ದಿಲ್ಲಿಯಲ್ಲಿ ಬೃಹತ್ ಸಮಾವೇಶ ನಡೆಸಲು ಸಜ್ಜಾದ ದಲಿತರು
ಗೋರಕ್ಷಕರ ದೌರ್ಜನ್ಯದ ವಿರುದ್ಧ ರಣಕಹಳೆ
ಹೊಸದಿಲ್ಲಿ, ಆ.19: ಗುಜರಾತ್ ದಲಿತ ಚಳವಳಿಯ ಹುಮ್ಮಸ್ಸನ್ನು ಮುಂದುವರಿಸಿಕೊಂಡು ಹೋಗಲು ದಲಿತ ಸಂಘಟನೆಗಳು ನಿರ್ಧರಿಸಿದ್ದು, ಸಂಸತ್ ಚಳಿಗಾಲದ ಅಧಿವೇಶನ ವೇಳೆ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ನಡೆಸಲು ನಿರ್ಧರಿಸಿವೆ. ಮೋದಿ ಸರಕಾರದ ನೀತಿಗಳಿಗೆ ಸವಾಲಾಗಿ ಈ ರ್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಗುಜರಾತ್ನ ಉನಾ ಘಟನೆಯ ಬಳಿಕ ಹುಟ್ಟಿಕೊಂಡ ಹೊಸ ದಲಿತ ಚಳವಳಿಗೆ ವ್ಯಕ್ತವಾಗಿರುವ ಅಭೂತಪೂರ್ವ ಬೆಂಬಲದ ಹಿನ್ನೆಲೆಯಲ್ಲಿ ಇತರ ರಾಜ್ಯಗಳಲ್ಲೂ ದಲಿತರ ವಿರುದ್ಧದ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ದಲಿತ ಸಂಘಟನೆಗಳು ಮುಂದಾಗಿವೆ. ಆಗಸ್ಟ್ನಿಂದ ಡಿಸೆಂಬರ್ ಒಳಗಾಗಿ ಗುಜರಾತ್, ಉತ್ತರ ಪ್ರದೇಶ, ದಿಲ್ಲಿ, ಹರ್ಯಾಣ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಹಾಗೂ ಒಡಿಶಾದಲ್ಲಿ ಇಂಥ ರ್ಯಾಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇದಕ್ಕೆ ರಾಜಕೀಯ ನೇತಾರರನ್ನೂ ಆಹ್ವಾನಿಸಿ, ರಾಷ್ಟ್ರೀಯ ಸಂಪನ್ಮೂಲಗಳ ಸಮಾನ ಪಾಲಿಗೆ ಸಂಬಂಧಿಸಿದಂತೆ ತಮ್ಮ ಬೇಡಿಕೆಗಳನ್ನು ಬೆಂಬಲಿಸುವಂತೆ ಮನವಿ ಮಾಡಲಾಗುವುದು. ಜತೆಗೆ ಇದು ದಲಿತರ ವಿರುದ್ಧದ ಹಿಂಸಾಚಾರ ಹಾಗೂ ತಾರತಮ್ಯವನ್ನು ಪ್ರತಿಭಟಿಸುವ ರ್ಯಾಲಿಯಾಗಿರುತ್ತದೆ.
ಗಾಂಧಿ ಹಾಗೂ ಅಂಬೇಡ್ಕರ್ ನಡುವೆ ಆಗಿರುವ ಪುಣೆ ಒಪ್ಪಂದ ಈಗ ಅಪ್ರಸ್ತುತವಾಗಿರುವ ಹಿನ್ನೆಲೆಯಲ್ಲಿ ಹೊಸ ಒಪ್ಪಂದಕ್ಕೆ ಈಗ ಸಕಾಲ ಎಂದು ದಲಿತ ಚಳವಳಿಗಾರ, ರಾಷ್ಟ್ರೀಯ ದಲಿತ ಹಾಗೂ ಆದಿವಾಸಿ ಸಂಘಟನೆಗಳ ಒಕ್ಕೂಟದ ಅಶೋಕ್ ಭಾರತಿ ಹೇಳುತ್ತಾರೆ. ಪುಣೆ ಒಪ್ಪಂದ ದಲಿತರ ರಾಜಕೀಯ ಹಕ್ಕುಗಳಿಗೆ ಸೀಮಿತ. ಆದರೆ ನಾವು ಸಮಾಜದ ಎಲ್ಲ ವಲಯಗಳಲ್ಲೂ ಇದನ್ನು ಬಯಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಈ ರ್ಯಾಲಿಗಳ ಮೂಲಕ ಸುಮಾರು 10 ಲಕ್ಷ ದಲಿತರನ್ನು ಸಂಘಟಿಸುವ ಉದ್ದೇಶವಿದೆ ಎಂದು ಸಂಘಟಕರು ಹೇಳಿದ್ದಾರೆ.