಿಥಿ' ಯಂದು ಶ್ರದ್ಧಾಂಜಲಿ ಸಲ್ಲಿಸಿ ಇಕ್ಕಟ್ಟಿಗೆ ಸಿಲುಕಿದ ಜೇಟ್ಲಿ
ಬಿಜೆಪಿ ನಾಯಕ, ಬೋಸ್ ಮರಿಮೊಮ್ಮಗನ ಆಕ್ರೋಶ

ಹೊಸದಿಲ್ಲಿ, ಆ. 18 : ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. 1945 ರ ಆಗಸ್ಟ್ 18 ರಂದು ತೈವಾನ್ ನಲ್ಲಿ ನಡೆದ ವಿಮಾನ ಅವಘಡದಲ್ಲಿ ನೇತಾಜಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ನೇತಾಜಿ ಅವರ ಕುಟುಂಬ ಸಹಿತ ಹಲವರು ಇದನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಈ ದುರಂತದಲ್ಲಿ ನೇತಾಜಿ ಮೃತಪಟ್ಟಿಲ್ಲ, ಅವರು ಆ ಬಳಿಕವೂ ಹಲವು ಸಮಯ ಜೀವಂತವಿದ್ದರು. ಅವರು ಈಗ ಜೇಟ್ಲಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಆದರೆ ಗುರುವಾರ ನೇತಾಜಿಗೆ ಟ್ವಿಟ್ಟರ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಜೇಟ್ಲಿ ಈ ಗೊಂದಲದ ಗೂಡಿಗೆ ಕೈ ಹಾಕಿದ್ದಾರೆ. ನೇತಾಜಿ ಅವರ ಮರಿ ಮೊಮ್ಮಗ ಹಾಗು ಸದ್ಯ ಬಿಜೆಪಿಯಲ್ಲಿರುವ ಚಂದ್ರ ಬೋಸ್ ಕೂಡ ಜೇಟ್ಲಿ ವಿರುದ್ಧ ಮುಗಿಬಿದ್ದವರಲ್ಲಿ ಸೇರಿರುವುದು ಅವರಿಗೆ ಬಹುದೊಡ್ಡ ತಲೆನೋವಾಗಿದೆ. ಚಂದ್ರ ಬೋಸ್ ಇತ್ತೀಚಿಗೆ ನಡೆದ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿದ್ದರು.
ಜೇಟ್ಲಿಯವರು ಹೀಗೆ ಟ್ವೀಟ್ ಮಾಡಿದ್ದರು : “Netaji Subhas Chandra Bose was an icon of exemplary valour and sacrifice. We remember and pay him our respectful tribute on his death anniversary.”
ಜೇಟ್ಲಿ ಟ್ವೀಟ್ ಗೆ ಮೊದಲು ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು " ಜೇಟ್ಲಿ ಅವರ ಟ್ವೀಟ್ ನೋಡಿ ನನಗೆ ಆಶ್ಚರ್ಯವಾಯಿತು. ಇದರಿಂದ ನಮಗೆಲ್ಲ ನೋವಾಗಿದೆ " ಎಂದು ಮಮತಾ ಹೇಳಿದ್ದಾರೆ.
ಕೇಂದ್ರ ಎನ್ ಡಿ ಎ ಸರಕಾರ ನೇತಾಜಿ ನಿಧನ ತೈವಾನ್ ವಿಮಾನ ದುರಂತದಲ್ಲೇ ಆಯಿತು ಎಂದು ಪರಿಗಣಿಸುತ್ತದೆಯೇ ಎಂದು ಜೇಟ್ಲಿಯವರ ಟ್ವೀಟ್ ಅನ್ನು ಖಂಡಿಸುವವರ ಪ್ರಶ್ನೆಯಾಗಿದೆ.

Today is Raksha Bandhan I don't want to hurt anybody. But shocked with @arunjaitley Ji hurtful tweet this morning on Netaji.We're all hurt
— Mamata Banerjee (@MamataOfficial) August 18, 2016







