ಸಂಘಪರಿವಾರದಿಂದ ಮತೀಯ ವಿಭಜನೆಗೆ ಪ್ರಯತ್ನ: ಸಚಿವ ರೈ
![ಸಂಘಪರಿವಾರದಿಂದ ಮತೀಯ ವಿಭಜನೆಗೆ ಪ್ರಯತ್ನ: ಸಚಿವ ರೈ ಸಂಘಪರಿವಾರದಿಂದ ಮತೀಯ ವಿಭಜನೆಗೆ ಪ್ರಯತ್ನ: ಸಚಿವ ರೈ](https://www.varthabharati.in/sites/default/files/images/articles/2016/08/20/PicsArt_08-20-10.36.jpg)
ಮಂಗಳೂರು, ಆ.20: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಯನ್ನು ಇಂದು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ರಾಜೀವ್ ಗಾಂಧಿ ಮತ್ತು ದೇವರಾಜ್ ಅರಸು ಅವರ ಭಾವಚಿತ್ರಕ್ಕೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂಪರ್ಕ ಜಾಲವನ್ನು ಅಭಿವೃದ್ಧಿ ಪಡಿಸಿದವರು, ಪಂಚಾಯತ್ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ತಂದ ರಾಜೀವ್ ಗಾಂಧಿ ನಮಗೆಲ್ಲರಿಗೂ ಆದರ್ಶ ಪ್ರಾಯವಾದವರು. ಅವರು ದೂರದೃಷ್ಠಿ ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರನ್ನು ಸಣ್ಣ ಪ್ರಾಯದಲ್ಲಿ ಕಳೆದುಕೊಂಡಿರುವುದು ದೇಶಕ್ಕೆ ದೊಡ್ದ ನಷ್ಟ ಎಂದು ಹೇಳಿದರು.
ದೇವರಾಜ ಅರಸು ಅವರು ಭೂಮಸೂದೆ ಕಾನೂನು ಜಾರಿಗೆ ತಂದ ದಿಟ್ಟತನವನ್ನು ನಾವು ನೆನಪಿಸಬೇಕಾಗಿದೆ. ಅರಸು ಅವರ ಕಾಲದಲ್ಲಿ ಅತಿ ಹೆಚ್ಚು ಲಾಭ ಸಿಕ್ಕಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಎಂದು ಹೇಳಿದರು.
ಹಿಂದುಳಿದ ವರ್ಗದ ಹಿಂದೂಗಳಿಗೆ ಕಾಂಗ್ರೆಸ್ ಪಕ್ಷದಿಂದ ಬಹಳಷ್ಟು ಲಾಭವಾಗಿದೆ. ಆದರೆ ಅದನ್ನು ಮರೆಮಾಚಲಾಗುತ್ತಿದೆ. ಜನರನ್ನು ಮತೀಯ ಕಾರಣದಿಂದ ವಿಭಜಿಸುವ ಪ್ರಯತ್ನ ಆಗುತ್ತಿದೆ. ಸಂಘಪರಿವಾರ ಇವತ್ತು ಹಿಂದುಳಿದ ವರ್ಗದವರ ಮನಸ್ಸನ್ನು ಹಾಳು ಮಾಡಿದೆ. ಅಲ್ಪಸಂಖ್ಯಾತ, ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದವರು ಇದೀಗ ಹಿಂದುಳಿದ ವರ್ಗದವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ದುರ್ಬಲ ವರ್ಗದವರ ಪರ ಕೆಲಸ ಮಾಡಿದವರು ದೇವರಾಜ ಅರಸು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಂಗಾಮಿ ಜಿಲ್ಲಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮನಪ ಸಚೇತಕ ಶಶಿಧರ್ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ಸುಧೀರ್ ಟಿ.ಕೆ., ನಝೀರ್ ಬಜಾಲ್, ಪದ್ಮನಾಭ ನರಿಂಗಾನ, ಅಶ್ರಫ್, ಸಂತೋಷ್ ಶೆಟ್ಟಿ, ಫಾರುಕ್ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.