ಘೋಷಣೆ ಕೂಗುವುದು ಅಪರಾಧವಲ್ಲ : ಎಬಿವಿಪಿ ವಿರುದ್ಧ ಎಫ್ಐಆರ್ ದಾಖಲಿಸಲು ಎಸ್ಎಫ್ಐ ಪಟ್ಟು

ಬೆಂಗಳೂರು, ಆ.18: ಯಾವುದೇ ರೀತಿಯ ಅನುಮತಿಯಿಲ್ಲದೆ, ಇಲ್ಲಿನ ಮಿಲ್ಲರ್ಸ್ ರಸ್ತೆಯ ಥಿಯೋಲಾಜಿಕಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಾರ್ಯಕ್ರಮ ಪ್ರವೇಶಿಸಿದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಳ್ಳಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಪಟ್ಟುಹಿಡಿದಿದೆ.
ಗುರುವಾರ ನಗರದ ಮೈಸೂರುಬ್ಯಾಂಕ್ ವೃತ್ತದಲ್ಲಿ ಎಸ್ಎಫ್ಐ ಸಂಘಟನೆಯ ನೂರಕ್ಕೂ ಹೆಚ್ಚು ಕಾರ್ಯಕರ್ತರು ‘ಅಭಿವ್ಯಕ್ತಿ ಸ್ವಾತಂತ್ರ ಉಳಿಸಿ-ದೇಶದ ಐಕ್ಯತೆ ಬೆಳಸಿ’ ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಎಸ್ಎಫ್ಐ ಉಪಾಧ್ಯಕ್ಷ ಎಸ್.ಚಿಕ್ಕರಾಜು, ಅಮ್ನೆಸ್ಟಿ ಸಂವಾದ ನಡೆಸುವಾಗ ಸಂತ್ರಸ್ತ ಕಾಶ್ಮೀರಿಗಳು ಪಾಲ್ಗೊಂಡು ತಮಗಾದ ಅನ್ಯಾಯದ ವಿರುದ್ಧ ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ತಮಗೆ ಆಹ್ವಾನವಿಲ್ಲದೇ ಅಕ್ರಮವಾಗಿ ಸಭೆಗೆ ಪ್ರವೇಶಿಸಿದ ಎಬಿವಿಪಿ ಕಾರ್ಯಕರ್ತರು ಸಭೆಗೆ ಅಡ್ಡಿಪಡಿಸಿದ್ದಲ್ಲದೇ, ಸಂತ್ರಸ್ತ ಕಾಶ್ಮೀರಿಗಳ ವಿರುದ್ಧ ಪ್ರಚೋದನಾಕಾರಿ ಶಬ್ದಗಳನ್ನು ಬಳಸಿ ಸಭೆಯಲ್ಲಿ ಗೊಂದಲ ಮೂಡಿಸುವ ಜೊತೆಗೆ ಕಾಶ್ಮೀರಿ ಯುವಕರನ್ನು ಪ್ರಚೋದಿಸಲು ಯತ್ನಿಸಿದರು. ಹೀಗಾಗಿ, ಈ ಕೂಡಲೇ ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಮ್ನೆಸ್ಟಿ ಕಾರ್ಯಕ್ರಮದಲ್ಲಿ ಸೈನ್ಯದ ವಿರುದ್ಧದ ಮಾತುಗಳನ್ನು ದೇಶದ್ರೋಹಿ ಘೋಷಣೆ ಕೂಗಲಾಯಿತು ಎಂದು ಗದ್ದಲವೆಬ್ಬಿಸಿದ ಎಬಿವಿಪಿ, ಅಮ್ನೆಸ್ಟಿ ಮತ್ತು ಕಾಶ್ಮೀರಿ ಸಂತ್ರಸ್ತರ ವಿರುದ್ಧ ದೂರು ನೀಡಿ, ಕಾಶ್ಮೀರಿಗಳನ್ನು ಭಯೋತ್ಪಾದಕರಂತೆ ಬಿಂಬಿಸುತ್ತಿರುವುದು ಎಬಿವಿಪಿಯ ಮತೀಯ ಅಜೆಂಡಾವನ್ನು ತೆರೆದಿಟ್ಟಿದೆ. ಅಲ್ಲದೆ, ಎಬಿವಿಪಿಯ ಈ ವರ್ತನೆ ದೇಶದ ಐಕ್ಯತೆಗೆ ಮಾರಕವಾಗಿದೆ ಎಂದು ಕಿಡಿಕಾರಿದರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಮಾತನಾಡಿ, ಎಬಿವಿಪಿ ದೇಶ ಪ್ರೇಮದ ಹೆಸರಿನಲ್ಲಿ ವಿದ್ಯಾರ್ಥಿಗಳ ಕೋಮು ಭಾವನೆಗಳನ್ನು ಕೆರಳಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ ಮತ್ತು ದೇಶದ ಐಕ್ಯತೆ ಧಕ್ಕೆ ತರುತ್ತಿದೆ. ಅಲ್ಲದೆ, ಅಮ್ನೆಸ್ಟಿ ಕಾರ್ಯಕ್ರಮದಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಸಂತ್ರಸ್ತ ಕಾಶ್ಮೀರಿಗಳು ತಮ್ಮ ಮೇಲೆ ದೌರ್ಜನ್ಯವೆಸಗಿದ ಸೈನ್ಯದ ವಿರುದ್ಧ ಘೋಷಣೆ ಕೂಗಿದ್ದಾರೆಂದು ನೆಪಹೇಳಿ ಎಬಿವಿಪಿ ನೀಡಿದ ದೂರಿನ ಆಧಾರದಲ್ಲಿ ಕರ್ನಾಟಕ ಪೊಲೀಸರು ಅಕ್ರಮ ಕೂಟ ಸೇರುವಿಕೆ ರಾಷ್ಟ್ರದ್ರೋಹ ಎಂದು ಹೇಳಿ ಮೊಕದ್ದಮೆ ದಾಖಲಿಸಿರುವುದನ್ನು ಎಸ್ಎಫ್ಐ ಖಂಡಿಸಿದೆ ಎಂದರು.
ಕಾಶ್ಮೀರ ಈ ದೇಶದ ಭಾಗ. ಅಲ್ಲಿನ ಜನತೆಗೆ ದೇಶದ ಉಳಿದ ರಾಜ್ಯಗಳ ಪ್ರಜೆಗಳಂತೆ ತಮ್ಮ ಮೇಲಾದ ದೌರ್ಜನ್ಯವನ್ನು ಖಂಡಿಸುವ, ಪ್ರತಿಭಟಿಸುವ, ಧಿಕ್ಕಾರ ಕೂಗುವ ಎಲ್ಲ ಹಕ್ಕುಗಳಿವೆ ಎಂದ ಅವರು, ಕಾಶ್ಮೀರದ ಜನತೆಯ ಪರವಾಗಿ ಮಾನವ ಹಕ್ಕು ಸಂಘಟನೆಗಳು ಸಭೆ ನಡೆಸುವುದು ಸಂತ್ರಸ್ತರು ಸೇನೆಯ ವಿರುದ್ಧ ಘೋಷಣೆ ಕೂಗುವುದು ಕಾನೂನಾತ್ಮಕವಾಗಿ ನೈತಿಕವಾಗಿ ಯಾವ ಅಪರಾಧವೂ ಅಲ್ಲ. ಕಾಶ್ಮೀರದಲ್ಲಿ ಪಿಡಿಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಪಕ್ಷದ ವಿರುದ್ಧ ಎಬಿವಿಪಿ ದೇಶದ್ರೋಹದ ಕೇಸ್ ದಾಖಲಿಸಿ ಪ್ರತಿಭಟನೆ ನಡೆಸಲಿ ಎಂದು ಸವಾಲು ಹಾಕಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಕೆ.ವೆಂಕಟೇಶ್, ಮುಖಂಡರಾದ ವೇಗಾನಂದ್, ಶೃತಿ ನೆಲಮಾಕನಳ್ಳಿ, ತೇಜಸ್ವಿನಿ, ದಿಲೀಪ್, ಮುರಳಿ, ಹರಿಪ್ರಸಾದ್, ವೇಣುಗೋಪಾಲ್, ಶಿವಕುಮಾರ ಸೇರಿ ಪ್ರಮುಖರು ಹಾಜರಿದ್ದರು. ಇದೇ ವೇಳೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಎಬಿವಿಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.







